ಅಲಹಾಬಾದ್ HC ಜಡ್ಜ್ ಅನ್ನು ಕಿತ್ತುಹಾಕಿ: ಪ್ರಧಾನಿಗೆ ಸಿಜೆಐ ಪತ್ರ
ನವದೆಹಲಿ, ಜೂನ್ 25: ದುರ್ನಡತೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ನ ನ್ಯಾಯಾಧೀಶ ನ್ಯಾ. ಎಸ್ ಎನ್ ಶುಕ್ಲಾ ಅವರನ್ನು ಆ ಹುದ್ದೆಯಿಂದ ಕಿತ್ತುಹಾಕುವಂತೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮೆಡಿಕಲ್ ಕಾಲೇಜ್ ವೊಂದರ ಪ್ರವೇಶಾತಿ ಹಗರಣದಲ್ಲಿ ಶುಕ್ಲಾ ಅವರ ಹೆಸರು ಕೇಳಿಬಂದಿತ್ತು. ಎಸ್ ಎನ್ ಶುಕ್ಲಾ ಅವರ ವಿರುದ್ಧ ಕೇಳಿಬಂದ ಆರೋಪದ ತನಿಖೆಗಾಗಿ ಜನವರಿ 2018 ರಲ್ಲಿ ಮದ್ರಾಸ್ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ, ಸಿಕ್ಕಿಂ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಕೆ ಅಗ್ನಿಹೋತ್ರಿ ಮತ್ತು ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪಿಕೆ ಜೈಸ್ವಾಲ್ ಅವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಶುಕ್ಲಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ನಂತರ ಸುಪ್ರೀಂ ಕೋರ್ಟ್ ನ ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು 'ರಾಜೀನಾಮೆ ನೀಡಿ, ಇಲ್ಲವೇ ಕಡ್ಡಾಯ ನಿವೃತ್ತಿ ಪಡೆಯಿರಿ' ಎಂದು ಶುಕ್ಲಾ ಅವರಿಗೆ ಆದೇಶಿಸಿದ್ದರು.
ಆದರೆ ಅವರು ಇದುವರೆಗೂ ಸೇವೆಯಲ್ಲೇ ಇರುವುದರಿಂದ ಅವರನ್ನು ಕಿತ್ತು ಹಾಕುವಂತೆ ಮತ್ತು, ಅವರು ಯಾವುದೇ ಹೈಕೋರ್ಟ್ ನಲ್ಲಿ ಕೆಲಸ ಮಾಡದಂತೆ ಆದೇಶಿಸುವಂತೆ, ಅಗತ್ಯವಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿಗಳಿಗೆ ಸಿಜೆಐ ಪತ್ರದಲ್ಲಿ ತಿಳಿಸಿದ್ದಾರೆ.

2005 ರಲ್ಲಿ ಅಲಹಾಬಾದ್ ಹೈಕೋರ್ಟಿನ ನ್ಯಾಯಾಧೀಶರಾಗಿದ್ದ ಎಸ್ ಎನ್ ಶುಕ್ಲಾ ಅವರ ಸೇವಾವಧಿ 2020 ರಲ್ಲಿ ಮುಕ್ತಾಯವಾಗಬೇಕಿತ್ತು.
ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವಂತೆ ಮತ್ತು ಹೈಕೋರ್ಟ್ ನ್ಯಾಯಾಧೀಶರ ನಿವೃತ್ತಿ ವಯಸ್ಸು ಹೆಚ್ಚಿಸುವಂತೆ ಕೋರಿಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಂಜನ್ ಗೊಗೊಯ್ ಪತ್ರ ಬರೆದಿದ್ದರು.












Click it and Unblock the Notifications