ಸಮಸ್ತ ಭಾರತೀಯರಿಗೆ ಕಿರಣ್ ಬೇಡಿ ಬಹಿರಂಗ ಪತ್ರ
ನವದೆಹಲಿ, ಫೆ. 16: ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡು ಮುಖಭಂಗ ಅನುಭವಿಸಿರುವ ಒಂದು ಕಾಲದ ಸೂಪರ್ ಕಾಪ್ ಕಿರಣ್ ಬೇಡಿ ಈಗ ಭಾರತೀಯರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ತಮ್ಮ ಅಧಿಕೃತ ಬ್ಲಾಗ್ ಪುಟವಾದ 'Crane Bedi'ಯಲ್ಲಿ ಚುನಾವಣೆಗೆ ಸ್ಪರ್ಧಿಸಿದ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ತಾವು ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ ಎಂದು ಹೇಳಿಕೊಂಡಿದ್ದಾರೆ. [ಬೇಡಿ ಸಿಡಿಸಿದ ಹೊಸ ಬಾಂಬ್]
"ನಾನು ಚುನಾವಣೆಗೆ ಸ್ಪರ್ಧಿಸಿದ್ದು ಯಾವುದೇ ಸ್ಥಾನದ ಆಕಾಂಕ್ಷೆಯಿಂದಲ್ಲ. ಸುಮಾರು 40 ವರ್ಷಗಳಿಂದ ಆಶ್ರಯ ಪಡೆದಿರುವ ನಗರಕ್ಕೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದ್ದೆ. ಕೇಂದ್ರ ಸರ್ಕಾರದ ಸಹಾಯದೊಂದಿಗೆ ಸ್ಥಿರ ಸರ್ಕಾರ ನೀಡುವುದು ಹಾಗೂ ದೆಹಲಿಯ ಅಗತ್ಯಗಳನ್ನು ಪೂರೈಸುವುದು ನನ್ನ ಉದ್ದೇಶವಾಗಿತ್ತು" ಎಂದು ಹೇಳಿಕೊಂಡಿದ್ದಾರೆ. [ಬಿಜೆಪಿ ಮಾಡಿದ ದೊಡ್ಡ ತಪ್ಪು]
ಈಗ ಸಿಕ್ಕಿರುವ ಪರಿಣಾಮದಿಂದ ನಾನು ಮಾನಸಿಕವಾಗಿ ಕುಸಿದಿಲ್ಲ. ನನಗೆ ಸಿಕ್ಕ ಸಮಯಾವಕಾಶದಲ್ಲಿ ನನ್ನೆಲ್ಲ ಸಾಮರ್ಥ್ಯ ಹಾಗೂ ಅನುಭವವನ್ನು ಧಾರೆ ಎರೆದಿದ್ದೇನೆ. ಆದರೆ, ಈ ಶ್ರಮ ಸಾಕಾಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. [8 ವಿವಾದಗಳು]
ಪೊಲೀಸ್ ಅಧಿಕಾರಿಯಾಗಿದ್ದಾಗ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಹಲವು ಕಾರ್ಯಕ್ರಮಗಳಿಗೆ ರಕ್ಷಣೆ ನೀಡಿದ್ದೇನೆ. ಭಯೋತ್ಪಾದಕರನ್ನು ಹಿಡಿಯಲು ಶ್ರಮಪಟ್ಟಿದ್ದೇನೆ.
ಅತ್ಯಾಚಾರಗಳನ್ನು ತಡೆಯಲು ಹಲವು ಗ್ರಾಮಗಳಲ್ಲಿ ವಿವಿಧ ಕ್ರಮ ಕೈಗೊಂಡಿದ್ದೇನೆ. ಸಂಚಾರ ವ್ಯವಸ್ಥೆ ಸುಧಾರಿಸಲೂ ದುಡಿದಿದ್ದೇನೆ. ನಾನು ಕೈಗೊಂಡ ಹಲವು ಕ್ರಮಗಳು ಉತ್ತಮ ಪರಿಣಾಮ ಬೀರಿವೆ. [ಅಭಿವೃದ್ಧಿಗೆ ಬೇಡಿ ಸೂತ್ರ]
ಯಾವುದೇ ಆಸೆ ಈಡೇರಿಸಿಕೊಳ್ಳಲು ನಾನು ಹೀಗೆ ಮಾಡಿಲ್ಲ. ಸೇವೆಯ ಉದ್ದೇಶದಿಂದ ಸಮಯಕ್ಕೆ ತಕ್ಕಂತೆ ಕ್ರಮ ಕೈಗೊಂಡಿದ್ದೇನೆ. ಚುನಾವಣೆ ಕುರಿತು ಟೀಕೆ ಮಾಡಿರುವ ನನಗೆ ಅದನ್ನು ಎದುರಿಸುವುದು ಉದ್ದೇಶವಾಗಿತ್ತು ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.