ನವದೆಹಲಿ ಆಸ್ಪತ್ರೆಗಳಲ್ಲಿ ಸ್ಥಳೀಯ ರೋಗಿಗಳಿಗಷ್ಟೇ 'ಬೆಡ್' ವ್ಯವಸ್ಥೆ!
ನವದೆಹಲಿ, ಜೂನ್.07: ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ರಾಷ್ಟ್ರ ರಾಜಧಾನಿಯ ಆಸ್ಪತ್ರೆಗಳಲ್ಲೇ ಬೆಡ್ ವ್ಯವಸ್ಥೆಯಿಲ್ಲ ಎನ್ನುವುದು ತೀವ್ರ ವಿವಾದವನ್ನು ಹುಟ್ಟು ಹಾಕಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿನ ಸಂಪೂರ್ಣ ಬೆಡ್ ಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾವಾರು ಬೆಡ್ ಗಳನ್ನು ನವದೆಹಲಿಯ ನಿವಾಸಿಗಳಿಗೆ ಮೀಸಲು ಇರಿಸಲಾಗಿದೆ. ನವದೆಹಲಿಯ ಪ್ರಜೆಗಳಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದರೆ, ಅಂಥವರಿಗೆ ಚಿಕಿತ್ಸೆ ನೀಡುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.
'ದೆಹಲಿ ಕೊರೊನಾ' ಅಪ್ಲಿಕೇಷನ್ನಲ್ಲಿ ಮಾತ್ರ ಹಾಸಿಗೆ ಲಭ್ಯ, ಆಸ್ಪತ್ರೆಯಲ್ಲಿಲ್ಲ
ನವದೆಹಲಿ ಸರ್ಕಾರದ ಅಧೀನದ ಆಸ್ಪತ್ರೆಗಳಲ್ಲಿರುವ 10,000 ಬೆಡ್ ಗಳನ್ನು ಸ್ಥಳೀಯ ಕೊರೊನಾ ವೈರಸ್ ಸೋಂಕಿತರಿಗಾಗಿ ಮೀಸಲು ಇರಿಸಲು ಸರ್ಕಾರ ತೀರ್ಮಾನಿಸಿದೆ. ಕೇಂದ್ರದ ಅಧೀನದಲ್ಲಿರುವ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊರಗಿನ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅವಕಾಶವಿದೆ. ಜೂನ್.08ರಿಂದ ನವದೆಹಲಿಯ ಗಡಿ ಪ್ರದೇಶಗಳು ಸಂಚಾರ ಮುಕ್ತಗೊಳ್ಳಲಿವೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸಾವಿರ ಸಾವಿರ ಜನರಿಗೆ ಕೊವಿಡ್-19
ಕಳೆದ ವಾರ ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಪ್ರತಿನಿತ್ಯ ಕನಿಷ್ಠ 1,000 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ಪತ್ತೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆಯು 27,000ದ ಗಡಿ ದಾಟಿದೆ. ಮಹಾಮಾರಿಗೆ 761ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದರೆ, 27,654 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. 10,664 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದರೆ, 16,229 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಜೂನ್ ತಿಂಗಳ ಅಂತ್ಯದ ಲೆಕ್ಕಾಚಾರ ಹಾಕಿದ ವೈದ್ಯರ ಕಮಿಟಿ
ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಏರಿಕೆಯಾಗುತ್ತಿದ್ದು, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎನ್ನುವುದನ್ನು ಅಧ್ಯಯನ ನಡೆಸಲು ಐವರು ವೈದ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಜೂನ್ ತಿಂಗಳ ಅಂತ್ಯಕ್ಕೆ ನವದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಕನಿಷ್ಠ 15,000 ಬೆಡ್ ಗಳ ಅಗತ್ಯವಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ಸದ್ಯದ ಮಟ್ಟಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ 9,000 ಬೆಡ್ ಗಳ ಸೌಲಭ್ಯವಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ನವದೆಹಲಿ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲು ಮನವಿ
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಚಿಕಿತ್ಸೆಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿಯನ್ನು ನೀಡಬೇಕು. ಕನಿಷ್ಠ ಕೊರೊನಾ ವೈರಸ್ ಬಿಕ್ಕಟ್ಟು ನಿವಾರಣೆ ಆಗುವವರೆಗೆ ನವದೆಹಲಿಯ ಸ್ಥಳೀಯರಲ್ಲಿ ಸೋಂಕು ಕಾಣಿಸಿಕೊಂಡಲ್ಲಿ ಅವರ ಚಿಕಿತ್ಸೆಗೆ ಬೆಡ್ ಗಳನ್ನು ಮೀಸಲು ಇರಿಸುವಂತೆ ಜನರು ಮನವಿ ಮಾಡಿಕೊಂಡಿದ್ದರು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಸಿಎಂ ಕೇಜ್ರಿವಾಲ್ ತೀರ್ಮಾನಕ್ಕೆ ಕೇಂದ್ರ ಸಚಿವರು ಕೆಂಡ
ನವದೆಹಲಿ ಆಸ್ಪತ್ರೆಗಳಲ್ಲಿನ ಬೆಡ್ ಗಳನ್ನು ಸ್ಥಳೀಯ ಪ್ರಜೆಗಳಿಗಷ್ಟೇ ಮೀಸಲುಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಪ್ರಶ್ನಿಸಿದ್ದಾರೆ. ಮುಂಬೈನಲ್ಲಿ ಆಸ್ಪತ್ರೆಗಳಲ್ಲಿ ಮುಂಬೈ ಪ್ರಜೆಗಳ ಚಿಕಿತ್ಸೆ ಮಾತ್ರ ಮೀಸಲು ಇರಿಸುವುದು, ಕೋಲ್ಕತ್ತಾದಲ್ಲಿನ ಆಸ್ಪತ್ರೆಗಳಲ್ಲಿ ಕೋಲ್ಕತ್ತಾದ ನಿವಾಸಿಗಳಿಗೆ ಚಿಕಿತ್ಸೆ ಮಾತ್ರ ಮೀಸಲು ಇರಿಸಿದರೆ ಹೇಗೆ ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ನವದೆಹಲಿಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಆಗಮಿಸುವ ಜನರಿಗೆ ಪಾಸ್ ಪೋರ್ಟ್ ಮತ್ತು ವೀಸಾ ತರಬೇಕಾಗುತ್ತದೆಯೋ ಏನೋ ಎಂದು ಲೇವಡಿ ಮಾಡಿದ್ದಾರೆ.