ಭಾರತದಲ್ಲಿ ಇರುವವರೆಲ್ಲರೂ ಹಿಂದೂಗಳೇ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ನವದೆಹಲಿ, ಸೆಪ್ಟೆಂಬರ್ 19: ಭಾರತದಲ್ಲಿರುವ ಪ್ರತಿಯೊಬ್ಬರೂ ಗುರುತಿನ ವಿಚಾರದಲ್ಲಿ ಹಿಂದೂಗಳೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಆರ್ಎಸ್ಎಸ್ ದೆಹಲಿಯಲ್ಲಿ ಆಯೋಜಿಸಿದ್ದ ಉಪನ್ಯಾಸ ಸರಣಿಯ ಮೂರನೇ ದಿನ ಮಾತನಾಡಿದ ಅವರು, ಹಿಂದೂಯಿಸಂ, ಶಿಕ್ಷಣ ಮತ್ತು ಜಾತಿ ಕುರಿತ ಆರ್ಎಸ್ಎಸ್ನ ದೃಷ್ಟಿಕೋನವನ್ನು ವಿವರಿಸಿದರು.
ಭಾರತೀಯ ಅಥವಾ ಹಿಂದುತ್ವ ಸಿದ್ಧಾಂತವು ಇತರೆ ಸಿದ್ಧಾಂತಗಳೊಂದಿಗೆ ಹೊಂದಿಕೊಳ್ಳುತ್ತದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬನೂ ಕೂಡ ಹಿಂದು. ಇದು ಅವರ ಗುರುತಿನ ವಿಚಾರದಲ್ಲಿಯೂ ಹೌದು ಮತ್ತು ರಾಷ್ಟ್ರೀಯತೆಯ ವಿಚಾರದಲ್ಲಿಯೂ ಹೌದು ಎಂದು ಭಾಗವತ್ ಹೇಳಿದರು.

'ಹಿಂದೂಯಿಸಂ' ಎನ್ನುವುದು ತಪ್ಪು ಪದ. ಇಸಂ ಎನ್ನುವುದು ಮುಗಿದ ವಿಚಾರ. ಹಿಂದುತ್ವ, ಹಿಂದುನೆಸ್ ಯಾವುದೇ 'ಇಸಂ' ಅಲ್ಲ, ಆದರೆ ಒಂದು ಕ್ರಿಯಾತ್ಮಕ ಪ್ರಕ್ರಿಯೆ.
ಸತ್ಯದ ಕೊನೆಯಿಲ್ಲದ ಹುಡುಕಾಟವೇ ಹಿಂದುತ್ವ ಎಂದು ಗಾಂಧೀಜಿ ಹೇಳಿದ್ದರು. ಹಿಂದುತ್ವ ಎನ್ನುವುದು ಒಂದು ನಿರಂತರ ಪ್ರಕ್ರಿಯೆ ಎಂದು ಎಸ್. ರಾಧಾಕೃಷ್ಣನ್ ಹೇಳಿದ್ದರು ಎಂದರು.
ಗೋವಿನ ಹೆಸರಿನಲ್ಲಿ ಹಿಂಸಾಚಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಗೋವಿನ ವಿಚಾರ ಮಾತ್ರವಲ್ಲ, ಯಾವುದೇ ವಿಚಾರದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು ಮತ್ತು ಅಪರಾಧ. ಅದಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದರೆ, ಗೋವು ಭಕ್ತಿಯ ವಿಚಾರಕ್ಕೆ ಸಂಬಂಧಿಸಿದ್ದು ಎಂದು ಹೇಳಿದರು.
ಹಿಂದುತ್ವದ ವಿರುದ್ಧ ಯಾವುದೇ ಆಕ್ರೋಶವಿಲ್ಲ. ಅದನ್ನು ಜಗತ್ತಿನಾದ್ಯಂತ ಒಪ್ಪಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಮಹಿಳೆಯರು ಸುರಕ್ಷಿತ ಮತ್ತು ಭದ್ರತೆಯ ಭಾವದಲ್ಲಿ ಇರುವಂತಹ ವಾತಾವರಣ ಸೃಷ್ಟಿಸಬೇಕು ಎಂದ ಅವರು, ಪುರುಷರು ಮಹಿಳೆಯರನ್ನು ಗೌರವಿಸುವುದನ್ನು ಕಲಿತುಕೊಳ್ಳಬೇಕು ಎಂದು ತಿಳಿಸಿದರು.
ಎಲ್ಜಿಬಿಟಿ ಸಮುದಾಯ ಸಮಾಜದ ಭಾಗ. ಅವರನ್ನು ಪ್ರತ್ಯೇಕಿಸಬಾರದು. ಆದರೆ, ಇದೇ ಸಂದರ್ಭದಲ್ಲಿ ಬಹುಮುಖ್ಯವಾಗಿ ಚರ್ಚೆಗೆ ಒಳಗಾಗಬೇಕಿರುವುದು ಸಲಿಂಗ ಕಾಮಿಗಳ ಸಮಸ್ಯೆ ಮಾತ್ರವಲ್ಲ. ಸಮಯ ಬದಲಾಗುತ್ತಿರುತ್ತದೆ. ಅಂತಹ ವಿಚಾರಗಳ ಕುರಿತು ಸಮಾಜ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಭಾಗವತ್ ಹೇಳಿದರು.












Click it and Unblock the Notifications