ಹಣ ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಶಾಹಿ
ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳಲು ಯತ್ನಿಸುತ್ತಿರುವ ಕಾಳಧನಿಕರ ಮುಖಕ್ಕೆ ಮಸಿಬಳಿಯುವ ಮತ್ತೊಂದು ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ
ನವದೆಹಲಿ, ನವೆಂಬರ್, 15: ಕಪ್ಪು ಹಣ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರ ರೂ. 500 ಹಾಗೂ, ರೂ. 1000 ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ಪರಿಣಾಮ ಹಲವು ಮಂದಿ ಕಾಳಧನಿಕರು ವಾಮಮಾರ್ಗಗಳನ್ನು ಹುಡುಕುತ್ತಿದ್ದಾರೆ.
ಪರಿಚಯಸ್ಥ ವ್ಯಕ್ತಿಗಳ ಕೈಲಿ ಹಲವು ಬಾರಿ ಹಣಕೊಟ್ಟು ಬ್ಯಾಂಕ್ ಗಳಲ್ಲಿ ನೋಟು ಬದಲಾಯಿಸಿಕೊಂಡು ಆ ಮೂಲಕ ತಮ್ಮ ಕಪ್ಪು ಹಣವನ್ನು ಸಾಧ್ಯವಾದಷ್ಟು ಸಕ್ರಮ ಹಣವನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ. [ಕಪ್ಪುಹಣದ ತೆರಿಗೆ ಲೆಕ್ಕಾಚಾರ ಹೀಗಿದೆ ನೋಡಿ!]
ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹಣ ವಿನಿಮಯ ಮಾಡಿದವರ ಬೆರಳಿಗೆ ಶಾಹಿ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಚಾಪೆ ಕೆಳಗೆ ನುಸುಳಲು ಯತ್ನಿಸಿದ ಕಾಳಧನಿಕರ ಅತಿ ಬುದ್ಧಿವಂತಿಕೆಗೆ ಪೆಟ್ಟು ನೀಡುವಂತೆ ಕೇಂದ್ರ ಸರ್ಕಾರ ರಂಗೋಲಿ ಕೆಳಗೆ ನುಸುಳಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರು "ಇನ್ನು ಮುಂದೆ ಹಣ ವಿನಿಮಯ ಮಾಡುವ ವ್ಯಕ್ತಿಗಳ ಬೆರಳಿಗೆ ಮತದಾನ ಸಮಯದಲ್ಲಿ ಹಾಕುವಂತೆ ಶಾಹಿ ಹಾಕುವುದಾಗಿ ಮಂಗಳವಾರ ಘೋಷಿಸಿದರು.
ಈ ಕ್ರಮದಿಂದ ಎರಡೆರಡು ಮೂರು ಮೂರು ಬಾರಿ ಹಣ ವಿನಿಮಯ ಮಾಡಿಕೊಂಡು ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಲು ಯತ್ನಿಸುವ ಕಾಳಧನಿಕರಿಗೆ ತೀವ್ರ ಪೆಟ್ಟು ಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಲವು ಮಂದಿ ಕಾಳಧನಿಕರು ತಮ್ಮ ಪರಿಚಯಸ್ಥ ವ್ಯಕ್ತಿಗಳನ್ನು ಗುಂಪುಗುಂಪುಗಳಾಗಿ ಬ್ಯಾಂಕ್ ಗಳಿಗೆ ಕಳುಹಿಸಿ ಅಕ್ರಮವಾಗಿ ಸಂಪಾದಿಸಿರುವ ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳಲು ಪ್ರಯತ್ನಿಸಿರುವ ಮಾಹಿತಿಗಳು ನಮಗೆ ಬಂದಿವೆ. ಆದ್ದರಿಂದ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದರು.
ಕಾಳಧನಿಕರ ಬೆಂಬಲಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಗಳಲ್ಲಿ ಕ್ಯೂಕಟ್ಟಿ ನಿಲ್ಲುತ್ತಿದ್ದಾರೆ. ಇದರಿಂದಾಗಿ ಸಾಮನ್ಯ ಜನರು ಹೆಚ್ಚು ಹೊತ್ತು ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೆ ನಕಲಿ ನೋಟುಗಳನ್ನು ಪತ್ತೆ ಹಚ್ಚಲು ಹಲವು ಸೂಕ್ಷ್ಮ ಪ್ರದೇಶಗಳಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಉಪ್ಪಿನ ದರದಲ್ಲಿ ಏರಿಕೆ ಬಗ್ಗೆಯೂ ಮಾತನಾಡಿರುವ ಅವರು. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉಪ್ಪು ಲಭ್ಯವಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಕಿವಿಮಾತು ಹೇಳಿದರು.