ಕಾವೇರಿ ತೀರ್ಪು ಅನುಷ್ಠಾನ: ಕೇಂದ್ರಕ್ಕೆ 2 ವಾರಗಳ ಕಾಲಾವಕಾಶ
ನವದೆಹಲಿ, ಮೇ 02: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸಲು ಕರಡು ತಯಾರಿಸುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಫೆ.16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಯಾವ ರೀತಿ ಅನುಷ್ಠಾನಗೊಳಿಸಬಹುದು ಎಂಬುದಕ್ಕೆ ಕರಡು ರಚಿಸಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ಏ.27 ರಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟಿಗೆ ಮನವಿ ಮಾಡಿತ್ತು.
ಹಲವು ವರ್ಷಗಳಿಂದ ವಿವಾದದ ಕೇಂದ್ರವಾಗಿದ್ದ, ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲವಿವಾದವನ್ನು ಸುಪ್ರೀಂ ಕೋರ್ಟ್ ಫೆ.16 ರಂದು ನೀಡಿದ ತೀರ್ಪಿನಲ್ಲಿ ಇತ್ಯರ್ಥಗೊಳಿಸಿತ್ತು. ಆದರೆ ಈ ತೀರ್ಪನ್ನು ಕರ್ನಾಟಕ ಸ್ವಾಗತಿಸಿದರೂ, ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು.

ಕರ್ನಾಟಕ ತಮಿಳುನಾಡಿಗೆ ಬಿಡುತ್ತಿದ್ದ 192 ಟಿಎಂಸಿ ಅಡಿ ನೀರನ್ನು ಕಡಿತಗೊಳಿಸಿ 177.75 ಟಿ.ಎಂಸಿ ಅಡಿ ನೀರನ್ನಷ್ಟೇ ಬಿಡಲು ಸುಪ್ರೀಂ ಆದೇಶಿಸಿತ್ತು. ಇದರಿಂದ ಕರ್ನಾಟಕ ಹೆಚ್ಚುವರಿ 14.25 ನೀರನ್ನು ಉಳಿಸಿಕೊಳ್ಳಬಹುದಾಗಿತ್ತು.
ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಕಾವೇರಿ ಜಲಮಂಡಳಿ ರಚನೆ ಮತ್ತು ತೀರ್ಪನ್ನು ಅನುಷ್ಠಾನಗೊಳಿಸುವುದು ಹೇಗೆ ಎಂಬ ಕುರಿತು ಕರಡು ರಚಿಸುವ ಕೆಲಸ ಕೇಂದ್ರ ಸರ್ಕಾರದ್ದು ಎಂದು ಸ್ಪಷ್ಟವಾಗಿ ಹೇಳಿತ್ತು.
ಆದರೆ ಮೇ 12 ರಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬೇಕೆಂದೇ ಕೇಂದ್ರ ಸರ್ಕಾರ ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.












Click it and Unblock the Notifications