ಲೋಕಸಭೆ ಮೊದಲ ಅಧಿವೇಶನ ಜೂನ್ 4ರಿಂದ
ನವದೆಹಲಿ, ಮೇ 29 : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಹೊಸ ಸರ್ಕಾರದ ಮೊದಲ ಅಧಿವೇಶನ ಜೂನ್ 4ರಿಂದ 11ರವರೆಗೆ ನಡೆಯಲಿದೆ. ಜೂನ್ 9ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ನವದೆಹಲಿಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೊದಲ ಅಧಿವೇಶನ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ. ಜೂನ್ 4ರಿಂದ 11ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದರು.

ರಾಜ್ಯಸಭೆ ಅಧಿವೇಶನ ಜೂನ್ 9ರಂದು ಆರಂಭವಾಗಲಿದ್ದು, ಅಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಂಟಿ ಸದಸಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನೂತನ ಸದಸ್ಯರ ಪ್ರಮಾಣ ವಚನ ನಡೆಯಬೇಕಾಗಿರುವುದರಿಂದ ಲೋಕಸಭೆ ಕಲಾಪ 4ರಂದು ಆರಂಭವಾಗಲಿದೆ. [ಪಿಟಿಐ ಚಿತ್ರ]
ಜೂನ್ 4 ಮತ್ತು 5ರಂದು ನೂತನ ಸಂಸದರ ಪ್ರಮಾಣವಚನ ನಡೆಯಲಿದೆ. ಸ್ಪೀಕರ್ ಆಯ್ಕೆ ಪ್ರಕ್ರಿಯೆ ಜೂ.6ರಂದು ನಡೆಯಲಿದೆ. ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಜೂ.10 ಹಾಗೂ 11ರಂದು ನಡೆಯಲಿದೆ. ಉಪಸಭಾಪತಿ ಆಯ್ಕೆ ಬಗ್ಗೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. [ಕಮಲನಾಥ್ ಹಂಗಾಮಿ ಸ್ಪೀಕರ್]
ಕಮಲನಾಥ್ ಸ್ಪೀಕರ್ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಅಗಿ ನೇಮಿಸಲಾಗಿದೆ. ಹೊಸ ಸ್ಪೀಕರ್ ಆಯ್ಕೆ ಆಗುವವರೆಗೆ ಅವರು ಸದನವನ್ನು ಮುನ್ನಡೆಸಲಿದ್ದಾರೆ. ಈ ಅಧಿವೇಶನ ಮುಗಿದ ಬಳಿಕ ಜುಲೈನಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಲಿದೆ.












Click it and Unblock the Notifications