ಎನ್ಕೌಂಟರ್ನಲ್ಲಿ ಮುಗ್ಧರ ಹತ್ಯೆ: 23 ವರ್ಷದ ಬಳಿಕ ಜೈಲಿನಿಂದ ಬಿಡುಗಡೆಯಾದ 10 ಪೊಲೀಸರು
ನವದೆಹಲಿ, ಅಕ್ಟೋಬರ್ 26: ಸುಮಾರು 23 ವರ್ಷಗಳ ಹಿಂದೆ ನಡೆದ ಎನ್ಕೌಂಟರ್ ಪ್ರಕರಣದಲ್ಲಿ ಇಬ್ಬರು ಅಮಾಯಕರನ್ನು ಪ್ರಮಾದವಶಾತ್ ಹತ್ಯೆ ಮಾಡಿ ಜೈಲು ಪಾಲಾಗಿದ್ದ ಹತ್ತು ಮಂದಿ ಪೊಲೀಸರು ಶನಿವಾರ ಬಿಡುಗಡೆಯಾಗಿದ್ದಾರೆ.
ಮೊಹಮ್ಮದ್ ಯಾಸ್ನೀನ್ ಎಂಬ ಗ್ಯಾಂಗ್ಸ್ಟರ್ನನ್ನು ಗುರಿಯಾಗಿರಿಸಿ ಗುಂಡಿನ ದಾಳಿ ನಡೆಸಿದ್ದ ಹತ್ತು ಮಂದಿ ಪೊಲೀಸರು 1997ರ ಮಾರ್ಚ್ 31ರಂದು ಪ್ರದೀಪ್ ಗೋಯಲ್ ಮತ್ತು ಜಗಜೀತ್ ಸಿಂಗ್ ಎಂಬ ಇಬ್ಬರು ಅಮಾಯಕರ ಸಾವಿಗೆ ಕಾರಣರಾಗಿದ್ದರು. ದೆಹಲಿಯ ಕನ್ನಾಟ್ ಪ್ಲೇಸ್ ಪ್ರದೇಶದಲ್ಲಿ ನಡೆದಿದ್ದ ಘಟನೆಯಲ್ಲಿ ಕ್ರೈಂ ಬ್ರ್ಯಾಂಚ್ನ 10 ಪೊಲೀಸರು ಬರಖಾಂಬಾ ಕ್ರಾಸಿಂಗ್ ಬಳಿ ನೀಲಿ ಬಣ್ಣದ ಸೆಡಾನ್ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕಾರ್ನಲ್ಲಿದ್ದ ಮೂವರಲ್ಲಿ ಇಬ್ಬರು ಗುಂಡಿನ ದಾಳಿಗೆ ಬಲಿಯಾಗಿದ್ದರು.
ಈ ಪ್ರಕರಣದ ಕುರಿತು 2020ರ ಮಾರ್ಚ್ನಲ್ಲಿ ಶಿಕ್ಷೆ ಪರಾಮರ್ಶನಾ ಮಂಡಳಿಯು (ಎಸ್ಆರ್ಬಿ) ಬಿಡುಗಡೆಗಾಗಿ ಹತ್ತು ಪೊಲೀಸ್ ಅಧಿಕಾರಿಗಳ ಹೆಸರನ್ನು ಅವಿರೋಧವಾಗಿ ಶಿಫಾರಸು ಮಾಡಿತ್ತು. ಶುಕ್ರವಾರ ಕೇಂದ್ರ ಗೃಹ ಸಚಿವಾಲಯದ ಅನುಮೋದನೆಯೊಂದಿಗೆ ದೆಹಲಿ ಸರ್ಕಾರದ ಗೃಹ ಇಲಾಖೆಗೆ ಆದೇಶ ನೀಡಿತ್ತು. ಮುಂದೆ ಓದಿ.

ವಾಹನದಲ್ಲಿ ಶಸ್ತ್ರಾಸ್ತ್ರ ಇರಿಸಿದ್ದ ಪೊಲೀಸರು
ಈ ಪ್ರಕರಣ ಆ ಸಂದರ್ಭದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಅನೇಕ ಸಿನಿಮಾ ಹಾಗೂ ಸಾಕ್ಷ್ಯಚಿತ್ರಗಳಿಗೂ ಈ ಘಟನೆ ಕಥಾವಸ್ತುವಾಗಿತ್ತು. ಪೊಲೀಸರು ಈ ಪ್ರಕರಣದಲ್ಲಿ ಕ್ರೂರವಾಗಿ ನಡೆದುಕೊಂಡ ರೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ತಪ್ಪಾಗಿ ಬೇರೆ ವ್ಯಕ್ತಿಗಳನ್ನು ಕೊಂದಿರುವುದು ತಿಳಿದ ಬಳಿಕ ಪೊಲೀಸರು ಅವರ ವಾಹನದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಿ ಅವರನ್ನು ಅಪರಾಧಿಗಳು ಎಂಬಂತೆ ಬಿಂಬಿಸಿದ್ದರು.

ಸಿಬಿಐಗೆ ಹಸ್ತಾಂತರ
ಈ ಹತ್ಯೆಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸರು, ಗ್ಯಾಂಗ್ ಒಂದರ ಸದಸ್ಯರ ವಿರುದ್ಧ ಮಾಡಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿದ್ದರು. ಸಂತ್ರಸ್ತರ ಕುಟುಂಬದವರು ಎನ್ಕೌಂಟರ್ ವಿರುದ್ಧ ಧ್ವನಿ ಎತ್ತಿದಾಗ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

ಆಗ ದೊಡ್ಡ ತಪ್ಪೆಸಗಿದ್ದೆವು
'23 ವರ್ಷಗಳ ಹಿಂದೆ ಕರ್ತವ್ಯದ ಜವಾಬ್ದಾರಿ ನಡುವೆ ನಾವು ಎಸಗಿದ ತಪ್ಪದು. ಒಂದೇ ಸ್ಥಳ ಮತ್ತು ಒಂದೇ ಸಮಯದಲ್ಲಿ ಒಂದೇ ಬಣ್ಣದ ವಾಹನವನ್ನು ಕಂಡು ದಾಳಿ ನಡೆಸಿದ್ದೆವು. ನಾವು ಮಾಡಿದ ತಪ್ಪು ಅರಿವಾದ ಬಳಿಕ ಅದನ್ನು ಮುಚ್ಚಿಹಾಕಲು ಪ್ರಯತ್ನಿಸಬಾರದಿತ್ತು. ಆದರೆ ನಾವು ಆಗ ಇನ್ನೂ ಯುವಕರು' ಎಂದು ಬಂಧನಕ್ಕೆ ಒಳಗಾಗಿದ್ದ ಹತ್ತು ಜನರಲ್ಲಿ ಒಬ್ಬರಾದ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಬಿಡುಗಡೆ ಬಳಿಕ ಹೇಳಿದ್ದಾರೆ,

16 ವರ್ಷ ತಿಹಾರ್ ಜೈಲಿನಲ್ಲಿ
ಭಯೋತ್ಪಾದನೆ, ಕೊಲೆ ಪ್ರಕರಣಗಳು ಮುಂತಾದವುಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವರು ಸಾಮಾನ್ಯವಾಗಿ 14 ವರ್ಷ ಜೈಲುಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆಗೆ ಅರ್ಹತೆ ಪಡೆಯುತ್ತಾರೆ. ಆದರೆ ಈ 10 ಪೊಲೀಸರು 23 ವರ್ಷದಲ್ಲಿ 16 ವರ್ಷ ತಿಹಾರ್ ಜೈಲಿನಲ್ಲಿ ಕಳೆದಿದ್ದಾರೆ. ಕೆಲವು ಸಮಯ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.
ತಿಹಾರ್ ಜೈಲಿನಲ್ಲಿ ಇತರೆ ಕೈದಿಗಳ ಪ್ರಕರಣಗಳಿಗಿಂತ ಪೊಲೀಸರ ಪ್ರಕರಣ ವಿಭಿನ್ನ. ಇಲ್ಲಿ ಪೊಲೀಸರ ಬಿಡುಗಡೆಗೆ ಕೇಂದ್ರ ಗೃಹ ಸಚಿವಾಲಯದ ಅನುಮೋದನೆ ಅಗತ್ಯವಿದೆ.












Click it and Unblock the Notifications