ರೈತರ ಜತೆ ಕೇಂದ್ರ ಸರ್ಕಾರದ ಸಭೆ ವಿಫಲ: ಗುರುವಾರ ಮತ್ತೆ ಮಾತುಕತೆ
ನವದೆಹಲಿ, ಡಿಸೆಂಬರ್ 1: ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ರೈತ ಸಂಘಟನೆಗಳ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆ. ಇದರಿಂದ ಮಂಗಳವಾರ ಮಧ್ಯಾಹ್ನದ ಬಳಿಕ ನಡೆದ ಸಭೆ ಯಾವುದೇ ಫಲಿತಾಂಶ ಸಿಗದೆ ಅಂತ್ಯಗೊಂಡಿದೆ.
ಈಗ ಸಮಿತಿ ರಚಿಸಲು ಸಮಯವಲ್ಲ ಎಂದು ರೈತ ಸಂಘಟನೆಗಳು ಕೇಂದ್ರದ ಮೂವರು ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಡಿದ ಪ್ರಸ್ತಾಪವನ್ನು ತಿರಸ್ಕರಿಸಿವೆ. ಹಾಗೆಯೇ ಗುರುವಾರ ಮತ್ತೊಂದು ಸಭೆಯನ್ನು ನಿಗದಿಗೊಳಿಸಲಾಗಿದ್ದು, ಅಲ್ಲಿಯವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿವೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮತ್ತಷ್ಟು ರೈತರು ಮತ್ತು ಜಾತಿ ಸಂಘಟನೆಗಳು ಪಂಜಾಬ್ ಹಾಗೂ ಹರಿಯಾಣದಿಂದ ದೆಹಲಿಯತ್ತ ತೆರಳುತ್ತಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದರೆ.

ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಮಿತಿ ರಚನೆಯ ಪ್ರಸ್ತಾಪ ಮುಂದಿರಿಸಿದರು. ತಮ್ಮ ಪ್ರತಿನಿಧಿಗಳ ಹೆಸರನ್ನು ರೈತರೇ ನೀಡಲಿ. ಇದರಲ್ಲಿ ಸರ್ಕಾರದ ಅಧಿಕಾರಿಗಳು, ಕೃಷಿ ಪರಿಣತರು ಇರಲಿದ್ದು, ಕೃಷಿ ಕಾಯ್ದೆಯ ಕುರಿತು ಚರ್ಚಿಸಬಹುದು ಎಂದು ಹೇಳಿದರು.
'ನಾವು ವಿಶೇಷ ಸಮಿತಿ ರಚನೆ ಕುರಿತಾದ ಸರ್ಕಾರದ ಪ್ರಸ್ತಾಪವನ್ನು ಒಪ್ಪುವುದಿಲ್ಲ. ಕೃಷಿ ಸುಧಾರಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ. ಸರ್ಕಾರ ಬಲ ಪ್ರಯೋಗ ಮಾಡಿದರೂ ನಾವು ಹಿಂದೆ ಸರಿಯುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರಿಯಲಿದೆ' ಎಂದು ಕೃಷಿ ಸಂಘಟನೆಯೊಂದರ ಮುಖಂಡ ರೂಪ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications