ತೆರಿಗೆ ವಿನಾಯಿತಿ ಮಿತಿ 2 ಲಕ್ಷಕ್ಕೆ ಏರಿಕೆ ಸಂಭವ
ನವದೆಹಲಿ, ಜೂ. 30 : ಸಂಬಳದಾರರಿಗೆ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದಿಂದ ವಿನಾಯಿತಿ ಮಿತಿಯನ್ನು 1 ಲಕ್ಷ ರು.ನಿಂದ 2 ಲಕ್ಷ ರು.ವರೆಗೆ ಏರಿಸುವ ಕುರಿತು ಹಣಕಾಸು ಇಲಾಖೆ ಚಿಂತಿಸುತ್ತಿದೆ. ಇದು ಜಾರಿಯಾದರೆ ಸಂಬಳದಾರರು ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮಾಡಬಹುದು ಮತ್ತು ಆದಾಯ ತೆರಿಗೆಯನ್ನೂ ಉಳಿಸಬಹುದು.
ಹೂಡಿಕೆ ಮಿತಿ ಕೇವಲ 1 ಲಕ್ಷ ರು. ಇದ್ದಿದ್ದರಿಂದ ಹೆಚ್ಚಿನ ಉಳಿತಾಯ ಮಾಡಲಾಗದೆ ಆದಾಯ ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಂದಾಯ ಮಾಡುತ್ತಿದ್ದ, ಹಣದುಬ್ಬರದಿಂದ ತತ್ತರಿಸಿರುವ ಭಾರತದ ಸಂಬಳದಾರರು, 'ಸದ್ಯ ಸ್ವಲ್ಪವಾದರೂ ಉಳಿಸಬಹುದಲ್ಲ' ಎಂದು ನಿಟ್ಟುಸಿರು ಬಿಡಬಹುದು.
ಪ್ರಸ್ತುತ, ಆದಾಯ ತೆರಿಗೆ ಇಲಾಖೆಯ 80ಸಿ, 80ಸಿಸಿ ಮತ್ತು 80ಸಿಸಿಸಿ ಅಡಿಗಳಲ್ಲಿ ಹೂಡಿಕೆ ಮತ್ತು ವೆಚ್ಚವನ್ನು ಕೂಡಿಸಿ ವಿನಾಯಿತಿ ಮಿತಿಯನ್ನು 1 ಲಕ್ಷ ರು.ವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದರ ಹೊಡೆತ ಬೀಳುತ್ತಿದ್ದುದು ಮಧ್ಯಮವರ್ಗದ ಸಂಬಳದಾರರಿಗೆ.

ಜುಲೈ 10ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲಿರುವ 2014-15ನೇ ಸಾಲಿನ ಬಜೆಟ್ ನಲ್ಲಿ ಈ ಕುರಿತು ಅಂತಿಮ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಆದರೆ, ವಿನಾಯಿತಿ ಮಿತಿ ಏರಿಕೆಯಿಂದ ಆಗುವ ಸಾಧಕ ಬಾಧಕಗಳ ಬಗ್ಗೆ ಕಂದಾಯ ಇಲಾಖೆ ಚಿಂತನೆ ನಡೆಸಿದೆ.
ಹೂಡಿಕೆ ವಿನಾಯಿತಿ ಮಿತಿಯನ್ನು ಏರಿಸದಿದ್ದ ಕಾರಣ ಬ್ಯಾಂಕುಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಉಳಿತಾಯದ ಪ್ರಮಾಣ ಗಮನಾರ್ಹವಾಗಿ ಕುಸಿಯುತ್ತಿರುವ ಕಾರಣ ಈ ಸಂಸ್ಥೆಗಳು ವಿನಾಯಿತಿ ಮಿತಿಯನ್ನು 2 ಲಕ್ಷ ರು.ಗೆ ಏರಿಸಬೇಕೆಂದು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದವು.
ಜೀವವಿಮಾ ಪ್ರೀಮಿಯಂ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಎಂಪ್ಲಾಯೀ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ಸ್ ಸ್ಕೀಮ್, ಮನೆಸಾಲ ಬಡ್ಡಿ ಮರುಪಾವತಿ, ಐದು ವರ್ಷದ ವರೆಗಿನ ಬ್ಯಾಂಕ್ ಫಿಕ್ಸ್ಡ್ ಡೆಪಾಸಿಟ್, ಯುನಿಟ್ ಲಿಂಕ್ಡ್ ಹೂಡಿಕೆ ಯೋಜನೆ, ಮಕ್ಕಳ ಟ್ಯೂಷನ್ ಶುಲ್ಕ ಮುಂತಾದವು ಈ ಹೂಡಿಕೆಯ ಅಡಿಯಲ್ಲಿ ಬರುತ್ತವೆ.












Click it and Unblock the Notifications