ದೇಶದ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಶಸ್ತಿ ವಾಪಸಿ : ಅನುಪಮ್ ಖೇರ್
ನವದೆಹಲಿ, ನವೆಂಬರ್ 07 : "ನಮ್ಮ ದೇಶ 'ಅಸಹಿಷ್ಣು' ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. 'ಹೆಚ್ಚುತ್ತಿರುವ ಅಸಹಿಷ್ಣುತೆ' ಎಂಬ ಪದವನ್ನು ಕೆಲವೇ ಕೆಲವು ಜನರು ಹುಟ್ಟುಹಾಕಿದ್ದಾರೆ. ಭಾರತದ ಪ್ರತಿಷ್ಠೆಗೆ ಮಸಿ ಬಳಿಯಲೆಂದೇ ಕೆಲವರು ಪ್ರಶಸ್ತಿ ವಾಪಸ್ ಮಾಡುತ್ತಿದ್ದಾರೆ" ಎಂದು ಹಿಂದಿ ಚಿತ್ರನಟ ಅನುಪಮ್ ಖೇರ್ ಕಿಡಿ ಕಾರಿದ್ದಾರೆ.
ಲೇಖಕರು, ದಲಿತರು, ಕೆಲ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿ, ದೇಶದಲ್ಲಿ 'ಅಸಹಿಷ್ಣುತೆ ಹೆಚ್ಚುತ್ತಿದೆ' ಎಂಬ ಕೂಗು ಎಬ್ಬಿಸಿ, ಸರಕಾರ ನೀಡಿರುವ ಪ್ರಶಸ್ತಿ ವಾಪಸ್ ಮಾಡುತ್ತ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧವೇ ಅನುಪಮ್ ಖೇರ್ ದನಿ ಎತ್ತಿದ್ದಾರೆ. ಈ ಹೋರಾಟ ಯಾವುದೇ ಪಕ್ಷದ ಪರವಲ್ಲ. ಭಾರತೀಯರು ಭಾರತೀಯರಿಗಾಗಿ ಮಾಡುತ್ತಿರುವ ಹೋರಾಟ ಎಂದು ಖೇರ್ ಹೇಳಿದರು.
ಶನಿವಾರ ಬೆಳಿಗ್ಗೆ ಅನುಪಮ್ ಖೇರ್ ಅವರು ಸಹಸ್ರಾರು ಜನರೊಂದಿಗೆ ರಾಷ್ಟ್ರಪತಿ ಭವನದವರೆಗೆ 'ಮಾರ್ಚ್ ಫಾರ್ ಇಂಡಿಯಾ' ಪಾದಯಾತ್ರೆ ನಡೆಸಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದರು. ಎರಡು ದಿನಗಳ ಹಿಂದೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದರು.
ಅನುಪಮ್ ಖೇರ್ ಅವರ ಜೊತೆ ಪಾದಯಾತ್ರೆಯಲ್ಲಿ ಖ್ಯಾತ ಕಲಾವಿದರಾದ ಪ್ರಿಯದರ್ಶನ್, ಮಧುರ್ ಭಂಡಾರ್ಕರ್, ಮನೋಜ್ ಜೋಶಿ, ಅಭಿಜಿತ್ ಭಟ್ಟಾಚಾರ್ಯ, ಅಶೋಕ್ ಪಂಡಿತ್, ಲೇಖಕಿ ಮಧು ಕಿಶ್ವರ್ ಅವರು ಭಾಗವಹಿಸಿದ್ದರು. ರಾಷ್ಟ್ರಪತಿಗೆ ಸಲ್ಲಿಸಿದ ಮನವಿಪತ್ರಕ್ಕೆ ನಟಿ ರವೀನಾ ಟಂಡನ್ ಸೇರಿದಂತೆ ಹಲವಾರು ಜನರು ಸಹಿ ಹಾಕಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ನರೇಂದ್ರ ಮೋದಿಯನ್ನು ಟೀಕಿಸುತ್ತಿದ್ದವರೇ 'ಹೆಚ್ಚುತ್ತಿರುವ ಅಸಹಿಷ್ಣುತೆ' ಎಂಬ ಬ್ಯಾನರ್ ಹಿಡಿದು ಪ್ರತಿಭಟನೆಗಿಳಿದಿದ್ದಾರೆ. ಇದು ಅವರು ಎತ್ತುತ್ತಿರುವ ಅಸಹಿಷ್ಣುತೆಯ ಪ್ರಶ್ನೆಯ ಮೇಲೆಯೇ ಪ್ರಶ್ನೆಗಳೇಳುವಂತೆ ಮಾಡಿದೆ ಎಂದು ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿರುವ ನಿರ್ದೇಶಕ ಮಧುರ್ ಭಂಡಾರ್ಕರ್ ಟೀಕಿಸಿದ್ದಾರೆ.
ಆದರೆ, ಈ ಅಭಿಯಾನದ ವಿರುದ್ಧವೇ ಅಪಸ್ವರಗಳು ಎದ್ದಿವೆ. ಇದರ ಬಗ್ಗೆ ಯಾರು ಯಾವ ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಮುಂದಿನ ಟ್ವೀಟುಗಳನ್ನು ನೋಡಿರಿ.
|
ಅನುಪಮ್ ಖೇರ್ ನುಡಿಗಳು
ತಾಯಿನಾಡಿನ ಮೇಲೆ ನಾವಿಟ್ಟ ನಂಬುಗೆಯನ್ನು ತೋರಿಸಲು ಈ ಯಾತ್ರೆ. ನಮ್ಮ ಸಹಿಷ್ಣುತೆ ಎಂತಹುದು ಎಂಬ ಬಗ್ಗೆ ಯಾರಿಂದಲೂ ನಮಗೆ ಸರ್ಟಿಫಿಕೇಟ್ ಬೇಕಿಲ್ಲ - ಅನುಪಮ್ ಖೇರ್.
|
ಕಥೆಯನ್ನು ಹೇಳುವ ಚಿತ್ರಗಳು
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅನುಪಮ್ ಖೇರ್ ನೀಡಿದ್ದ ಕರೆಗೆ ಓಗೊಟ್ಟು ಸಹಸ್ರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
|
ಟೋಟಲ್ ಫ್ಲಾಪ್ ಶೋ
ಖೇರ್ ನಡೆಸಿದ ಈ ಅಭಿಯಾನ ಟೋಟಲ್ ಫ್ಲಾಪ್ ಶೋ. ಪ್ರತಿಭಟನಾಕಾರರಿಗಿಂತ ಮಾಧ್ಯಮದವರೇ ಹೆಚ್ಚಿದ್ದರು ಅಂತಾರೆ ಒಬ್ಬರು.
|
ರಾಜದೀಪ್ ಟ್ವೀಟಿಗೆ ಪ್ರತ್ಯುತ್ತರ
'ಪತ್ರಕರ್ತರನ್ನು ಶೂ ತೆಗೆದುಕೊಂಡು ಹೊಡೆಯಿರಿ' ಎಂದು ರಾಜದೀಪ್ ಸರ್ದೇಸಾಯಿ ಮಾಡಿದ್ದ ಟ್ವೀಟಿಗೆ ಪ್ರತ್ಯುತ್ತರ.
|
ಎನ್ಡಿಟಿವಿ ವರದಿಗಾರ್ತಿಯ ಟ್ವೀಟುಗಳು...
ಪ್ರತಿಭಟನಾಕಾರರಿಂದ ಹಲ್ಲೆಗೊಳಗಾದ ಎನ್ಡಿಟಿವಿ ವರದಿಗಾರ್ತಿಯ ಟ್ವೀಟುಗಳು...
|
ಬೆಂಗಳೂರಿನಲ್ಲಿ ಖೇರ್ ಬೆಂಬಲಿಸಿ ಪ್ರತಿಭಟನೆ
ಅನುಪಮ್ ಖೇರ್ ಅವರ 'March For India' ಬೆಂಬಲಿಸಿ ಬೆಂಗಳೂರಿನಲ್ಲಿಯೂ ಹಲವಾರು ಕಲಾವಿದರು, ಸಾಹಿತಿಗಳು ಫ್ರೀಡಂ ಪಾರ್ಕಿನಲ್ಲಿ ಭಾಗವಹಿಸಿದ್ದರು.