ಗುಂಡ್ಲುಪೇಟೆ ನರಭಕ್ಷಕ ಹುಲಿಯನ್ನು 2 ದಿನದಲ್ಲಿ ಸೆರೆ ಅಥವಾ ಕೊಲ್ಲುತ್ತೇವೆ: ಅರಣ್ಯ ಇಲಾಖೆ
ಬೆಂಗಳೂರು, ಅಕ್ಟೋಬರ್ 08: ಗುಂಡ್ಲುಪೇಟೆ ಸುತ್ತ-ಮುತ್ತ ಕೆಲವು ದಿನಗಳಿಂದ ಆತಂಕ ಸೃಷ್ಟಿಸಿರುವ ನರಭಕ್ಷಕ ಹುಲಿಯನ್ನು ಎರಡು ದಿನದಲ್ಲಿ ಸೆರೆ ಹಿಡಿಯುವುದಾಗಿ ಅಥವಾ ಕೊಲ್ಲುವುದಾಗಿ ಅರಣ್ಯ ಇಲಾಖೆ ಹೇಳಿದೆ.
ಗೋಪಾಲ ಸ್ವಾಮಿ ಬೆಟ್ಟದ ವ್ಯಾಪ್ತಿಯ ಚೌಡಹಳ್ಳಿ ಬಳಿ ಹಸು ಮೇಯಿಸುತ್ತಿದ್ದ ಶಿವಲಿಂಗಪ್ಪ ಎಂಬ ರೈತನನ್ನು ಹುಲಿ ನಿನ್ನೆ ರಾತ್ರಿ ಕೊಂದು ತಿಂದಿದೆ. ಇದೇ ಹುಲಿಯು ಒಂದು ತಿಂಗಳ ಹಿಂದಷ್ಟೆ ವ್ಯಕ್ತಿಯೊಬ್ಬನನ್ನು ಕೊಂದಿತ್ತು.
ಜನರಲ್ಲಿ ಆತಂಕ ಉಂಟು ಮಾಡಿರುವ ನರಭಕ್ಷಕ ಹುಲಿಯನ್ನು ಒಂದು ಅಥವಾ ಎರಡು ದಿನಗಳ ಒಳಗಾಗಿ ಕೊಲ್ಲುವುದಾಗಿ ಅಥವಾ ಜೀವಂತ ಸೆರೆ ಹಿಡಿಯುವುದಾಗಿ ಇಂದು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ವಾರ್ಡನ್ ನೇತೃತ್ವದಲ್ಲಿ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೊಲ್ಲುವುದು ಅಥವಾ ಸೆರೆ ಹಿಡಿಯುವುದು ಎರಡರಲ್ಲಿ ಒಂದನ್ನು ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಈ ನರಭಕ್ಷಕ ಹುಲಿಯು ಕಳೆದ ಒಂದು ತಿಂಗಳಿಂದ ಇಬ್ಬರ ಜೀವ ತೆಗೆದಿದ್ದು, ಹುಂಡಿಪುರ, ಮೇಲುಕಾಮನಹಳ್ಳಿ, ಮಂಗಲ, ಚೌಡಹಳ್ಳಿ, ಶಿವಪುರ ಮುಂತಾದ ಹಳ್ಳಿಗಳಲ್ಲಿ ಜಾನುವಾರುಗಳ ಮೇಲೂ ದಾಳಿ ಮಾಡಿ ಕೊಂದಿತ್ತು.
ಈ ಹುಲಿಯನ್ನು ಬಂಧಿಸಲು ಹಲವು ಕಡೆ ಬೋನುಗಳನ್ನು ಇಡಲಾಗಿತ್ತು ಆದರೆ ಹುಲಿ ಸೆರೆ ಸಿಕ್ಕಿರಲಿಲ್ಲ.












Click it and Unblock the Notifications