ಅನರ್ಹ ಶಾಸಕರ ವಿಚಾರಣೆ ಮುಂದೂಡಿಕೆ ರದ್ದು ಮಾಡಿದ ಸುಪ್ರೀಂ
ನವದೆಹಲಿ, ಅಕ್ಟೋಬರ್ 21: ಅನರ್ಹ ಶಾಸಕರ ಪ್ರಕರಣ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಯೇ (ಅಕ್ಟೋಬರ್ 22) ಕೈಗೆತ್ತಿಕೊಳ್ಳಲಿದೆ.
ವಕೀಲ ಕಪಿಲ್ ಸಿಬಲ್ ಮನವಿಯ ಮೇರೆಗೆ ನಾಳೆ (ಅಕ್ಟೋಬರ್ 22) ನಡೆಯಬೇಕಿದ್ದ ವಿಚಾರಣೆಯನ್ನು ಬುಧವಾರ (ಅಕ್ಟೋಬರ್ 23) ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಮತ್ತೆ ನಿರ್ಣಯ ಬದಲಾಯಿಸಲಾಗಿದ್ದು ನಾಳೆಯೇ ಅನರ್ಹ ಶಾಸಕರ ಪ್ರಕರಣ ವಿಚಾರಣೆ ನಡೆಯಲಿದೆ.
ಕಾಂಗ್ರೆಸ್ ಪರ ವಾದಿಸುತ್ತಿರುವ ವಕೀಲ ಕಪಿಲ್ ಸಿಬಲ್ ಅವರು, ನಾಳೆಗೆ ನಿಗದಿಗೊಳಿಸಲಾಗಿದ್ದ ಅನರ್ಹ ಶಾಸಕರ ಪ್ರಕರಣವನ್ನು ಒಂದು ವಾರ ಮುಂದೂಡುವಂತೆ ಮನವಿ ಮಾಡಿದ್ದರು, ಆದರೆ ಇದಕ್ಕೆ ಒಪ್ಪದ ಸುಪ್ರೀಂಕೋರ್ಟ್ ಒಂದು ದಿನವಷ್ಟೆ ಮುಂದೂಡಿತ್ತು.

ಆದರೆ ಚುನಾವಣೆ ಆಯೋಗ ಸುಪ್ರೀಂಕೋರ್ಟ್ ಮನವಿ ಮಾಡಿದ್ದು, ನಾಳೆಯೇ ವಿಚಾರಣೆ ನಡೆಸುವಂತೆ ಕೋರಿತ್ತು. ಆಯೋಗದ ಮನವಿಗೆ ಒಪ್ಪಿದ ಸುಪ್ರೀಂಕೋರ್ಟ್ ನಾಳೆಯೇ ವಿಚಾರಣೆ ನಡೆಸಲಿದೆ.
ಸೆಪ್ಟೆಂಬರ್ 17 ರಂದು ಅನರ್ಹ ಶಾಸಕರ ಪ್ರಕರಣ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 22 ಕ್ಕೆ ಮುಂದೂಡಿತ್ತು. ಅದೇ ದಿನ ಉಪಚುನಾಚಣೆಯನ್ನೂ ತಾತ್ಕಾಲಿಕವಾಗಿ ರದ್ದು ಮಾಡಿತ್ತು.
ಪಕ್ಷಾಂತರ ತಡೆ ಕಾಯ್ದೆ ಅಡಿ 17 ಶಾಸಕರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ತಮ್ಮ ಮೇಲೆ ಹೇರಲಾದ ಅನರ್ಹತೆಯನ್ನು ಪ್ರಶ್ನಿಸಿ 17 ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.












Click it and Unblock the Notifications