ಸುಷ್ಮಾ ಸ್ವರಾಜ್ಗೆ ಶಸ್ತ್ರಚಿಕಿತ್ಸೆ ಮಾಡೊಲ್ಲ ಎಂದಿದ್ದ ವೈದ್ಯರು: ಸತ್ಯ ಬಿಚ್ಚಿಟ್ಟ ಪತಿ
ನವದೆಹಲಿ, ನವೆಂಬರ್ 5: ಬಿಜೆಪಿಯ ನಾಯಕಿ, ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ವೈದ್ಯರು ಸಿದ್ಧರಿರಲಿಲ್ಲ ಎಂದು ಸುಷ್ಮಾ ಅವರ ಪತಿ ಸ್ವರಾಜ್ ಕೌಶಾಲ್ ಬಹಿರಂಗಪಡಿಸಿದ್ದಾರೆ.
ಮಿಜೋರಾಂನ ಮಾಜಿ ಗವರ್ನರ್ ಆಗಿರುವ ಸ್ವರಾಜ್ ಕೌಶಾಲ್, ಸರಣಿ ಟ್ವೀಟ್ಗಳಲ್ಲಿ ಸುಷ್ಮಾ ಅವರಿಗೆ ನಡೆಸಲಾಗಿದ್ದ ಶಸ್ತ್ರಚಿಕಿತ್ಸೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ಭಾರತದಲ್ಲಿ ಆಕೆಯ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಲು ಏಮ್ಸ್ ವೈದ್ಯರು ಸಿದ್ಧರಿರಲಿಲ್ಲ. ಆದರೆ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ನಿರಾಕರಿಸಿದ್ದ ಸುಷ್ಮಾ, ಇಲ್ಲಿಯೇ ಚಿಕಿತ್ಸೆ ಪಡೆಯುವುದು ರಾಷ್ಟ್ರೀಯ ಹೆಮ್ಮೆ ಎಂದು ಹೇಳಿದ್ದರು. ವಿದೇಶಕ್ಕೆ ತೆರಳಿದರೆ ವೈದ್ಯರು ಮತ್ತು ಆಸ್ಪತ್ರೆಗಳ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಳ್ಳುತ್ತಾರೆ ಎಂದಿದ್ದರು' ಎಂದು ಸ್ವರಾಜ್ ನೆನಪಿಸಿಕೊಂಡಿದ್ದಾರೆ.

ಕೃಷ್ಣ ಪರಮಾತ್ಮನೇ ನಡೆಸುತ್ತಾನೆ
'ತಮ್ಮ ಸರ್ಜರಿಯ ದಿನಾಂಕವನ್ನು ತಾವೇ ನಿಗದಿಪಡಿಸಿದ್ದರು. ಡಾ. ಮುಕುಟ್ ಮಿನ್ಜ್ ಅವರಿಗೆ, ಡಾಕ್ಟರ್ ಸಾಹೇಬರೇ ಉಪಕರಣಗಳನ್ನು ನೀವು ಹಿಡಿದುಕೊಳ್ಳಿ. ನನ್ನ ಶಸ್ತ್ರಚಿಕಿತ್ಸೆಯನ್ನು ಕೃಷ್ಣ ಪರಮಾತ್ಮನೇ ನಡೆಸುತ್ತಾನೆ ಎಂದು ಹೇಳಿದ್ದರು' ಎಂಬುದಾಗಿ ಸ್ವರಾಜ್ ತಿಳಿಸಿದ್ದಾರೆ.

ಏಮ್ಸ್ ಸಿಬ್ಬಂದಿಗೆ ಶ್ರೇಯಸ್ಸು
'ಒಂದು ದಿನದ ನಂತರವಷ್ಟೇ ಅವರು ಆರಾಮ ಕುರ್ಚಿಯಲ್ಲಿ ನಗುತ್ತಾ ಕುಳಿತಿದ್ದರು. ತಮಗೆ ನಡೆದ ಶಸ್ತ್ರಚಿಕಿತ್ಸೆಯನ್ನು ಸಣ್ಣ ಚಿಕಿತ್ಸೆಯಂತೆ ಪರಿಗಣಿಸಿದ್ದರು. ಎಲ್ಲ ಶ್ರೇಯಸ್ಸನ್ನು ಜಗತ್ತಿನ ಅತ್ಯುತ್ತಮರಾದ ಏಮ್ಸ್ ವೈದ್ಯರು, ದಾದಿಯರು ಮತ್ತು ಸಿಬ್ಬಂದಿಗೆ ನೀಡಿದ್ದರು' ಎಂದು ಸ್ಮರಿಸಿಕೊಂಡಿದ್ದಾರೆ.

ಮೋದಿಗೆ ಅವರಿಗೆ ಕೃತಜ್ಞತೆ
ಸುಷ್ಮಾ ಸ್ವರಾಜ್ ಅವರ ಚಿಕಿತ್ಸೆಗೆ ಸಹಾಯ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಡ ಸ್ವರಾಜ್ ಕೃತಜ್ಞತೆ ಸಲ್ಲಿಸಿದ್ದಾರೆ. ಅವರ ಸಹಾಯಕ್ಕೆ ಧನ್ಯವಾದ ಅರ್ಪಿಸಲು ತಮ್ಮ ಕುಟುಂಬದ ಬಳಿ ಪದಗಳಿಲ್ಲ ಎಂದು ಹೇಳಿದ್ದಾರೆ.
'ಸುಷ್ಮಾ ಸ್ವರಾಜ್ ಅವರ ಚಿಕಿತ್ಸೆಗೆ ಎಲ್ಲ ರೀತಿಯ ಸಹಾಯ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ನಮ್ಮ ಕುಟುಂಬದ ಬಳಿ ಪದಗಳಿಲ್ಲ. ಅವರು ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಆಕೆಯ ಆರೋಗ್ಯ ಮಹತ್ವದ್ದಾಗಿದ್ದರಿಂದ ಆಯಾಸ ಪಡದಂತೆ ಸದಾ ಸಲಹೆ ನೀಡುತ್ತಿದ್ದರು. ಬಾನ್ಸುರಿ (ಮಗಳು) ಮತ್ತು ನಾನು ಅವರಿಗೆ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ' ಎಂದಿದ್ದಾರೆ.

ಪ್ರಧಾನಿಗೆ ಮೀಸಲಾಗಿದ್ದ ಜಾಗ
'ಪ್ರಧಾನಿಗೆ ಮೀಸಲಾದ ಆಸ್ಪತ್ರೆಯ ವಿಭಾಗವನ್ನು ಪ್ರಧಾನಿಯವರು ನಮಗಾಗಿ ಒದಗಿಸಿದ್ದರು. ಅಲ್ಲಿ ಮಾಡಲು ಇನ್ನೇನೂ ಉಳಿದಿರಲಿಲ್ಲ ಮತ್ತು ಮಾಡದೆ ಇರುವುದು ಏನೂ ಇರಲಿಲ್ಲ. ಅದರ ಪರಿಣಾಮವಾಗಿ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡು ಕೆಲಸಕ್ಕೆ ಮರಳಿದ್ದರು. ಧನ್ಯವಾದ, ಧನ್ಯವಾದ, ಧನ್ಯವಾದ ಪ್ರಧಾನಿಯವರೇ' ಎಂದು ಬರೆದಿದ್ದಾರೆ.

ನಮ್ಮ ವೈದ್ಯರನ್ನು ನಂಬಬೇಕು
ನಾವು ನಮ್ಮ ವೈದ್ಯರನ್ನು ನಂಬಬೇಕು. ಈ ಯಾವ ವಿಚಾರಣಾ ಆಯೋಗಗಳನ್ನು ನಾವು ಹೊಂದಬಾರದು. ಇವು ನಮ್ಮ ಬುದ್ಧಿವಂತ ವೈದ್ಯರು ವಿಐಪಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಹಿಂಜರಿಯುವಂತೆ ಮಾಡುತ್ತದೆ. ಏಮ್ಸ್ನ ನಮ್ಮ ವೈದ್ಯರಿಗೆ ವಂದನೆ ಸಲ್ಲಿಸುತ್ತೇನೆ. ಅವರ ಬದ್ಧತೆ ಮತ್ತು ಸ್ಪರ್ಧಾತ್ಮಕತೆಗೆ ಸಾಟಿಯಿಲ್ಲ ಎಂದು ಪ್ರಶಂಸಿಸಿದ್ದಾರೆ.












Click it and Unblock the Notifications