ಉತ್ತಮ ಮಳೆಗೂ ತುಂಬಿಲ್ಲ ಹುಬ್ಬಳ್ಳಿಯ ನೀರಸಾಗರ ಜಲಾಶಯ!
ಹುಬ್ಬಳ್ಳಿ, ಅಕ್ಟೋಬರ್ 07: ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಎಲ್ಲ ಹಳ್ಳ ಕೊಳ್ಳ, ಕೆರೆ ಕಟ್ಟೆಗಳು ತುಂಬಿ ಅಂತರ್ಜಲ ಮಟ್ಟ ಸುಧಾರಿಸಿದೆ. ಇದರ ಜತೆಗೆ ಜಲಾಶಯಗಳಲ್ಲಿನ ನೀರಿನ ಮಟ್ಟವೂ ಏರಿಕೆಯಾಗಿರುವುದರಿಂದ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಾರದು ಎಂಬ ವಿಶ್ವಾಸವಿದೆ.
ಆದ್ರೆ ಹುಬ್ಬಳ್ಳಿಯ ನೀರಸಾಗರ ಜಲಾಶಯದ ಚಿತ್ರಣ ಬೇರೆಯೇ ಇದೆ. ಒಂದು ಕಾಲದಲ್ಲಿ ಅವಳಿನಗರದ ಜನತೆಗೆ ಕುಡಿಯುವ ನೀರಿಗೆ ಆಧಾರವಾಗಿದ್ದ ನೀರಸಾಗರ ಜಲಾಶಯ ಮಳೆ ಕೊರತೆ ಕಾರಣ ಕಳೆದ ನಾಲ್ಕೈದು ವರ್ಷಗಳಿಂದ ಪೂರ್ತಿಯಾಗಿ ತುಂಬಿಲ್ಲ. ಈ ವರ್ಷವೂ ಕೆರೆ ತುಂಬುವುದು ಅನುಮಾನವಾಗಿದೆ.

ಕಲಘಟಗಿ ತಾಲ್ಲೂಕಿನ ದುಮ್ಮವಾಡ ಸಮೀಪ ಇರುವ ನೀರಸಾಗರ ಜಲಾಶಯ 1955ರಲ್ಲಿ ನಿರ್ಮಾಣಗೊಂಡು ಆಗಿನಿಂದಲೂ ಹುಬ್ಬಳ್ಳಿ-ಧಾರವಾಡದ ಜನರಿಗೆ ಕುಡಿಯುವ ನೀರು ಪೂರೈಸುತ್ತಾ ಬಂದಿದೆ. ಈ ಕೆರ ತುಂಬಲು ಬೇಡ್ತಿ ಹಳ್ಳದ ನೀರು ಪ್ರಮುಖ ಮೂಲವಾಗಿದೆ. ವಾಡಿಕೆಯಂತೆ ಕಲಘಟಗಿ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆ ಆಗಿದ್ದರೂ, ಬೇಡ್ತಿ ಹಳ್ಳಕ್ಕೆ ಅಲಲ್ಲಿ ಚೆಕ್ ಡ್ಯಾಂ ನಿರ್ಮಿಸಿದ್ದಾರೆ, ಹೀಗಾಗಿ ಕರೆಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆ ಆಗಿದೆ.
ಈ ಕೆರೆ 181 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ನೀರಸಾಗರ ಸಮೀಪವೇ ಜಲಾಗಾರವಿದ್ದು, ಅಲ್ಲಿಂದ ಅವಳಿನಗರಕ್ಕೆ ನೀರು ಸರಬರಾಜಾಗುತ್ತಿದೆ. ಇನ್ನು ಅವಳಿನಗರಕ್ಕೆ ಸದ್ಯ ದಿನವೊಂದಕ್ಕೆ 130 ಎಂಎಲ್ಡಿ ಪ್ರಮಾಣದ ನೀರು ಅವಶ್ಯವಿದೆ. ಈ ಪೈಕಿ ಮಲಪ್ರಭಾ ಅಣೆಕಟ್ಟೆಯಿಂದ 85-90 ಎಂಎಲ್ಡಿ ಸರಬರಾಜಾಗುತ್ತಿದೆ. ಈ ಮೊದಲು ನೀರಸಾಗರದಿಂದ ನಿತ್ಯ 35-40 ಎಂಎಲ್ಡಿ ನೀರು ಸರಬರಾಜಾಗುತ್ತಿತ್ತು.
ಮಲಪ್ರಭಾ ಎರಡನೇ ಹಂತದ ಕುಡಿಯವ ನೀರು ಯೋಜನೆ ಪೂರ್ಣಗೊಂಡ ಬಳಿಕ ಈ ಪ್ರಮಾಣವು 15 ಎಂಎಲ್ಡಿಗೆ ಇಳಿದಿದೆ. ಆದಾಗ್ಯೂ ಜಲಾಶಯ ಮಾತ್ರ ತುಂಬುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಲ್ಲದೆ ಈ ಕೆರೆಯ ಸುತ್ತ ಮುತ್ತಲಿನ ಜನ ಈ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಈ ಕೆರೆ ತುಂಬದೇ ಇದ್ದರೆ ಇಲ್ಲಿನ ಜನರ ಕುಡಿಯುವ ನೀರಿಗೂ ಸಮಸ್ಯೆ ತಪಿದ್ದಲ್ಲ.












Click it and Unblock the Notifications