'ಬಿಜೆಪಿಗೆ ಮತ ನೀಡಿ' ಎಂದ ಕೇಜ್ರಿವಾಲ್ ಗೆ ಮತ ಹಾಕಿದ ಜನ!
ನವದೆಹಲಿ, ಫೆಬ್ರವರಿ 11: ರಾಜಕೀಯ ಪಕ್ಷವೊಂದು ಹೇಗೆ ಪ್ರಚಾರ ಮಾಡಬೇಕು ಮತ್ತು ಹೇಗೆ ಮಾಡಬಾರದು ಎಂಬುದಕ್ಕೆ ಉದಾಹರಣೆ ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಮತ್ತು ಈಗ ಬಂದಿರುವ ಫಲಿತಾಂಶ.
ಬಿಜೆಪಿ ಪ್ರಚಾರವು ಸ್ಥಳೀಯ ವಿಷಯವನ್ನು ಬಿಟ್ಟು ಎಎಪಿ ಹಾಗೂ ಕೇಜ್ರಿವಾಲ್ ಅನ್ನು ದೂಷಿಸುವ, ಕೇಜ್ರಿವಾಲ್ ಅನ್ನು ಹಿಂದು ವಿರೋಧಿ, ದೇಶ ವಿರೋಧಿ ಎಂದು ಬಿಂಬಿಸುವ ಸತತ ಪ್ರಯತ್ನ ಮಾಡಿತು. ಸಿಎಂ ಕೇಜ್ರಿವಾಲ್ ಅನ್ನು ಭಯೋತ್ಪಾದಕ ಎಂದೂ ಕರೆಯಲಾಗಿತ್ತು.
ಆದರೆ ಕೇಜ್ರಿವಾಲ್ ಬಿಜೆಪಿಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಬಿಜೆಪಿ ತಮ್ಮ ವಿರುದ್ಧ ಮಾಡಿದ ಟೀಕೆಗಳೆದರ ಬಗ್ಗೆಯೂ ಜನರಿಂದ ಉತ್ತರ ಕೇಳಿದರು. 'ಅವರು ನನ್ನನ್ನು ಭಯೋತ್ಪಾದ ಎಂದಿದ್ದಾರೆ. ನಾನು ದಿಲ್ಲಿಯ ಮಗ ಎನಿಸಿದರೆ ನನಗೆ ಮತ ನೀಡಿ, ಭಯೋತ್ಪಾದಕ ಎನಿಸಿದರೆ ಬಿಜೆಪಿಗೆ ಮತ ನೀಡಿ' ಎಂದು ಕೇಜ್ರಿವಾಲ್ ಹೇಳಿದರು.

'ನಾನು ಮಾಡಿದ ಕೆಲಸ ತೃಪ್ತಿ ನೀಡಿದ್ದರೆ ನನಗೆ ಮತ ಹಾಕಿ ಇಲ್ಲವಾದರೆ ನನಗೆ ಮತ ಹಾಕಬೇಡಿ' ಎಂದು ಕೇಜ್ರಿವಾಲ್ ಹೇಳಿದರು. ಸಾಮಾನ್ಯ ರಾಜಕಾರಣಿ ಆಡುವ ಮಾತು ಅಲ್ಲವೇ ಅಲ್ಲ ಇದು. ನನಗೆ ಮತ ಹಾಕಬೇಡಿ ಎಂದು ಯಾವೊಬ್ಬ ರಾಜಕಾರಣಿ ಹೇಳಿದ್ದು ಮತದಾರರಿಗೆ ನೆನಪಿಲ್ಲ. ಆದರೆ ಅರವಿಂದ ಕೇಜ್ರಿವಾಲ್ ಹೀಗೆ ಹೇಳಿದರು.
ಬಿಜೆಪಿಯವರು ಎಷ್ಟೇ ಟೀಕಿಸಿದರು ಕೇಜ್ರಿವಾಲ್ ಅದರ ಉತ್ತರವನ್ನು ಜನರ ಬಳಿ ಕೇಳಿದರು. ಹೊರತಾಗಿ ಪ್ರತಿಯಾಗಿ ಟೀಕಿಸಲು ಅಥವಾ ಮೂದಲಿಸುವ ಪ್ರಯತ್ನ ಮಾಡಲೇ ಇಲ್ಲ. ಹಿಂದು ವಿರೋಧಿ ಎಂದು ಕರೆದಾಗ ವೇದಿಕೆ ಮೇಲೆ ಹನುಮಾನ ಚಾಲೀಸ ಹೇಳಿದರೇ ಹೊರತು, 'ನೀವು ಹಿಂದು ವಿರೋಧಿ, ನೀವು ಮುಸ್ಲಿಂ ವಿರೋಧಿ' ಎಂದು ತಿರುಗಿ ಬೀಳಲಿಲ್ಲ.
ಮತದಾರರನ್ನು ಓಲೈಸುವ ಪ್ರಯತ್ನವನ್ನು ಪ್ರಚಾರದಲ್ಲಿ ಕೇಜ್ರಿವಾಲ್ ಮಾಡಲೇ ಇಲ್ಲ. ಇಷ್ಟವಾದರೆ ಮತ ನೀಡಿ, ಇಲ್ಲವಾದರೆ ಬಿಜೆಪಿ ಗೆ ಮತ ನೀಡಿ ಎಂದೇ ಹೇಳಿದರು. ಆದರೆ ಕೇಜ್ರಿವಾಲ್ ಕೆಲಸ ದೆಹಲಿ ಜನರಿಗೆ ಇಷ್ಟವಾಗಿತ್ತು. ಅವರನ್ನು ಭಯೋತ್ಪಾದಕ ಎಂದವರನ್ನು ಸೋಲಿಸಿ ಕೇಜ್ರಿವಾಲ್ ಅನ್ನು ತಲೆಯ ಮೇಲೆ ಹೊತ್ತು ಮೆರೆಸಿದರು.












Click it and Unblock the Notifications