ದರ್ಶನ್ ವಿಚಾರದಲ್ಲಿ ಇಂದ್ರಜಿತ್ ಎಂಟ್ರಿ ಕೊಟ್ಟಿದ್ದು ಯಾಕೆ?
ಮೈಸೂರು, ಜು. 15: ನಟ ದರ್ಶನ್, ನಿರ್ಮಾಪಕ ಉಮಾಪತಿ ನಡುವೆ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದ್ದ 'ನಕಲಿ ಶ್ಯೂರಿಟಿ' ಪ್ರಕರಣ ಕುರಿತು ಗೃಹ ಸಚಿವರಿಗೆ ದೂರು ನೀಡುವ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ನಟ ದರ್ಶನ್ ಅವರಿಗೆ ಸಮಸ್ಯೆ ಎದುರಾಗಲಿದೆಯೇ ? ಇಂದ್ರಜಿತ್ ಲಂಕೇಶ್ ಎಂಟ್ರಿ ಉದ್ದೇಶದ ಹಿಂದಿನ ರಹಸ್ಯವೇನು ? ಈ ಕುರಿತ ಸಮಗ್ರ ವಿವರ ಇಲ್ಲಿದೆ ನೋಡಿ...
ಇಂದ್ರಜಿತ್ ಲಂಕೇಶ್, ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಎನ್ ಸಿಬಿ ಅಧಿಕಾರಿಗಳು ಡ್ರಗ್ ಜಾಲವನ್ನು ಬಯಲಿಗೆ ಎಳೆದಿದ್ದರು. ಸಿನಿಮಾ ಜಗತ್ತಿನೊಂದಿಗೆ ನಂಟು ಹೊಂದಿದ್ದ ಬಂಧಿತ ಆರೋಪಿಯ ಸ್ಯಾಂಡಲ್ ವುಡ್ ಲಿಂಕ್ ಬಹಿರಂಗವಾಗಿತ್ತು. ಇದೇ ಸಮಯದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಎಂಟ್ರಿ ಕೊಟ್ಟಿದ್ದರು. ಸ್ಯಾಂಡಲ್ ವುಡ್ ಮಾದಕ ಲೋಕದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದರು. ಅಗತ್ಯ ಬಿದ್ದರೆ ಸಿಸಿಬಿಗೆ ದಾಖಲೆ ನೀಡುವುದಾಗಿ ಸವಾಲು ಹಾಕಿದ್ದರು.
ಇಂದ್ರಜಿತ್ ಲಂಕೇಶ್ ಹೇಳಿಕೆ ನಡುವೆಯೇ ಸ್ಯಾಂಡಲ್ವುಡ್ನಲ್ಲಿ ಡ್ರಗ್ ಜಾಲ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಎರಡು ಬಾರಿ ಸಿಸಿಬಿ ಪೊಲೀಸರನ್ನು ಭೇಟಿ ಮಾಡಿದ್ದ ಇಂದ್ರಜಿತ್ ಲಂಕೇಶ್ ಎಲ್ಲಾ ಸಾಕ್ಷ್ಯಗಳನ್ನು ಸಿಸಿಬಿ ಪೊಲೀಸರಿಗೆ ನೀಡಿದ್ದೀನಿ ಎಂದಿದ್ದರು. ಇದಾದ ಬಳಿಕ ಸಿಸಿಬಿ ಪೊಲೀಸರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಳೇ ಡ್ರಗ್ ಪ್ರಕರಣ ಜಾಡು ಹಿಡಿದು ತನಿಖೆ ನಡೆಸಿದರು.
ಸ್ಯಾಂಡಲ್ವುಡ್ ನಟ, ನಟಿಯರು ವಿಚಾರಣೆ ಎದುರಿಸಿದರು
ಆರಂಭದಲ್ಲಿಯೆ ಸ್ಯಾಂಡಲ್ವುಡ್ ಡ್ರಗ್ ಪಾರ್ಟಿ ಹೂರಣ ಹೊರ ಬಿದ್ದಿತ್ತು. ನಟಿ ಸಂಜನಾ, ನಟಿ ರಾಗಿಣಿ ಬಂಧನಕ್ಕೆ ಒಳಗಾದರು. ಸ್ಯಾಂಡಲ್ವುಡ್ ನಟರು ವಿಚಾರಣೆ ಎದುರಿಸುವಂತಾಯಿತು. ದಿಗಂತ್, ಅಂದ್ರಿತಾ ರೈ, ನಿರೂಪಕಿ ಅನುಶ್ರೀ, ಲೂಸ್ ಮಾದ, ಸಾಕಷ್ಟು ಮಂದಿಯ ವಿಚಾರಣೆ ಎದುರಿಸಿದರು. ಜನ ಪ್ರತಿನಿಧಿಗಳ ಮಕ್ಕಳ ಹೆಸರು ಕೂಡ ಡ್ರಗ್ ಜಾಲ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ಸ್ಯಾಂಡಲ್ವುಡ್ ಪಾಲಿಗೆ ಸಿಸಿಬಿ ಡ್ರಗ್ ಪ್ರಕರಣ ಕಪ್ಪು ಚುಕ್ಕಿಯಾಗಿಯೇ ಉಳಿದುಕೊಂಡಿತು. ಆನಂತರ ಇಂದ್ರಜಿತ್ ಲಂಕೇಶ್ ಕಾಣಿಸಿಕೊಂಡಿಯೂ ಇರಲಿಲ್ಲ.
ವಾಸ್ತವದಲ್ಲಿ ಇಂದ್ರಜಿತ್ ಲಂಕೇಶ್ ನೀಡಿದ ಮಾಹಿತಿಯಿಂದ ಏನೂ ಪ್ರಯೋಜನ ಆಗಿರಲಿಲ್ಲ. ಆದರೆ, ಸಿಸಿಬಿ ಪೊಲೀಸರ ತನಿಖೆ ಹಾಗೂ ಸಂಗ್ರಹಿಸಿದ ದಾಖಲೆಗಳಿಂದಲೇ ಸ್ಯಾಂಡಲ್ ವುಡ್ ಡ್ರಗ್ ಜಾಲ ಹೊರ ಬಂದಿತ್ತು. ಇಂದ್ರಜಿತ್ ಲಂಕೇಶ್ ಕೂಡ ಇದರ ಬಗ್ಗೆ ಚಕಾರ ಎತ್ತಿರಲಿಲ್ಲ. ಇದೀಗ ನಟ ದರ್ಶನ್ ನಕಲಿ ಶ್ಯೂರಿಟಿ ಹಾಗೂ ಹೋಟೆಲ್ ಮಾಣಿ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇಂದ್ರಜಿತ್ ಎಂಟ್ರಿ ಕೊಡುತ್ತಿದ್ದಂತೆ ನಟ ದರ್ಶನ್ ಅಭಿಮಾನಿ ವಲಯದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.
ದರ್ಶನ್ ಮತ್ತು ಆಪ್ತರಿಂದ ಹಲ್ಲೆ?
ನಟ ದರ್ಶನ್ ಮತ್ತು ಅವರ ಸ್ನೇಹಿತರು ಮೈಸೂರಿನ ಹೋಟೆಲ್ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಪ್ರಕರಣವನ್ನು ನ್ಯಾಯ ಸಮ್ಮತವಾಗ ತನಿಖೆ ನಡೆಸಿ ಎಂದು ಇಂದ್ರಜಿತ್ ಮಾಧ್ಯಮಗಳ ಎದುರು ಆಗ್ರಹಿಸಿದ್ದಾರೆ.
ದರ್ಶನ್ ಗೆ ಇಂದ್ರಜಿತ್ ಟಾಂಗ್: ನಟ ದರ್ಶನ್ ಮತ್ತು ಸ್ನೇಹಿತರು ಪ್ರಿನ್ಸ್ ಸಂದೇಶ್ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಸಿಸಿ ಟಿವಿ ಕ್ಯಾಮರಾ ದೃಶ್ಯ ಅಳಿಸಿ ಹಾಕಿದ್ದಾರೆ. ಇನ್ನು ಪ್ರತಿಭಟನೆ ಮಾಡಲು ಯತ್ನಿಸಿದ ದಲಿತ ಹುಡುಗನ ಮೇಲೆ ಹಲ್ಲೆ ಮಾಡಿದ ವಿಚಾರವನ್ನು ಸೆಟ್ಲ್ ಮೆಂಟ್ ಮಾಡಿಕೊಂಡಿದ್ದಾರೆ. ಅವರು ಪೂಜಿಸುವ ರಾಘವೇಂದ್ರ ಸ್ವಾಮಿಗಳ ಮೇಲೆ ಆಣೆ ಮಾಡಿ ಹೇಳಲಿ. ದರ್ಶನ್ ಮತ್ತು ಅವರ ಸ್ನೇಹಿತರು ಹಲ್ಲೆ ಮಾಡಿಲ್ಲ ಎಂದು ಒಪ್ಪಿಕೊಳ್ಳಲಿ. ಪೊಲೀಸರ ತನಿಖೆ ವೇಳೆ ನಾನು ದಾಖಲೆಗಳನ್ನು ಒದಗಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಇಂದ್ರ ಜಿತ್ ಎಂಟ್ರಿ ಬಗ್ಗೆ ದರ್ಶನ್ ಮಾರ್ಮಿಕ ನುಡಿ
ಊಟ ಕೊಟ್ಟಿರುವುದರಲ್ಲಿ ತಡ ಆಗಿರುತ್ತದೆ. ಅದಕ್ಕೆ ರೇಗಾಡಿರಬಹುದು ಅಷ್ಟೇ, ವಿಷಯವನ್ನು ಎಲ್ಲೆಲ್ಲೋ ತೆಗೆದುಕೊಂಡು ಹೋಗುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸತ್ಯ ಗೊತ್ತಾಗುತ್ತದೆ ಎಂದಷ್ಟೇ ದರ್ಶನ್ ಮಾರ್ಮಿಕವಾಗಿ ನುಡಿದಿದ್ದಾರೆ. ಹೋಟೆಲ್ ನಲ್ಲಿ ಗಲಾಟೆ ಆಗಿರುವುದು ನಿಜ, ಆದರೆ ಅಷ್ಟು ದೊಡ್ಡ ಮಟ್ಟದಲ್ಲಿ ನಡೆದಿಲ್ಲ. ಆದರೆ ಈ ವಿಚಾರದಲ್ಲಿ ನೀವ್ಯಾಕೆ ಮಧ್ಯದಲ್ಲಿ ತಲೆ ತೂರಿಸುತ್ತಿದ್ದೀರಾ ಎನ್ನುವ ಪ್ರಶ್ನೆ ದರ್ಶನ್ ಎತ್ತಿದ್ದಾರೆ. ಇದು ಹೊಸ ಆಯಾಮವನ್ನೇ ಪಡೆದುಕೊಂಡಿದೆ.
ಹಳೇ ವಿಚಾರ ಈಗ ಯಾಕೆ?
ಮೈಸೂರಿನ ಪ್ರಿನ್ಸ್ ಸಂದೇಶ್ ಹೋಟೆಲ್ನಲ್ಲಿ ನಡೆದಿರುವ ಹಲ್ಲೆ ಪ್ರಕರಣ ಒಂದು ತಿಂಗಳ ಹಿಂದಿನದ್ದು. ದಲಿತ ಸಪ್ಲೈಯರ್ಗೆ ದರ್ಶನ್ ಮತ್ತು ಆಪ್ತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ನಡೆದ ಘಟನೆಯನ್ನು ಅವಾಗಲೇ ಯಾಕೆ ಇಂದ್ರಜಿತ್ ಲಂಕೇಶ್ ಪ್ರಸ್ತಾಪ ಮಾಡಲಿಲ್ಲ. ಸಮಾಜದ ಬಗ್ಗೆ ಕಳಕಳಿ ಇದ್ದವರೇ ಆಗಿದ್ದಲ್ಲಿ ಅವತ್ತು ಯಾಕೆ ಇಂದ್ರಜಿತ್ ಪ್ರಸ್ತಾಪ ಮಾಡಿಲ್ಲ. ಇವತ್ತು ಅರುಣಾಕುಮಾರಿ ವಿಚಾರ ಮುಂದಿಟ್ಟುಕೊಂಡು ವಿಚಾರವನ್ನು ಬೇರೆ ಎಲ್ಲಿಗೋ ಎತ್ತಿಕೊಂಡು ಹೋಗುತ್ತಿದ್ದಾರೆ ಎಂಬ ಮಾತು ದರ್ಶನ್ ಆಪ್ತ ವಲಯದಿಂದ ಕೇಳಿ ಬರುತ್ತಿರುವ ಮಾತು.
ಬಾಂಬ್ ಸಿಡಿಸಿ ಕಣ್ಮರೆಯಾದರೆ ಮುಂದೇನು?
25 ಕೋಟಿ ರೂ. ಸಾಲ ಪಡೆಯಲು ನಕಲಿ ಶ್ಯೂರಿಟಿ ತಯಾರಿಸಿದ ಪ್ರಕರಣದಲ್ಲಿ ಬದ್ಧ ವೈರಿಗಳಂತೆ ಮುನಿಸಿಕೊಂಡಿದ್ದ ರಾಬರ್ಟ್ ನಿರ್ಮಾಪಕ ಉಮಾಪತಿ ಹಾಗೂ ನಟ ದರ್ಶನ್ ಬೀದಿ ರಂಪ ಮಾಡಿಕೊಂಡಿದ್ದರು. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ತಲೆ ತೆಗಿತೀನಿ ಎಂದಿದ್ದ ನಟ ದರ್ಶನ್ ಉಮಾಪತಿ ಸಂಧಾನ ಮಾಡಿಕೊಂಡಿದ್ದರು. ಬ್ಯಾಂಕ್ ಮ್ಯಾನೇಜರ್ ಎಂದೇ ಬಿಂಬಿಸಿಕೊಂಡಿದ್ದ ಅರುಣಾಕುಮಾರಿ ಮೇಲೆ ಎಲ್ಲರೂ ಸೇರಿ ಬ್ರಹ್ಮಾಸ್ತ್ರ ಪ್ರಯೋಗಿಸಿದರು. ನನ್ನನ್ನು ಬಳಸಿಕೊಂಡು ತೇಜೋವಧೆ ಮಾಡುತ್ತಿದ್ದಾರೆ ಎಂದು ಅರುಣಾ ಕುಮಾರಿ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಇಂದ್ರಜಿತ್ ಫೀಲ್ಡ್ಗೆ ಇಳಿದಿದ್ದಾರೆ. ಹೇಳಿದಂತೆ ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ಒದಗಿಸಿದಲ್ಲಿ ಪ್ರಕರಣ ಹೊಸ ಸ್ವರೂಪ ಪಡೆದುಕೊಳ್ಳಲಿದೆ. ಡ್ರಗ್ ಪ್ರಕರಣದಂತೆ ಬಾಂಬ್ ಸಿಡಿಸಿ ಕಣ್ಮರೆಯಾದರೆ ಆನಂತರದ ಬೆಳವಣಿಗೆಗಳು ಬೇರೆ ಸ್ವರೂಪ ಪಡೆದ ಪಡೆದುಕೊಳ್ಳಲಿದೆ.