ಹುಣಸೂರಿನಲ್ಲಿ ನಾವು ಗೆದ್ದಾಯ್ತು; ಪಕ್ಷಾಂತರ ಮಾಡಿದವರ ಕಥೆ ಇಷ್ಟೆ: ಜಿ. ಪರಮೇಶ್ವರ್
ಮೈಸೂರು, ನವೆಂಬರ್ 25: "ಹುಣಸೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಗೆದ್ದಾಗಿದೆ. ರಾಜ್ಯದಲ್ಲಿ ಎಷ್ಟು ಸ್ಥಾನ ಗೆಲ್ಲುತ್ತೇವೆ ಎಂಬುದನ್ನು ಡಿ.5ರಂದು ಹೇಳುತ್ತೇವೆ" ಎಂದು ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಹುಣಸೂರಿನಲ್ಲಿ ನಾವು ಗೆದ್ದಿದ್ದೇವೆ, ಅಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ ಈಗಾಗಲೇ ನಾವು ಗೆದ್ದಿದ್ದೇವೆ ಎಂಬುದು ಖಚಿತವಾಗಿದೆ. ಆದರೆ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬುದನ್ನು ಡಿಸೆಂಬರ್ 5ರಂದು ಹೇಳುತ್ತೇವೆ. ಮಧ್ಯಪ್ರದೇಶದಲ್ಲೂ ಪಕ್ಷಾಂತರ ಮಾಡಿದವರು ಸೋತಿದ್ದಾರೆ. ಹೀಗಾಗಿ ಇಲ್ಲಿನ ರಾಜಕೀಯ ಪರಿಸ್ಥಿತಿ ಗಮನಿಸಿದರೆ ನಾವು ಗೆದ್ದಾಗಿದೆ. ನಮ್ಮ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಗೆಲುವು ಸಾಧಿಸಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನಮ್ಮ ನಾಯಕರು: "ಉಪ ಚುನಾವಣೆಯಲ್ಲಿ ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯ ಇಲ್ಲ. ಅಲ್ಲದೇ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಲು ಬಿಜೆಪಿ ಅವರಿಗೆ ವಿಷಯಗಳೇ ಇಲ್ಲ. ಹೀಗಾಗಿ ಪ್ರತಿ ಬಾರಿಯೂ ಸಿದ್ದರಾಮಯ್ಯ ಏಕಾಂಗಿ ಅಂತ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ನಾವು ಚುನಾವಣೆ ಎದುರಿಸುತ್ತಿದ್ದೇವೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಿಜೆಪಿ ಸರ್ಕಾರ ಉಳಿಯುತ್ತಾ ಇಲ್ಲವಾ ಎನ್ನುವುದನ್ನು ಡಿಸೆಂಬರ್ 5ರ ನಂತರ ಹೇಳುತ್ತೇವೆ" ಎಂದರು.
ಇದಕ್ಕೂ ಮುನ್ನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ ಜಿ.ಪರಮೇಶ್ವರ್ ನಾಡದೇವತೆ ದರ್ಶನ ಪಡೆದರು. ಪರಮೇಶ್ವರ್ ಅವರಿಗೆ ಸ್ಥಳೀಯ ಮುಖಂಡರು ಸಾಥ್ ನೀಡಿದರು.












Click it and Unblock the Notifications