ಸಂಪುಟಕ್ಕೆ ಡಿಕೆಶಿ ಇನ್? ಹಾಗಿದ್ರೆ ಯಾರು ಔಟ್!
ನವದೆಹಲಿ, ನ.9 : "ಕೆಲವು ದಿನಗಳಲ್ಲಿ ರಾಜಕೀಯ ಸುದ್ದಿ ಕೊಡುತ್ತೇನೆ" ಎಂದು ಗುರುವಾರ ಹೇಳಿದ್ದ ಕಾಂಗ್ರೆಸ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ದೆಹಲಿ ವಿಮಾನ ಏರಿರುವುದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ. ಚಳಿಗಾಲದ ಅಧಿವೇಶನದ ಮೊದಲು ಸಿದ್ದರಾಮಯ್ಯ ಸಂಪುಟದಲ್ಲಿ ಶಿವಕುಮಾರ್ ಸಚಿವರಾಗುವುದು ಖಚಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಕನಕಪುರ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಶನಿವಾರ ದೆಹಲಿ ತಲುಪಿದ್ದಾರೆ. ಹೈ ಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಿ, ಸಚಿವ ಸ್ಥಾನ ಪಡೆಯಲು ಅವರು ಯತ್ನ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸಿಎಂ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಮಾಡುವುದಿಲ್ಲ. ತಮ್ಮ ಸಂಪುಟದಲ್ಲಿ ಒಬ್ಬರು ಸಚಿವರನ್ನು ಕೈ ಬಿಟ್ಟು ಶಿವಕುಮಾರ ಅವರಿಗೆ ದಾರಿ ಮಾಡಿಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಪ್ರತಿಪ್ಷಕಗಳ ಕೆಂಗಣ್ಣಿಗೆ ಗುರಿಯಾಗಿರುವ ಸಂತೋಷ್ ಲಾಡ್ ಸಂಪುಟದಿಂದ ಹೊರಬರಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಬೆಳಗಾವಿಯಲ್ಲಿ ನ.25ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮೊದಲು ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದೆ. ತಮ್ಮ ವಿರುದ್ಧ ಇರುವ ಆರೋಪಗಳು ನಿರಾಧಾರ ಎಂದು ವಿವರಣೆ ನೀಡಿ ಶಿವಕುಮಾರ್, ಹೈ ಕಮಾಂಡ್ ನಾಯಕರ ಮನವೊಲಿಸಿ ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ, ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ರಾಜ್ಯಪಾಲ ಎಚ್.ಆರ್.ಭರದ್ವಾಜ್ ಎಲ್ಲರೂ ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರಕ್ಕೆ ಮುಜುಗರ ಉಂಟುಮಾಡಬಹುದು ಎಂದು ಅರಿತಿರುವ ಸಿದ್ದರಾಮಯ್ಯ. ಸಂತೋಷ್ ಲಾಡ್ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಕರೆತರಲು ಒಪ್ಪಿಗೆ ನೀಡಿದ್ದಾರೆಯೇ ಎಂಬ ಕುತೂಹಲ ಮೂಡಿದೆ. (ರಾಜಭವನದಲ್ಲೂ ಲಾಡ್ ಸಮರ್ಥಿಸಿಕೊಂಡ ಸಿದ್ದರಾಮಯ್ಯ!)












Click it and Unblock the Notifications