ನೈಜ ದಸರಾ ವಿಷಯ ಅಪ್ರಸ್ತುತ ಎಂದ ಯದುವೀರ್ ಒಡೆಯರ್
ಮೈಸೂರು. ಅಕ್ಟೋಬರ್. 7: ಯಾವುದು ನಿಜವಾದ ದಸರಾ ಆಚರಣೆ ಅನ್ನುವ ಚರ್ಚೆಯೇ ಸದ್ಯಕ್ಕೆ ಅಪ್ರಸ್ತುತ ಎನ್ನುವ ಮೂಲಕ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆಯಲ್ಲಿ ಎಂದಿನಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಧಿವಿಧಾನದಂತೆ ದಸರಾ ನಡೆಯಲಿದೆ. ಆಚರಣೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರ ಜಾತ್ಯತೀತವಾಗಿ ಎಲ್ಲರನ್ನೂ ಒಗ್ಗೂಡಿಸಿ ದಸರಾ ಆಚರಿಸುತ್ತದೆ ಎಂದು ಹೇಳುವ ಮೂಲಕ 'ಸರ್ಕಾರದ್ದು ಜಾತ್ಯತೀತ ದಸರಾ, ಅರಮನೆಯದು ಧಾರ್ಮಿಕ ದಸರಾ' ಎಂಬ ವಿಶ್ವನಾಥ್ ಹೇಳಿಕೆಗೆ ತೆರೆ ಎಳೆದರು.
ಸಾಂಸ್ಕೃತಿಕ ನಗರಿ ಮೈಸೂರು ನಾಡಿನ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿದೆಯಲ್ಲದೇ ಸ್ವಚ್ಛ ನಗರ ಪಟ್ಟ ಗಳಿಸಿದೆ. ನಾಡಿನ ಕಲೆ, ಸಂಸ್ಕೃತಿ ಅನಾವರಣಗೊಳ್ಳುವ ದಸರಾಗೆ ಬನ್ನಿ ಎಂದು ಪ್ರವಾಸಿಗರಿಗೆ ದಸರಾಗೆ ಸ್ವಾಗತ ಕೋರಿದರಲ್ಲದೆ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು. ಮುಂದೆ ಓದಿ...

ನಗರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು
ಇದೇ ವೇಳೆ ಪೌರ ಕಾರ್ಮಿಕರು ನಡೆಸುತ್ತಿರುವ ಮುಷ್ಕರ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಜಾಸ್ತಿ ಏನೂ ಹೇಳಲಿಕ್ಕೆ ಹೋಗಲ್ಲ. ಹೇಳಿದರೆ ತಪ್ಪಾಗುತ್ತೆ. ಇದು ದಸರಾ ಸಮಯವಾದ್ದರಿಂದ ಇಡೀ ಜಗತ್ತೇ ಮೈಸೂರಿನತ್ತ ನೋಡಲಿದೆ. ಈ ಸಂದರ್ಭದಲ್ಲಿ ನಗರವನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು ಮುಖ್ಯ.
ಪೌರಕಾರ್ಮಿಕರ ಸಮಸ್ಯೆ ಬಗೆಹರಿಸೋದು ಸರ್ಕಾರದ ಹೊಣೆ. ಪೌರಕಾರ್ಮಿಕರ ಸಮಸ್ಯೆ ಆದಷ್ಟು ಬೇಗ ಬಗೆಹರಿಸಿ ನಗರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಚರ್ಚೆಗೆ ಕಾರಣವಾದ ವಿಶ್ವನಾಥ್ ಹೇಳಿಕೆ
ಇತ್ತೀಚೆಗೆ ಶಾಸಕ ಅಡಗೂರು ಎಚ್.ವಿಶ್ವ ನಾಥ್ ಅವರು ಬೆಂಗಳೂರಿನಲ್ಲಿ ದಸರಾ ಅತಿಥಿಗಳಿಗೆ ಆಹ್ವಾನ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಆಚರಿಸುತ್ತಿರುವುದೇ ನಿಜವಾದ ದಸರಾ ಎಂದು ಹೇಳಿದ್ದರು. ಇದು ಚರ್ಚೆಗೆ ಕಾರಣವಾಗಿತ್ತು.

ಪ್ರಮೋದಾದೇವಿ ಒಡೆಯರ್ ಆಕ್ಷೇಪ
ದಸರಾ ಮಹೋತ್ಸವದ ಕೇಂದ್ರ ಬಿಂದು ಅಂಬಾವಿಲಾಸ ಅರಮನೆ ಆವರಣದಲ್ಲಿ ನಡೆಯಲಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆ ವಿವಾದಕ್ಕೆ ತೆರೆ ಬಿದ್ದಿದೆ.
ಅರಮನೆ ಮುಂಭಾಗ ನಿರ್ಮಿಸಿದ್ದ ಸಾಂಸ್ಕೃತಿಕ ವೇದಿಕೆ ವಿನ್ಯಾಸಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಹೊಸ ವಿನ್ಯಾಸದ ಮುಚ್ಚಿದ ವೇದಿಕೆಯಿಂದ ಅರಮನೆ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿದ್ದರು ಎಂದು ಗೊತ್ತಾಗಿದೆ.

ತೆರೆದ ವೇದಿಕೆ ನಿರ್ಮಾಣ
ಇದೀಗ ಜಿಲ್ಲಾಡಳಿತ, ಅರಮನೆ ಮಂಡಳಿ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ವೇದಿಕೆಯನ್ನು ಹಳೆಯ ಬಗೆಯಲ್ಲೇ ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ನಿರ್ಮಿಸಿದ್ದ ಮೇಲು ಹೊದಿಕೆ ಇರುವ ವಿನ್ಯಾಸದ ವೇದಿಕೆಯನ್ನು ರದ್ದುಗೊಳಿಸಿ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ತೆರೆದ ವೇದಿಕೆ ನಿರ್ಮಾಣ ಮಾಡುತ್ತಿವೆ.
ಈ ಮಧ್ಯೆ ಅರಮನೆಯಲ್ಲಿ ಸ್ಪಷ್ಟನೆ ನೀಡಿದ ಪ್ರಮೋದಾದೇವಿ ಒಡೆಯರ್ ಅವರು, ನಾನು ವೇದಿಕೆಯನ್ನು ಪಟ್ಟದ ಆನೆ, ಕುದುರೆ ಪ್ರವೇಶಕ್ಕೆ ಅವಕಾಶ ನೀಡಿ ಸ್ವಲ್ಪ ಪಕ್ಕದಲ್ಲಿ ನಿರ್ಮಿಸುವಂತೆ ತಿಳಿಸಿದೆ ಎಂದರು.












Click it and Unblock the Notifications