ವಿದ್ಯಾನಿಧಿ ಯೋಜನೆ: ಮೈಸೂರು ಜಿಲ್ಲೆಯ 49,031 ವಿದ್ಯಾರ್ಥಿಗಳಿಗೆ ಶಿಷ್ಯವೇತನ
ಮೈಸೂರು, ನವೆಂಬರ್, 25: ಸರ್ಕಾರ ಈ ಬಾರಿ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತಾಹ ನೀಡುವ ಯೋಜನೆಯನ್ನು ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಜಾರಿಗೊಳಿಸಿದ್ದ ವಿದ್ಯಾನಿಧಿಗೆ ಜಿಲ್ಲೆಯಲ್ಲಿ ಸಕರಾತ್ಮಕ ಸ್ಪಂದನೆ ಸಿಕ್ಕಿದ್ದು, 49,031 ವಿದ್ಯಾರ್ಥಿಗಳು ಶಿಷ್ಯವೇತನ ಪಡೆದುಕೊಂಡಿದ್ದಾರೆ.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್ಗಳನ್ನು ಅಭ್ಯಾಸ ಮಾಡುವವರೂ ಸ್ಕಾಲರ್ಶಿಪ್ ಪಡೆಯಲು ಅರ್ಹತೆ ಹೊಂದಿದ್ದು, ಆಯಾ ಕೋರ್ಸ್ಗೆ ತಕ್ಕಂತೆ ಶಿಷ್ಯ ವೇತನ ದೊರೆಯುತ್ತಿದೆ. ಯೋಜನೆ ಪ್ರಾರಂಭವಾದ ಮೊದಲ ವರ್ಷವೇ ಒಟ್ಟು 24 ಕೋಟಿ ರೂಪಾಯಿಗಳಷ್ಟು ಶಿಷ್ಯವೇತನ ವಿತರಣೆಯಾಗಿದೆ. "ಬಸವರಾಜ ಬೊಮ್ಮಾಯಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಈ ಯೋಜನೆಯನ್ನು ಘೋಷಿಸಿದ್ದು, ಇದು ರೈತರ ಮಕ್ಕಳಿಗೆ ತುಂಬಾ ಸಹಾಯಕ ಆಗಲಿದೆ. ಪಹಣಿ ಪತ್ರ ಹೊಂದಿದ ರೈತರ ಮಕ್ಕಳು ಈ ಸೌಲಭ್ಯವನ್ನು ಪಡೆಯಬಹುದಾಗಿದೆ" ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ. ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ: ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆ
ಯಾರಿಗೆ ಎಷ್ಟು ಸಹಾಯಧನ?; 8 ರಿಂದ 10ನೇ ತರಗತಿ ಮಕ್ಕಳಿಗೆ 2 ಸಾವಿರ ರೂಪಾಯಿ, ಪಿಯುಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ 2,500ರಿಂದ 3 ಸಾವಿರ ರೂಪಾಯಿ, ಬಿಎ, ಬಿಎಸ್ಸಿ, ಬಿಕಾಂ ಸೇರಿದಂತೆ ಇನ್ನಿತರ ಪದವಿ ಕೋರ್ಸ್ ವಿದ್ಯಾರ್ಥಿಗಳಿಗೆ 5 ಸಾವಿರದಿಂದ 5,500 ರೂಪಾಯಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ಗೆ 7,500ರಿಂದ 8 ಸಾವಿರ ರೂಪಾಯಿ, ಎಂಬಿಬಿಎಸ್, ಬಿ.ಇ, ಬಿ.ಟೆಕ್ ಹಾಗೂ ಎಲ್ಲ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 10 ರಿಂದ 11 ಸಾವಿರ ರೂಪಾಯಿ ಸಹಾಯಧನ ಸಿಗುತ್ತದೆ. ಕೃಷಿ ಮಾಡುವಂತಹ ಜಮೀನನ್ನು ಹೊಂದಿರುವ ರೈತರ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬಹುದು. ರೈತರ ಮಕ್ಕಳು ಕರ್ನಾಟಕ ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ಇತ್ಯಾದಿಗಳ ಆಧಾರದ ಮೇಲೆ ಶಿಷ್ಯವೇತನವನ್ನು ಪಡೆದ ರೈತರ ಮಕ್ಕಳು ಸಹ, ಈ ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಸಹಾಯಧನಕ್ಕೆ ಅರ್ಹರಾದ ಮಕ್ಕಳ ಸಂಖ್ಯೆ; ಎಲ್ಲ ರೈತರ ಮಕ್ಕಳು ವೆಬ್ಸೈಟ್ಗೆ ಭೇಟಿ ನೀಡಿ ಮುಖ್ಯಮಂತ್ರಿ ವಿದ್ಯಾನಿಧಿ ಕಾರ್ಯಕ್ರಮದ ಶಿಷ್ಯವೇತನಕ್ಕಾಗಿ ನೋಂದಾಯಿಸಿಕೊಳ್ಳಬಹುದು. ಇತರೆ ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ 1800 425 3553ಗೆ ಉಚಿತ ಕರೆ ಮಾಡಿ ಮಾಹಿತಿ ಪಡೆಯಬಹುದು.
2021-22ರಿಂದ ಯೋಜನೆ ಜಾರಿಗೆ ಬಂದಿದ್ದು, ಕೃಷಿ ಇಲಾಖೆಯಲ್ಲಿ ಐಡಿ ಹೊಂದಿದ ರೈತರ ಮಕ್ಕಳು ಅರ್ಜಿ ಸಲ್ಲಿಸಬಹುದು. ಎಚ್.ಡಿ.ಕೋಟೆ ತಾಲೂಕಿನಲ್ಲಿ 2247 ಮಕ್ಕಳಿಗೆ 66,42,500 ರೂಪಾಯಿ ಸಹಾಯಧನ ಸಿಕ್ಕಿದೆ. ಹುಣಸೂರಿನಲ್ಲಿ 3658 ಮಕ್ಕಳಿಗೆ 1,31,42500 ರೂಪಾಯಿ, ಕೆ.ಆರ್.ನಗರದಲ್ಲಿ 3723 ಮಕ್ಕಳಿಗೆ 1,40,55,500 ರೂಪಾಯಿ, ಮೈಸೂರಿನಲ್ಲಿ 28069 ಮಕ್ಕಳಿಗೆ 17,47,36,500 ರೂಪಾಯಿ. ನಂಜನಗೂಡು ತಾಲೂಕಿನಲ್ಲಿ 4696 ಮಕ್ಕಳಿಗೆ 1,65,08000 ರೂಪಾಯಿ, ಪಿರಿಯಾಪಟ್ಟಣದಲ್ಲಿ 2636 ಮಕ್ಕಳಿಗೆ 81,57000 ರೂಪಾಯಿ, ತಿ.ನರಸೀಪುರದಲ್ಲಿ 4002 ಮಕ್ಕಳಿಗೆ 1,34,78500 ರೂಪಾಯಿ ಸಹಾಯಧನ ನೀಡಲು ಮುಂದಾಗಿದ್ದಾರೆ. ಒಟ್ಟು 49031 ಮಕ್ಕಳಿಗೆ 24,67,20,500 ರೂಪಾಯಿ ವಿತರಣೆ ಮಾಡಲಾಗಿದೆ.