ಸಿಬಿಐ ವಿವಾದದಲ್ಲಿ ಸರ್ಕಾರಕ್ಕೆ ತೀವ್ರ ಹಿನ್ನಡೆ: ಸುಪ್ರೀಂಕೋರ್ಟ್ ಹೇಳಿದ್ದೇನು?
ನವದೆಹಲಿ, ಜನವರಿ 8: ಸಿಬಿಐ ನಿರ್ದೇಶಕರು ಮತ್ತು ವಿಶೇಷ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ರಾತ್ರೋ ರಾತ್ರಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ನಲ್ಲಿ ಭಾರಿ ಮುಖಭಂಗ ಅನುಭವಿಸಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ನಿರ್ಧಾರವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಅಲ್ಲದೆ, ವರ್ಮಾ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಮರಳಿ ಕಳುಹಿಸುವಂತೆ ಮಂಗಳವಾರ ನೀಡಿದ ತೀರ್ಪಿನಲ್ಲಿ ಹೇಳಿದೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ನಡುವೆ ಲಂಚ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ತನಿಖಾ ಸಂಸ್ಥೆಯ ಮುಖ್ಯಸ್ಥರ ಕಿತ್ತಾಟ ಬಹಿರಂಗವಾಗಿತ್ತು.
LIVE: ಸಿಬಿಐ ಅಲೋಕ್ ವರ್ಮಾ ವಿವಾದ: ತೀರ್ಪಿನಲ್ಲಿ ಕೇಂದ್ರಕ್ಕೆ ಸುಪ್ರೀಂ ತರಾಟೆ
ಘಟನೆ ತಾರಕಕ್ಕೇರಿದ್ದರಿಂದ ಕೇಂದ್ರ ಸರ್ಕಾರ ಇಬ್ಬರನ್ನೂ ಕಡ್ಡಾಯ ರಜೆಯ ಮೇಲೆ ಕಳುಹಿಸಿ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ ರಾವ್ ಅವರನ್ನು ನೇಮಿಸಿತ್ತು. ಇದನ್ನು ಅಲೋಕ್ ವರ್ಮಾ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಗೊಗೊಯ್ ಗೈರು ಹಾಜರಿ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಗೈರು ಹಾಜರಿಯಲ್ಲಿ ನ್ಯಾಯಮೂರ್ತಿ ಎಸ್ ಕೆ ಕೌಲ್ ತೀರ್ಪು ಪ್ರಕಟಿಸಿದರು. ಈ ಪ್ರಕರಣವು ಸಿಬಿಐ ನಿರ್ದೇಶಕರ ಅಧಿಕಾರವನ್ನು ಮೊಟಕುಗೊಳಿಸಲು ಸರ್ಕಾರಕ್ಕೆ ಕಾನೂನಾತ್ಮಕ ಅಧಿಕಾರವಿದೆಯೇ ಅಥವಾ ಇಲ್ಲವೇ ಎಂಬುದರ ಸ್ಪಷ್ಟ ಪ್ರಶ್ನೆಯಾಗಿದೆ ಎಂದು ಎಂದು ಕೌಲ್ ಹೇಳಿದರು.
ಸಿಬಿಐ ವಿವಾದ: ರಾಕೇಶ್ ಅಸ್ಥಾನಾ ವಿರುದ್ಧದ ಕೇಸುಗಳೇ ನಾಪತ್ತೆ!
1997ರಲ್ಲಿ ಸಿಬಿಐ ನಿರ್ದೇಶಕರಾಗಿದ್ದ ವಿನೀತ್ ನಾರಾಯಣ್ ಎರಡು ವರ್ಷದ ಅಧಿಕಾರಾವಧಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಆದರೆ, ಆ ಪ್ರಕರಣದ ತೀರ್ಪನ್ನು ಇದಕ್ಕೆ ಅನ್ವಯಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿತು.
ಮರಳಿ ಸ್ಥಾನಕ್ಕೆ ನೇಮಕ
ಅಲೋಕ್ ವರ್ಮಾ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಸಾಧ್ಯವಿಲ್ಲ. ಅವರನ್ನು ಮರಳಿ ಆ ಸ್ಥಾನಕ್ಕೆ ನೇಮಿಸಬೇಕು. ಆದರೆ ಅವರು ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯು ನಿರ್ಧಾರ ತೆಗೆದುಕೊಳ್ಳುವವರೆಗೂ ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿ ಯಾವುದೇ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
ಸಿಬಿಐ ವಿವಾದ: ಇಷ್ಟು ದಿನ ಏನು ಮಾಡುತ್ತಿದ್ದಿರಿ? ಕೇಂದ್ರಕ್ಕೆ ಸುಪ್ರೀಂ ತರಾಟೆ
ವರ್ಗಾವಣೆ ಮಾಡಲು ಸಾಧ್ಯವಿಲ್ಲ
ಸಿಬಿಐ ನಿರ್ದೇಶಕರ ವಿರುದ್ಧ ಮಧ್ಯಂತರ ಕ್ರಮಗಳನ್ನು ತೆಗೆದುಕೊಳ್ಳಲು ಅನುಮತಿ ಇದೆಯೇ ಎಂಬುದನ್ನು ಕಾನೂನು ಪರಿಶೀಲಿಸಲಿದೆ. 'ವರ್ಗಾವಣೆ' ಎಂಬ ಪದಕ್ಕೆ ಅದರ ಸಾಮಾನ್ಯ ಅರ್ಥವನ್ನು ನೀಡಲು ಸಾಧ್ಯವಿಲ್ಲ. ಇದರಿಂದ ಸಿಬಿಐ ನಿರ್ದೆಶಕರ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ನಿರ್ಧಾರ ತೆಗೆದುಕೊಳ್ಳುವಂತಿಲ್ಲ
ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸುವ ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ) ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ (ಡಿಒಪಿಟಿ) ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಡಿಎಸ್ಪಿಇ ಕಾಯ್ದೆಯಡಿ ರಚಿಸಲಾದ ಉನ್ನತ ಅಧಿಕಾರದ ಸಮಿತಿ ಒಂದು ವಾರದ ಒಳಗೆ ವರ್ಮಾ ಅವರ ಪ್ರಕರಣವನ್ನು ಪರಿಗಣಿಸಬೇಕು. ಅಲ್ಲಿಯವರೆಗೂ ವರ್ಮಾ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ.
ಸಾರ್ವಜನಿಕ ಹಿತಾಸಕ್ತಿ ಮುಖ್ಯ
ಸಿಬಿಐ ನಿರ್ದೇಶಕರು ಸಂಸ್ಥೆಯ ಸ್ವಾತಂತ್ರ್ಯಕ್ಕೆ ಮಾದರಿಯಾಗಿರಬೇಕು. ಸಿಬಿಐನ ಸ್ವಾಯತ್ತತೆಗೆ ಸಾರ್ವಜನಿಕ ಹಿತಾಸಕ್ತಿ ಅತಿ ಮುಖ್ಯವಾಗಿರುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಸರ್ಕಾರವು ತಮ್ಮನ್ನು ಏಕಾಏಕಿ ಕಡ್ಡಾಯ ರಜೆಯ ಮೇಲೆ ಕಳುಹಿಸುವ ಬದಲು ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಆಯ್ಕೆ ಸಮಿತಿಯ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಿತ್ತು ಎಂದು ಅಲೋಕ್ ವರ್ಮಾ ಸುಪ್ರೀಂಕೋರ್ಟ್ನಲ್ಲಿ ವಾದಿಸಿದ್ದರು.
ಅಧಿಕಾರ ಇರುವುದು ಒಂದು ತಿಂಗಳು ಮಾತ್ರ
ಅಲೋಕ್ ವರ್ಮಾ ಅವರು ಕಾನೂನಾತ್ಮಕ ಹೋರಾಟ ನಡೆಸಿ ಮತ್ತೆ ಮುಖ್ಯಸ್ಥರಾಗಿ ಮರು ನೇಮಕವಾದರೂ ಒಂದು ತಿಂಗಳು ಮಾತ್ರ ಅಧಿಕಾರದಲ್ಲಿ ಇರಬಹುದು. ಫೆಬ್ರುವರಿಯಲ್ಲಿ ಅವರ ಅಧಿಕಾರ ಅಂತ್ಯಗೊಳ್ಳಲಿದೆ. ಭ್ರಷ್ಟಾಚಾರ ಆರೋಪ ಮತ್ತು ವಿಚಾರಣೆ ಎದುರಿಸುತ್ತಿರುವ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರು ಈ ಹುದ್ದೆಗೆ ಏರುವುದು ಕಷ್ಟವಾಗಲಿದೆ.
ಆಸ್ಥಾನ ಮಾಡಿದ ಆರೋಪವೇನು?
ಐಆರ್ಟಿಸಿಟಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಆಗಿನ ರೈಲ್ವೆ ಸಚಿವ, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರ ವಿರುದ್ಧದ ದಾಳಿಯನ್ನು ಸಿಬಿಐ ನಿರ್ದೇಶಕರು ತಡೆದಿದ್ದರು ಎಂಬುದಾಗಿ ರಾಕೇಶ್ ಅಸ್ಥಾನಾ ಸಿವಿಸಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿವಾದ ಮಂಡಿಸಿದ್ದ ಸಿಬಿಐ, ಐಆರ್ಸಿಟಿಸಿ ಪ್ರಕರಣವನ್ನು ಸುಪ್ರೀಂಕೋರ್ಟ್ ಮುಂದೆ ಎರಡು ಬಾರಿ ತರಲಾಗಿತ್ತು. ಆದರೆ ಅವುಗಳನ್ನು ವಜಾಗೊಳಿಸಲಾಗಿತ್ತು ಎಂದು ಹೇಳಿತ್ತು.