ಎಎಪಿಗೆ ರಾಜೀನಾಮೆ ಸಲ್ಲಿಸಿ, ಪಕ್ಷ ತೊರೆದ ಶಾಸಕಿ ಅಲ್ಕಾ ಲಂಬಾ
ನವದೆಹಲಿ, ಆಗಸ್ಟ್ 04: ಲೋಕಸಭೆ ಚುನಾವಣೆ 2019 ವೇಳೆಯಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪರ ಪ್ರಚಾರ ಕೈಗೊಳ್ಳದ ಶಾಸಕಿ ಆಲ್ಕಾ ಲಂಬಾ ಅವರು ಪಕ್ಷ ತೊರೆಯುವ ಬಗ್ಗೆ ಸುಳಿವು ನೀಡಿದ್ದರು. ಭಾನುವಾರ(ಆಗಸ್ಟ್ 08)ದಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಪ್ರಾಥಮಿಕ ಸದಸ್ಯತ್ವಕ್ಕೆ ಅಲ್ಕಾ ರಾಜೀನಾಮೆ ಸಲ್ಲಿಸಿದ್ದಾರೆ.
ಚಾಂದಿನಿ ಚೌಕ್ ಕ್ಷೇತ್ರದ ಶಾಸಕಿ ಲಂಬಾ ಅವರು ರಾಜೀನಾಮೆ ಬಳಿಕ ಮಾತನಾಡಿ, "ನನ್ನ ಕ್ಷೇತ್ರದ ಜನತೆ ಜೊತೆ ಈ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆಸಿ, ತೀರ್ಮಾನ ಕೈಗೊಂಡಿದ್ದೇನೆ, ಎಎಪಿಯ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಳಾಗಿ, ಶಾಸಕಿಯಾಗಿ ಉಳಿಯುತ್ತೇನೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ" ಎಂದಿದ್ದಾರೆ.
"ನನ್ನ ಕ್ಷೇತ್ರದಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ, ಮೊಹಲ್ಲಾ ಕ್ಲಿನಿಕ್ ಸ್ಥಾಪನೆಗಾಗಿ ಮನವಿ ಸಲ್ಲಿಸಿದ್ದೇನೆ, ಈ ಬಗ್ಗೆ ನನ್ನ ಪ್ರಯತ್ನ ಮುಂದುವರೆಯಲಿದೆ" ಎಂದಿದ್ದಾರೆ.
ಎಎಪಿ ತೊರೆಯುವ ಸುಳಿವು ನೀಡಿದ ಶಾಸಕಿ ಅಲ್ಕಾ ಲಂಬಾ
"ಬಿಜೆಪಿಯನ್ನು ಆಡಳಿತದಿಂದ ದೂರ ಇಡಬಲ್ಲ ಪಕ್ಷ ಎಂದೆನಿಸಿದ್ದರಿಂದ ನಾನು ಎಎಪಿ ಸೇರಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಚಾಂದಿನಿ ಚೌಕ್ ಹಾಗೂ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಎಎಪಿ ಉದ್ದೇಶವೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಆಗಿದ್ದಲ್ಲಿ ನಾನು ಕಾಂಗ್ರೆಸ್ ಸೇರಿ ಅಧಿಕೃತವಾಗಿ ಮೂಲ ಉದ್ದೇಶದ ಪರ ಹೋರಾಟ ನಡೆಸುವುದರಲ್ಲಿ ತಪ್ಪೇನಿಲ್ಲ" ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು
ಎಎಪಿ ಮೂಲ ಸಿದ್ಧಾಂತದಿಂದ ಬಹು ದೂರ ಸಾಗಿದೆ
"ಆಮ್ ಆದ್ಮಿ ಪಕ್ಷವು ತನ್ನ ಮೂಲ ಸಿದ್ಧಾಂತದಿಂದ ಬಹು ದೂರ ಸಾಗಿದೆ. ಹೀಗಾಗಿ, ಪ್ರಶಾಂತ್ ಭೂಷಣ್, ಶಾಂತಿ ಭೂಷಣ್, ಯೋಗೇಂದ್ರ ಯಾದವ್, ಕುಮಾರ್ ವಿಶ್ವಾಸ್ ರಂಥವರು ಪಕ್ಷ ತೊರೆಯಬೇಕಾಯಿತು.ವೋಟ್ ಬ್ಯಾಂಕ್ ರಾಜಕೀಯ, ಅಧಿಕಾರ ದಾಹದಿಂದ ಎಎಪಿ ಬಳಲುತ್ತಿದೆ" ಎಂದು ಅಲ್ಕಾ ಲಂಬಾ ವಿಷಾದ ವ್ಯಕ್ತಪಡಿಸಿದರು.
2020ರಲ್ಲಿ ಆಮ್ ಆದ್ಮಿ ಪಕ್ಷ ಜೊತೆಗಿನ ಪಯಣ ಮುಗಿಯಲಿದೆ ಎಂದು ಮುಂಚೆ ಟ್ವೀಟ್ ಮಾಡಿ, ಪಕ್ಷ ಬಿಡುವ ಸೂಚನೆ ನೀಡಿದ್ದರು. ಅಲ್ಕಾ ಅವರನ್ನು ಪಕ್ಷದ ಅಧಿಕೃತ ವಾಟ್ಸಾಪ್ ಗ್ರೂಪಿನಿಂದ ತೆಗೆದು ಹಾಕಲಾಗಿತ್ತು. ಪಕ್ಷದಿಂದ ಹೊರ ಹಾಕುವಂತೆ ಒತ್ತಡ ಕೇಳಿ ಬಂದಿತ್ತು.
ಸ್ಥಳೀಯವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ
ದೆಹಲಿಯಲ್ಲದೆ, ಹರ್ಯಾಣ, ಪಂಜಾಬ್ ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಇನ್ನಿಲ್ಲದ್ದಂತೆ ಬೇಡಿದ ಎಎಪಿಯ ಹುಳುಕು ಎಲ್ಲರಿಗೂ ಗೊತ್ತಾಗಿದೆ ಎಂದು ಅಲ್ಕಾ ಹೇಳಿದ್ದಾರೆ. 2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಸ್ಥಳೀಯವಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಆದರೆ, ಶೀಲಾ ದೀಕ್ಷಿತ್ ಅವರು ಹಿಂತಿರುಗಿದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಎಪಿ ಮೈತ್ರಿ ಅಸಾಧ್ಯವಾಯಿತು.
ಲೋಕಸಭೆ ಚುನಾವಣೆ 2019ರಲ್ಲಿ 7ಕ್ಕೆ ಏಳು ಕ್ಷೇತ್ರಗಳಲ್ಲಿ ಕಳಪೆ ಸಾಧನೆ ಮಾಡಿದ ಎಎಪಿಯ ಸೋಲಿಗೆ ಯಾರು ಹೊಣೆ ಎಂದು ಅರವಿಂದ್ ಕೇಜ್ರಿವಾಲ್ ರನ್ನು ಅಲ್ಕಾ ಪ್ರಶ್ನಿಸಿದ್ದರು.
ಕರ್ನಾಟಕ ರಾಜಕೀಯ ಬಿಕ್ಕಟ್ಟು: ಮತ್ತೊಮ್ಮೆ ಜನಾದೇಶವೊಂದೇ ಉಪಾಯ
ಟ್ವೀಟ್ ವಾರ್ ಮುಂದುವರೆಸಿದ್ದ ಅಲ್ಕಾ
ಕಳೆದ ತಿಂಗಳು ಗ್ರೇಟರ್ ಕೈಲಾಶ್ ಕ್ಷೇತ್ರದ ಎಎಪಿ ಶಾಸಕ ಸೌರಭ್ಭಾರದ್ವಾಜ್ ಜೊತೆ ಅಲ್ಕಾ ಲಂಬಾ ಟ್ವೀಟ್ ವಾರ್ ನಡೆಸಿದ್ದರು. ನಂತರ ಲಂಬಾ ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಈ ಕುರಿತು ಮಾತನಾಡಿದ ಲಂಬಾ, "ಪಕ್ಷದ ನಾಯಕರು ಪದೇ ಪದೇ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಏನೇ ಆಗಿದ್ದರೂ ಪಕ್ಷ ಮತ್ತು ನನ್ನ ನಡುವೆ ಆಗಿದೆ. ನನ್ನ ಕ್ಷೇತ್ರದ ಜನರ ಕೈಯನ್ನು ನಾನು ಬಿಡುವುದಿಲ್ಲ. ಅವರಿಂದ ಆಯ್ಕೆಯಾಗಿರುವ ನಾನು ಅವರ ಒಳಿತಿಗೆ ಪ್ರಾರ್ಥಿಸುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ನಾನು ಗಮನ ಹರಿಸುತ್ತೇನೆ" ಎಂದಿದ್ದರು.
ಕಾಂಗ್ರೆಸ್ ಸೇರುವ ಇರಾದೆ ವ್ಯಕ್ತಪಡಿಸಿದ್ದರು.
ವಿದ್ಯಾರ್ಥಿ ಸಂಘಟನೆ ನಾಯಕಿಯಾಗಿ 90ರ ದಶಕದಲ್ಲಿ ಬೆಳೆದ ಲಂಬಾ ಅವರು 1995ರಲ್ಲಿ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆಯಾಗಿದ್ದರು. ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯುಐನ ಸಕ್ರಿಯ ಸದಸ್ಯರಾಗಿದ್ದ ಲಂಬಾ ಅವರು 2002ರಲ್ಲಿ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. "2013ರಿಂದ 2020 ರ ತನಕ ನನ್ನ ಪಯಣ ಆಶಾದಾಯಕವಾಗಿತ್ತು. ಎಲ್ಲಾ ಕ್ರಾಂತಿಕಾರಿ ಸಂಗಾತಿಗಳಿಗೆ ನನ್ನ ಅಭಿನಂದನೆಗಳು" ಎಂದಿದ್ದರು.