ಬೇರೆಯವರ ಆಸ್ತಿಯನ್ನು ನಮ್ಮ ಆಸ್ತಿ ಎನ್ನುತ್ತಿದ್ದಾರೆ: ಡಿ.ಕೆ.ಸುರೇಶ್
Recommended Video
ನವದೆಹಲಿ, ಸೆಪ್ಟೆಂಬರ್ 17: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಅವರ ಸಹೋದರ ಡಿ.ಕೆ.ಸುರೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಇಡಿ ಅಧಿಕಾರಿಗಳು ಹೇಳಿದ್ದೆಲ್ಲವೂ ಸತ್ಯವಲ್ಲ' ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ಮೇಲೆ ಐಟಿ ದಾಳಿ ಆದಾಗ, ಬರೋಬ್ಬರಿ 77 ಮನೆಗಳ ಮೇಲೆ ದಾಳಿ ಮಾಡಲಾಗಿತ್ತು, ಅವರ ಎಲ್ಲ ಆಸ್ತಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದೆಲ್ಲವೂ ನಮ್ಮದೇ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
'ಆದರೆ ಆ ಎಲ್ಲ ಕುಟುಂಬಗಳು ತಮ್ಮ ತೆರಿಗೆ ಲೆಕ್ಕಾ ಸಲ್ಲಿಸುತ್ತಿದ್ದು, ಅಧಿಕಾರಿಗಳು ವಶಪಡಿಸಿಕೊಂಡಿರುವ ಆಸ್ತಿಯನ್ನು ಬಿಡುಗಡೆಗೆ ಕೋರಲಿದ್ದಾರೆ, ನಾವು ಸಹ ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿದ್ದೇವೆ' ಎಂದು ಹೇಳಿದರು.
'ಡಿಕೆಶಿ ಆದಾಯದ ಮೂಲದ ಬಗ್ಗೆ ಇತ್ತೀಚೆಗೆ ಚರ್ಚೆ ನಡೆಯುತ್ತಿದೆಯಂದು ಕೇಳಿದ್ದೇನೆ, ಆದರೆ ಸತತ 30 ವರ್ಷದಿಂದ ಅವರು ಸಾರ್ವಜನಿಕ ಜೀವನದಲ್ಲಿ ಇದ್ದಾರೆ. ಅವರು ಒಮ್ಮೆಲೆ ಹಣ ಸಂಪಾದನೆ ಮಾಡಿಲ್ಲ, ಹಂತ-ಹಂತವಾಗಿ ಮಾಡಿದ್ದಾರೆ' ಎಂದರು.

ಪ್ರತಿವರ್ಷ ಆದಾಯ ವಿವರ ಸಲ್ಲಿಸಿದ್ದೇವೆ : ಡಿ.ಕೆ.ಸುರೇಶ್
'ಸಂವಿಧಾನಕ್ಕೆ, ಕಾನೂನಿಗೆ ಬದ್ಧವಾಗಿಯೇ ನಾವುಗಳು ನಮ್ಮ ವ್ಯಾಪಾರ ವ್ಯವಹಾರ ಮಾಡಿದ್ದೇವೆ, ನಾವು ಸಹ ಇತರ ವ್ಯಾಪಾರಿಗಳಂತೆ ಒಡಂಬಡಿಕೆ, ಸಾಲ ಇನ್ನಿತರ ಮೂಲಗಳಿಂದ ಹಣ ಪಡೆದು ವ್ಯಾಪಾರ ಮಾಡಿ ಲಾಭ ಗಳಿಸಿದ್ದೇವೆ, ಎಲ್ಲದರ ಬಗ್ಗೆ ಪ್ರತಿ ವರ್ಷ ಆದಾಯ ವಿವರ ಸಲ್ಲಿಸಿದ್ದೇವೆ' ಎಂದು ಅವರು ಹೇಳಿದರು.

ನ್ಯಾಯಾಲಯದಲ್ಲಿ ಎಲ್ಲವನ್ನೂ ಪ್ರಶ್ನಿಸುತ್ತೇವೆ: ಡಿ.ಕೆ.ಸುರೇಶ್
'ಇಡಿ ಅಧಿಕಾರಿಗಳು ಮಾಡಿರುವ ಆರೋಪಗಳು ಸತ್ಯವಲ್ಲ, ನಾವು ಎಲ್ಲವನ್ನೂ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುತ್ತೇವೆ, ನಾವು ಕಾನೂನು ಬದ್ಧವಾಗಿದ್ದೇವೆ' ಎಂದು ಹೇಳಿದರು.

ನಾನೂ ಚರ್ಚೆಗೆ ಬರುತ್ತೇನೆ, ಆದರೆ ಇದು ಸಮಯವಲ್ಲ:ಸುರೇಶ್
'ನಮ್ಮ ಆದಾಯ, ವ್ಯಾಪಾರ ಮುಂತಾದ ವಿಷಯಗಳ ಬಗ್ಗೆ ಟಿವಿಗಳಲ್ಲಿ ಚರ್ಚೆಗಳು ನಡೆಯುತ್ತಿವೆ, ಆದರೆ ಮಾಧ್ಯಮಗಳು ಜನರ ದಿಕ್ಕು ತಪ್ಪಿಸುವುದು ಬೇಡ. ನಾನೂ ಬೇಕಾದರೆ ಚರ್ಚೆ ನಡೆಸುತ್ತೇನೆ, ಆದರೆ ಅದಕ್ಕೆ ಇದು ಸೂಕ್ತ ಸಮಯವಲ್ಲ' ಎಂದು ಡಿ.ಕೆ.ಸುರೇಶ್ ಹೇಳಿದರು.

ಡಿ.ಕೆ.ಶಿವಕುಮಾರ್ ಧನ್ಯವಾದಗಳನ್ನು ಹೇಳಿದ್ದಾರೆ: ಡಿ.ಕೆ.ಸುರೇಶ್
'ಎಲ್ಲರೂ ಶಾಂತಿ ಕಾಪಾಡುವಂತೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಗಾಗಿ ಪೂಜೆ ಮಾಡುತ್ತಿರುವವರು, ಪ್ರಾರ್ಥನೆ ಮಾಡುತ್ತಿರುವವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಯಾರೂ ಸಹ ಡಿ.ಕೆ.ಶಿವಕುಮಾರ್ ಅವರಿಗಾಗಿ ದೆಹಲಿಗಾಗಿ ಬರುವುದು ಬೇಡ' ಎಂದು ಅವರು ಮನವಿ ಮಾಡಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದರು.












Click it and Unblock the Notifications