ದನಕ್ಕೆ ನೀರು ಕುಡಿಸಲು ಹೋದ ತಾತ-ಮೊಮ್ಮಗ ಕೆರೆಗೆ ಬಿದ್ದು ಸಾವು
ಮೈಸೂರಿನ ಹುಣಸೂರಿನಲ್ಲಿ ದನಕ್ಕೆ ನೀರು ಕುಡಿಸಲು ತೆರಳಿದ್ದ ತಾತ-ಮೊಮ್ಮಗ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನು ತಿ.ನರಸೀಪುರದಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿಯೊಬರು ಮೃತಪಟ್ಟಿದ್ದಾರೆ
ಹುಣಸೂರು, ಮೇ 20: ಕೆರೆಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು ತೆರಳಿದ್ದ ತಾತ ಮತ್ತು ಮೊಮ್ಮಗ ಕಾಲು ಜಾರಿ ಕೆರೆಗೆ ಬಿದ್ದು, ಮೃತಪಟ್ಟ ಘಟನೆ ಯಮಗುಂಬ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ತಾಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಮಗುಂಬ ಗ್ರಾಮದ ಈರಪ್ಪಾಜಿ (60) ಹಾಗೂ ಮೊಮ್ಮಗ ಉಲ್ಲಾಸ್ (8) ಮೃತ ದುರ್ದೈವಿಗಳು.
ಮೃತ ವಿದ್ಯಾರ್ಥಿ ಉಲ್ಲಾಸ್ ಹುಣಸೂರು ಪಟ್ಟಣದ ಸನ್ ಶೈನ್ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಮಧ್ಯಾಹ್ನ ಈರಪ್ಪಾಜಿ ತನ್ನ ಮೊಮ್ಮಗ ಉಲ್ಲಾಸನೊಂದಿಗೆ ಊರ ಹೊರಗಿರುವ ಹಳೆ ಕೆರೆಗೆ ತೆರಳಿ, ದನಗಳಿಗೆ ಕುಡಿಸುತ್ತಿದ್ದಾಗ ಜೊತೆಯಲ್ಲಿದ್ದ ಮೊಮ್ಮಗ ಆಕಸ್ಮಿಕವಾಗಿ ಕಾಲು ಜಾರಿ ನೀರೊಳಗೆ ಬಿದ್ದಿದ್ದಾನೆ.
ತಕ್ಷಣ ಇದನ್ನು ಕಂಡ ಅಜ್ಜ ಈರಪ್ಪಾಜಿ ಮೊಮ್ಮಗನನ್ನು ಹಿಡಿಯಲು ನೀರಿನೆಡೆಗೆ ಹೋಗುತ್ತಿದ್ದಂತೆ ಅವರು ಕೂಡ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ನೋಡಿದ ಗ್ರಾಮದ ಭಾರ್ಗವ ಎಂಬುವರು ಊರಿನವರಿಗೆ ಮಾಹಿತಿ ನೀಡಿದ್ದಾರೆ. ಊರಿನವರು ಕೆರೆ ಬಳಿಗೆ ಬಂದು ರಕ್ಷಿಸುವ ವೇಳೆಗೆ ತಾತ ಮತ್ತು ಮೊಮ್ಮಗ ಇಬ್ಬರೂ ಮೃತಪಟ್ಟಿದ್ದರು.[ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐದು ದಿನದ ಮಗು, ಪೋಷಕರ ಆಕ್ರೋಶ]

ಈ ಕೆರೆಯಲ್ಲಿ ಗ್ರಾಮಸ್ಥರು ಹೂಳು ತೆಗೆದಿದ್ದರು. ಕೆರೆ ಆಳವಾಗಿತ್ತು. ಅಲ್ಲದೆ ಕೆರೆಯಲ್ಲಿ ಹೊಸ ಮಣ್ಣು ಜಾರುತ್ತಿದ್ದುದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಮರದ ಕೊಂಬೆ ಬಿದ್ದು ತಿ.ನರಸೀಪುರದಲ್ಲಿ ವ್ಯಕ್ತಿ ಸಾವು
ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ತಿ.ನರಸೀಪುರ ಪಟ್ಟಣದ ವಿದ್ಯೋದಯ ಶಿಕ್ಷಣ ಸಂಸ್ಥೆ ಮುಂಭಾಗ ಸಂಭವಿಸಿದೆ. ತಾಲೂಕಿನ ನೆರಗ್ಯಾತನಹಳ್ಳಿ ಗ್ರಾಮದ ರಾಚಪ್ಪ(40) ಮೃತಪಟ್ಟ ದುರ್ದೈವಿ. ಈತ ಕಳೆದೆರಡು ದಿನಗಳಿಂದ ವಿದ್ಯೋದಯ ಕಾಲೇಜು ಸಂಸ್ಥೆಯ ಮುಂಭಾಗದಲ್ಲಿರುವ ಮರಗಳನ್ನು ಕಡಿಯುವ ಕೆಲಸ ಮಾಡುತ್ತಿದ್ದರು.
ಮರವನ್ನು ಕಡಿಯುತ್ತಿದ್ದ ಸಂದರ್ಭ ಶನಿವಾರ ಬೆಳಗ್ಗೆ ಕೊಂಬೆ ಆಕಸ್ಮಿಕ ಮುರಿದು ಬಿದ್ದು ತಲೆಗೆ ಪೆಟ್ಟು ಬಿದ್ದಿದೆ. ತಕ್ಷಣ ತಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ರಾಯಚೂರಿನಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ]
ಮೃತ ರಾಚಪ್ಪನಿಗೆ ಪತ್ನಿ ಸೇರಿದಂತೆ ಇಬ್ಬರು ಮಕ್ಕಳಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ಗಂಡನ ಸಾವಿನಿಂದ ಪತ್ನಿ ಹಾಗೂ ಮಕ್ಕಳು ಕಂಗಲಾಗಿದ್ದಾರೆ. ಮೃತ ರಾಚಪ್ಪನ ಹೆಂಡತಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಹಾಗೂ ಇಬ್ಬರು ಮಕ್ಕಳಿಗೆ ಸಂಪೂರ್ಣ ವಿದ್ಯಾಬ್ಯಾಸ ಕೊಡಿಸುವ ಭರವಸೆ ನೀಡುವ ಮೂಲಕ ಶಿಕ್ಷಣ ಸಂಸ್ಥೆ ಮಾನವೀಯತೆ ಮೆರೆದಿದೆ.











Click it and Unblock the Notifications