ಆ ಕಹಿ ಅನುಭವದ ನಂತರ ಗಾಂಧೀಜಿ ಮತ್ತೆ ಮೈಸೂರಿಗೆ ಬರಲಿಲ್ಲ...
ಮೈಸೂರಿನಲ್ಲಿ ಮಹಾತ್ಮ ಗಾಂಧೀಜಿಗೆ ಕಹಿ ಅನುಭವ ಆಗಿತ್ತಂತೆ. ಅದೇ ಅವರ ಕೊನೆಯ ಮೈಸೂರು ಭೇಟಿ ಆಯಿತಂತೆ. ಇದು ಅಚ್ಚರಿಯ ವಿಷಯವಾದರೂ ಆ ಘಟನೆ ಅವತ್ತು ನಡೆದಿತ್ತು ಎಂಬುದಾಗಿ ಇತಿಹಾಸದ ಪುಟಗಳು ಹೇಳುತ್ತವೆ. ಇಷ್ಟಕ್ಕೂ ಆಗಿದ್ದಾದರೂ ಏನು ಎಂಬುದನ್ನು ನೋಡುವ ಮೊದಲು ಮೈಸೂರಿಗೆ ಗಾಂಧಿ ಎರಡು ಬಾರಿ ಭೇಟಿ ನೀಡಿದ್ದರು ಎಂಬುದು ಹೆಮ್ಮೆಯ ವಿಚಾರವೇ.
ಹಾಗೆ ನೋಡಿದರೆ ಮೈಸೂರಿನ ಸೌಂದರ್ಯ ರಾಜ್ಯ, ದೇಶ- ವಿದೇಶಗಳ ಗಮನ ಸೆಳೆದಿದೆ. ಇದಕ್ಕೆ ಕಾರಣ ಇಲ್ಲಿನ ವಾತಾವರಣ, ಸಂಸ್ಕೃತಿ, ಸಂಪ್ರದಾಯ, ತಿಂಡಿ- ತಿನಿಸು ಹೀಗೆ ಹತ್ತು ಹಲವು ವಿಚಾರಗಳು. ಅದರಂತೆ ಅವತ್ತಿನ ದಿನಗಳಲ್ಲಿ ಗಾಂಧೀಜಿ ಕೂಡ ಮೈಸೂರನ್ನು ಇಷ್ಟಪಟ್ಟಿದ್ದರು.
ಮಹಾತ್ಮ ಮತ್ತು ಮನುಬೆನ್ : ಬೆಚ್ಚಿಬೀಳಿಸುವ ನಗ್ನ ಸತ್ಯಗಳು
1927ರಲ್ಲಿ ಮೈಸೂರಿಗೆ ಮೊದಲ ಬಾರಿಗೆ ಗಾಂಧೀಜಿ ಭೇಟಿ ನೀಡಿದ್ದರು. ಅದಾದ ಏಳು ವರ್ಷಕ್ಕೆ ಮತ್ತೊಮ್ಮೆ ಭೇಟಿ ನೀಡಿದ್ದರು. ಅದಾಗಲೇ ಇಡೀ ದೇಶ ಸ್ವಾತಂತ್ರ್ಯ ಚಳವಳಿಯ ಬೇಗೆಯಲ್ಲಿ ಬೇಯುತ್ತಿತ್ತು. ಎಲ್ಲೆಡೆಯೂ ಒಂದಲ್ಲ ಒಂದು ರೀತಿಯ ಹೋರಾಟಗಳು ನಡೆಯುತ್ತಿದ್ದವು.
ಶೇಷಾದ್ರಿ ಹೌಸ್ನಲ್ಲಿ ಗಾಂಧೀಜಿ ವಾಸ್ತವ್ಯ
ಬ್ರಿಟಿಷರ ವಿರುದ್ಧದ ದಂಗೆ ಎಲ್ಲೆಡೆ ಕಂಡು ಬರುತ್ತಿತ್ತು. ಗಾಂಧೀಜಿ ಊರೂರು ಸುತ್ತಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಹುರಿದುಂಬಿಸುತ್ತಿದ್ದರು. ಇಂತಹ ಸಮಯದಲ್ಲಿಯೇ ಮತ್ತೊಮ್ಮೆ ಅಂದರೆ ಮೊದಲ ಭೇಟಿ ನೀಡಿ ಹೋದ ಏಳುವರ್ಷಕ್ಕೆ 1934ರಲ್ಲಿ ಭೇಟಿ ನೀಡಿದ್ದರು. ಅವರ ಭೇಟಿಯ ವಿಶೇಷ ಏನೆಂದರೆ ಎರಡು ಬಾರಿ ಭೇಟಿ ನೀಡಿದಾಗಲೂ ಶೇಷಾದ್ರಿ ಅಯ್ಯರ್ ರಸ್ತೆಯ ಶೇಷಾದ್ರಿ ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದರು. (ಅವತ್ತಿನ ಶೇಷಾದ್ರಿ ಹೌಸ್ ಇಂದು ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಾಗಿದೆ). ಜತೆಗೆ ಅವರು ಚರಕದಿಂದ ನೂಲು ನೇಯುತ್ತಾ ಭಜನೆ, ಪ್ರಾರ್ಥನೆಯಲ್ಲಿ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದರು.
ಕರಂಡಕ ಉಡುಗೊರೆ ನೀಡಿದ್ದರು ಹೋಟೆಲ್ ಕಾರ್ಮಿಕರು
ಮೊದಲ ಬಾರಿಗೆ ಗಾಂಧೀಜಿ ಇಲ್ಲಿಗೆ ಬಂದಾಗ ಆಗ ತಾನೇ ಸ್ಥಾಪನೆಗೊಂಡಿದ್ದ ಕೃಷ್ಣರಾಜೇಂದ್ರ ಬಟ್ಟೆ ಗಿರಣಿಯನ್ನು ಉದ್ಘಾಟಿಸಿದ್ದರು. ಎರಡನೇ ಬಾರಿಗೆ ಬಂದಾಗ ಇದೇ ಗಿರಣಿಯ ಕಾರ್ಮಿಕರು ರಾತ್ರಿ ಹಗಲು ಹೆಚ್ಚುವರಿ ಕೆಲಸ ಮಾಡಿ ಅದರಿಂದ ಬಂದ ಹಣವನ್ನು ಗಾಂಧೀಜಿಗೆ ನೀಡಿದ್ದು ವಿಶೇಷವಾಗಿದೆ. ಮೈಸೂರಿಗೆ ಬಂದಿದ್ದ ಗಾಂಧೀಜಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಶೋಕಪುರಂಗೆ ತೆರಳಿ, ಜನರ ಯೋಗಕ್ಷೇಮವನ್ನು ವಿಚಾರಿಸಿದ್ದರು. ನಗರದ ಹೃದಯಭಾಗದ ಒಲಂಪಿಯಾ ಟಾಕೀಸ್ ಬಳಿಯ ಹೋಟೆಲ್ ಆನಂದ ಭವನದ ಕಾರ್ಮಿಕರು ತಾವು ದುಡಿದ ಹಣವನ್ನು ಒಟ್ಟು ಸೇರಿಸಿ, ಕರಂಡಕವನ್ನು ಖರೀದಿಸಿ ಅದನ್ನು ಉಡುಗೊರೆಯಾಗಿ ಗಾಂಧೀಜಿಗೆ ನೀಡಿದ್ದರು.
ಒಡವೆಗಳನ್ನು ಸಭೆಯಲ್ಲೇ ಬಹಿರಂಗ ಹರಾಜು ಹಾಕುತ್ತಿದ್ದರು
ಅದನ್ನು ಗಾಂಧೀಜಿ ಟೌನ್ಹಾಲ್ನಲ್ಲಿ ಹರಾಜು ಹಾಕಿದಾಗ ಹೋಟೆಲ್ ಮಾಲೀಕರು ಅದನ್ನು ಖರೀದಿಸಿದ್ದರು. ನಗರದ ರಂಗಾಚಾರ್ಲು ಪುರಭವನ (ಟೌನ್ಹಾಲ್)ದಲ್ಲಿ ಕಾಂಗ್ರೆಸ್ನಿಂದ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಸಭೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಗಾಂಧೀಜಿಯಿಂದ ಪ್ರಭಾವಿತರಾದ ಜನ ಸ್ವಾತಂತ್ರ್ಯ ಹೋರಾಟಕ್ಕೆ ಅಗತ್ಯವಿರುವ ಖರ್ಚು ವೆಚ್ಚವನ್ನು ಭರಿಸಲು ಸ್ವತಃ ತಮ್ಮ ಒಡವೆ, ಹಣಗಳನ್ನು ನೀಡುತ್ತಿದ್ದರು. ಒಡವೆಗಳನ್ನು ಸಭೆಯಲ್ಲೇ ಬಹಿರಂಗ ಹರಾಜು ಹಾಕಿ ಅದರಿಂದ ಬಂದ ಹಣದ ಖರ್ಚು- ವೆಚ್ಚಗಳನ್ನು ಅವರು ಸ್ಥಳದಲ್ಲೇ ಪ್ರಕಟಿಸುವ ಮೂಲಕ ಎಲ್ಲವನ್ನೂ ಜನರ ಮುಂದೆಯೇ ಗಾಂಧೀಜಿ ತೆರೆದಿಡುತ್ತಿದ್ದರು.
ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಗಾಂಧೀಜಿ ಗೈರಾಗಿದ್ದರು, ಯಾಕೆ ಗೊತ್ತಾ?
ಒಡವೆ ನೀಡಿದ ಕಾರಣಕ್ಕೆ ಪತ್ನಿಯರನ್ನು ಥಳಿಸಿದ್ದರು
1934ರಲ್ಲಿ ಗಾಂಧೀಜಿ ಮೈಸೂರಿಗೆ ಬಂದಿದ್ದು ಅವರ ಕೊನೆಯ ಭೇಟಿ. ಈ ವೇಳೆ ಅವರಿಗೊಂದು ಕಹಿ ಅನುಭವವಾಗಿತ್ತು. ಅದೇನೆಂದರೆ, ಗಾಂಧೀಜಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದಾಗ ಅದರಿಂದ ಪ್ರಭಾವಿತರಾದ ಹೆಚ್ಚಿನ ಮಹಿಳೆಯರು ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮದೊಂದು ಕಾಣಿಕೆಯಿರಲಿ ಎಂದು ತಾವು ಧರಿಸಿದ್ದ ಒಡವೆಗಳನ್ನೇ ಬಿಚ್ಚಿ ಗಾಂಧೀಜಿ ಮುಂದಿಡುತ್ತಿದ್ದರಂತೆ. ಇದನ್ನು ಸಹಿಸದ ಮತ್ತು ತಮ್ಮ ಪತ್ನಿಯರ ದೇಶಪ್ರೇಮವನ್ನು ಅರ್ಥ ಮಾಡಿಕೊಳ್ಳದ ಆ ಮಹಿಳೆಯರ ಗಂಡಂದಿರು ಅವರ ವಿರುದ್ಧ ಹರಿಹಾಯ್ದು, ಸಮಾರಂಭದಲ್ಲೇ ಥಳಿಸಿದ್ದಾರೆ. ಇದು ಗಾಂಧೀಜಿ ಮನಸ್ಸಿಗೆ ನೋವುಂಟು ಮಾಡಿತ್ತಲ್ಲದೆ, ಸಭೆಯನ್ನು ಅರ್ಧಕ್ಕೆ ನಿಲ್ಲಿಸಿ ಇನ್ನು ಮುಂದೆ ಎಲ್ಲರೂ ತಮ್ಮ ಸ್ವ ಇಚ್ಛೆಯಿಂದಷ್ಟೆ ನೀಡಿದರೆ ಸ್ವೀಕರಿಸುವುದಾಗಿ ಹೇಳಿ ಹೊರಟು ಹೋದರು. ಅದೇ ಕೊನೆ. ಆ ನಂತರ ಗಾಂಧೀಜಿ ಮೈಸೂರಿಗೆ ಬರಲಿಲ್ಲ.