ಜಯಚಾಮರಾಜೇಂದ್ರ ಒಡೆಯರ್ 101ನೇ ಜನ್ಮದಿನಾಚರಣೆ: ನೇರಪ್ರಸಾರದಲ್ಲಿ ಉಪರಾಷ್ಟ್ರಪತಿ
ಮೈಸೂರು, ಜುಲೈ 18: ಮೈಸೂರು ರಾಜ ಸಂಸ್ಥಾನದ ಇಪ್ಪತ್ತೈದನೇ ಮಹಾರಾಜರು, ರಾಜಾಡಳಿತ ಹಾಗೂ ಪ್ರಜಾತಂತ್ರ ಎರಡನ್ನೂ ಅನುಭವಿಸಿದ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜನ್ಮದಿನವನ್ನು ಇಂದು ಮೈಸೂರು ಅರಮನೆಯಲ್ಲಿ ಆಚರಿಸಲಾಯಿತು.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಜಯಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ದು ಗೌರವ ಅರ್ಪಿಸಿ, ಅಂಬಾವಿಲಾಸ ಅರಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು. ನೇರ ಪ್ರಸಾರ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಇಂದು ವಿಶಾಲ ಕರ್ನಾಟಕದ ಕನಸುಗಾರ ಜಯಚಾಮರಾಜೇಂದ್ರ ಒಡೆಯರ್ ಜಯಂತ್ಯುತ್ಸವವಾಗಿದ್ದು, ವರ್ಷಪೂರ್ತಿ ನಡೆದಿದ್ದ ಒಡೆಯರ್ ಸಂಸ್ಮರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆದಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ನಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆದಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ನಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜವಂಶಸ್ಥೆ ಡಾ.ಪ್ರಮೋದದೇವಿ ಒಡೆಯರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, "ಶ್ರೀ ಜಯಚಾಮರಾಜೇಂದ್ರ ಒಡೆಯರ್ ದಿ ಪಬ್ಲಿಕ್ ಫಿಗರ್" ಎಂಬುದರ ಕುರಿತು ಉಪನ್ಯಾಸ ನಡೆಯುತ್ತಿದೆ.

ಲೈವ್ ಸ್ಟ್ರೀಮಿಂಗ್ ನಲ್ಲಿ ಕೇಂದ್ರ ಮಾಜಿ ಸಚಿವ ಡಾ.ಕರಣ್ ಸಿಂಗ್, ರಾಜ್ಯ ಸಭಾ ಸದಸ್ಯ ಜೈರಾಂ ರಮೇಶ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದಾರೆ. ರಾಜಮನೆತನ ಎಲ್ಲರಿಗೂ ಸಾಮಾಜಿಕ ಜಾಲತಾಣದ ಮೂಲಕವೇ ಆಹ್ವಾನ ನೀಡಿತ್ತು.
ಇಂದು ನಗರದ ಅರಮನೆಯಲ್ಲೂ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ 101ನೇ ಜನ್ಮದಿನೋತ್ಸವವನ್ನು ಮೈಸೂರು ಅರಮನೆ ಮಂಡಳಿ ಮತ್ತು ಶ್ರೀ ನಾಲ್ವಡಿ ಪೌಂಢೇಷನ್ ವತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು -ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಸಮರ್ಪಿಸಿದರು.












Click it and Unblock the Notifications