ಎಣ್ಣೆ ಪಾರ್ಟಿಲಿ ಪ್ರೀತಿ ವಿಚಾರ: ಸ್ನೇಹಿತರು ಮಾಡಿದ್ದೇನು?
ಮೈಸೂರು, ಮೇ 5: ಸೋಮವಾರವಷ್ಟೆ ರಾಜ್ಯ ಸರ್ಕಾರ ಎಲ್ಲ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಲಕ್ಷಾಂತರ ಮದ್ಯ ಪ್ರಿಯರು 45 ದಿನಗಳಿಂದ ತಡೆಹಿಡಿದಿದ್ದ ಬಾಯಿ ಚಪಲವನ್ನು ಪೂರ್ಣಗೊಳಿಸಲು ಉದ್ದನೆಯ ಸಾಲುಗಳಲ್ಲಿ ನಿಂತು ಮದ್ಯ ಖರೀದಿಸಿ ರಾತ್ರಿ ಜೋರು ಪಾರ್ಟಿ ಮಾಡಿದ್ದಾರೆ.
ಆದರೆ ಈ ಮದ್ಯದ ಪಾರ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.
ಮದ್ಯ ಪಾರ್ಟಿ ನಡೆಸುತಿದ್ದ ಮಧು, ಕಿರಣ್ ಮತ್ತು ಸತೀಶ್ ನಡುವೆ ಗಲಾಟೆ ನಡೆದಿದೆ. ಸತೀಶ್ ಪ್ರೀತಿಸುತಿದ್ದ ಎನ್ನಲಾದ ಹುಡುಗಿಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಇದರಿಂದ ಆಕ್ರೋಶಿತರಾದ ಮಧು ಮತ್ತು ಕಿರಣ್ ಸತೀಶನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿ ಆಗಿದ್ದಾರೆ. ಯುವತಿಯ ಪ್ರೀತಿಯ ವಿಚಾರಕ್ಕಾಗಿಯೇ ಕೊಲೆ ನಡೆಸಿರಬೇಕೆಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಕೊಲೆ ನಡೆಸಿದ ವ್ಯಕ್ತಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications