ವಾಯುಪಡೆ ಮುಖ್ಯಸ್ಥರ ಮೇಲೆ ಮೊಯ್ಲಿ 'ರಫೇಲ್' ದಾಳಿ
ನವದೆಹಲಿ, ಡಿಸೆಂಬರ್ 21: "ರಫೇಲ್ ಡಿಲ್ ಗೆ ಸಂಬಂಧಿಸಿದಂತೆ ತನಿಖೆಯ ಅಗತ್ಯವಿಲ್ಲ ಎಂದ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ" ಎಂದ ವಾಯುಪಡೆ ಮುಖ್ಯಸ್ಥ ಬಿ ಎಸ್ ಧಾನೋವಾ ಅವರ ಮೇಲೆ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ವಾಕ್ಪ್ರಹಾರ ನಡೆಸಿದ್ದಾರೆ.
"ರಫೇಲ್ ಬಗ್ಗೆ ಧಾನೋವಾ ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ರಫೇಲ್ ಯುದ್ಧ ವಿಮಾನ ಡಿಲ್ ಅನ್ನು ಅಂತಿಮಗೊಳಿಸುವ ಒಂದು ದಿನ ಮೊದಲು ಧಾನೋವಾ ಬೆಂಗಳೂರಿನ ಎಚ್ ಎ ಎಲ್ ಗೆ ಆಗಮಿಸಿದ್ದರು. ಅದೂ ಅಲ್ಲದೆ, ಧಾನೋವಾ ಅವರೊಂದಿಗೆ ಡಸಾಲ್ಟ್ ಕಂಪನಿಯ ಮುಖ್ಯಸ್ಥರೂ ಜೊತೆಯಾಗಿದ್ದರು" ಎಂಬ ಅಂಶವನ್ನು ಮೊಯ್ಲಿ ಹೊರಹಾಕಿದರು.
ಸುಪ್ರೀಂ ಕೋರ್ಟ್ ತೀರ್ಪನ್ನು ಸರಿ ಎನ್ನುವ ಧಾನೋವಾ ನಿಲುವು ಸರಿಯಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ. ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ದೂರಿದರು.

ಫ್ರಾನಸ್ ನೊಂದಿಗೆ ಭಾರತ ಮಾಡಿಕೊಂಡ ಯುದ್ಧ ವಿಮಾನ ಖರೀದಿ ಒಪ್ಪಂದವಾದ ರಫೇಲ್ ಡೀಲ್ ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸೇರಿದಂತೆ ಇತರ ವಿಪಕ್ಷಗಳು ದೂರಿದ್ದವು. ಸುಪ್ರೀಂ ಕೋರ್ಟ್ ಅಂಗಳದಲ್ಲಿ ಈ ಕುರಿತಂತೆ ಹಲವು ಅರ್ಜಿಗಳು ಬಂದಿದ್ದವು.
ಆದರೆ ಈ ಕುರಿತುವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಫೇಲ್ ಡೀಲ್ ನಲ್ಲಿ ಅವ್ಯವಹಾರವಾದ ಕುರಿತು ಸಾಕ್ಷ್ಯಗಳಿಲ್ಲ, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಗೌಪ್ಯ ವಿಷಯಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ, ಎಂದು ಎಲ್ಲಾ ಅರ್ಜಿಗಳನ್ನೂ ವಜಾಗೊಳಿಸಿತ್ತು.
ಈ ಬೆಳವಣಿಗೆಯನ್ನು ಸ್ವಾಗತಿಸಿದ್ದ ಧಾನೋವಾ, 'ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳ ಅನಿವಾರ್ಯತೆ ಇದೆ. ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ಸ್ವಾಗತಾರ್ಹ' ಎಂದಿದ್ದರು.












Click it and Unblock the Notifications