ಜಿಹಾದಿ ಬರಹ ಅಳಿಸಿದ 32 ವೆಬ್ ತಾಣ ಅನ್ಬ್ಲಾಕ್
ನವದೆಹಲಿ, ಜ. 10: ಕರ್ನಾಟಕದಲ್ಲಿ ಮೆಹದಿ ಮಸ್ರೂರ್ ಬಿಸ್ವಾಸ್ ಟ್ವಿಟ್ಟರ್ ಮೂಲಕ ಐಎಸ್ಐಎಸ್ ಪರ ಉಗ್ರವಾದ ಹರಡುತ್ತಿದ್ದ ವಿಷಯ ಹೊರಬಂದ ನಂತರ ಜಿಹಾದ್ ಸಂದೇಶ ಹೊಂದಿದ್ದ ಹಲವು ವೆಬ್ಸೈಟ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.
ಆದರೆ, ಈಗ ಈ ವೆಬ್ಸೈಟ್ಗಳು ಜಿಹಾದಿ ಸಂದೇಶಗಳನ್ನು ಅಳಿಸಿ ಹಾಕಿವೆ. ಇನ್ನು ಮುಂದೆ ಜಿಹಾದಿ ಬರಹಗಳು ಬರದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿವೆ. ಆದ್ದರಿಂದ ಅವುಗಳ ಮೇಲಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ತೆರವುಗೊಳಿಸಿದೆ. [ಇಂಟರ್ನೆಟ್ ಗೆ ಸೆನ್ಸಾರ್ ಸರಿಯೇ?]
ಈ ವೆಬ್ಸೈಟ್ಗಳು ಸರ್ಕಾರದ ಜೊತೆ ಸಹಕರಿಸುವುದಾಗಿ ತಿಳಿಸಿರುವ ಕಾರಣ ನಿಷೇಧ ತೆರವುಗೊಳಿಸಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ವರದಿಯ ಆಧಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಗೆ ಪೂರಕವಾಗಿ ಟೆಲಿಕಾಂ ವಿಭಾಗದ ಕಾಯ್ದೆ 69ಎ ಅನ್ವಯ 32 ವೆಬ್ಸೈಟ್ಗಳನ್ನು ಬ್ಲಾಕ್ ಮಾಡಲಾಗಿತ್ತು. [ವೆಬ್ ತಾಣಗಳಿಗೆ ಬೀಗ ಹಾಕಿದ್ದು ಏಕೆ?]
"ಭಯೋತ್ಪಾದನೆ ನಿಗ್ರಹ ತಂಡದ ಸಲಹೆ ಮೇರೆಗೆ ವೆಬ್ಸೈಟ್ಗಳನ್ನು ಬ್ಲಾಕ್ ಮಾಡಲಾಗಿದೆ. ಭಾರತ ವಿರೋಧಿ ಸಂದೇಶಗಳು ಬರದಂತೆ ತಡೆಯುವುದು ಈ ಕ್ರಮದ ಉದ್ದೇಶ" ಎಂದು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅರವಿಂದ್ ಗುಪ್ತ ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.