ಮೈಸೂರಿನಲ್ಲಿ ಕಳೆಗಟ್ಟಿದ ವರಮಹಾಲಕ್ಷ್ಮಿ ಹಬ್ಬ: ವ್ಯಾಪಾರ ಬಲು ಜೋರು
ಮೈಸೂರು, ಆಗಸ್ಟ್.23 : ಶ್ರಾವಣ ಮಾಸ ಬಂತೆಂದರೆ ಹಬ್ಬಗಳದ್ದೇ ಕಾರುಬಾರು. ಗೃಹಿಣಿಯರಂತೂ ಇನ್ನಿಲ್ಲದ ಪೂಜಾ ಕಾರ್ಯಗಳಲ್ಲಿ ಮುಳುಗಿ ಬಿಡುತ್ತಾರೆ. ಈ ಮಾಸದ ಶುಕ್ಲಪಕ್ಷದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ. ಹಬ್ಬಕ್ಕೆ ಇದೀಗ ಮೈಸೂರು ನಗರದ ಮನೆ ಮನೆಗಳಲ್ಲೂ ತಯಾರಿ ನಡೆಯುತ್ತಿದೆ.
ಮಾವಿನಸೊಪ್ಪು, ಬಾಳೆಕಂದು, ತಾವರೆ ಮೊಗ್ಗು, ಲಕ್ಷ್ಮಿ ಮುಖವಾಡ... ಹೀಗೆ ಹಬ್ಬಕ್ಕೆ ಅಗತ್ಯವಾದ ಪರಿಕರಗಳು ನಗರದ ವಿವಿಧ ಮಾರುಕಟ್ಟೆಗಳಿಗೆ ಬಂದಿವೆ. ಹಬ್ಬಕ್ಕೆ ಎರಡು ದಿನ ಇರುವಾಗಲೇ ಬಿರುಸಿನ ವ್ಯಾಪಾರ ನಡೆಯುತ್ತಿದೆ.
ನಗರದ ಹೃದಯಭಾಗವಾದ ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರ ಹೆಚ್ಚಾಗಿತ್ತು. ಅಗ್ರಹಾರ ವೃತ್ತ, ವಾಣಿವಿಲಾಸ ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆ, ನಂಜುಮಳಿಗೆ ಮಾರುಕಟ್ಟೆಗಳಲ್ಲೂ ವ್ಯಾಪಾರ ಕಳೆಗಟ್ಟಿದೆ.
ಗುರುವಾರ ಹಬ್ಬಕ್ಕೆ ಅತ್ಯಗತ್ಯವಾಗಿ ಬೇಕಿರುವ ಗುಲಾಬಿ ಹೂವಿನ ದರ ಕೆಜಿ 400ಕ್ಕೆ ಏರಿಕೆಯಾಗಿದೆ. ಸೇವಂತಿಗೆ ಕೆ.ಜಿಗೆ 80ರಿಂದ 320 ರೂ. ಹೆಚ್ಚಾಗಿದೆ. ಕೆ.ಜಿಗೆ 280 ರೂ.ಇದ್ದ ಮಲ್ಲಿಗೆ 400 ರೂ, 1,600 ರೂ. ಇದ್ದ ಕನಕಾಂಬರ 2 ರೂ ಸಾವಿರ, 440 ರೂ.ಇದ್ದ ಕಾಕಡ 600ಕ್ಕೆ, 250 ರೂ. ಇದ್ದ ಮರಳೆ 600ಕ್ಕೆ ಏರಿಕೆ ಕಂಡಿದೆ.
ಭ್ರಾತೃತ್ವದ ದ್ಯೋತಕ ರಾಖಿ ಹಬ್ಬ: ಪುರಾಣ, ಐತಿಹಾಸಿಕ ಮಹತ್ವ
ಮಹಿಳೆಯರು ಹಬ್ಬಕ್ಕೆ ಯಾವ ರೀತಿ ತಯಾರಿ ನಡೆಸುತ್ತಿದ್ದಾರೆ?, ವ್ಯಾಪರಸ್ಥರ ಅನಿಸಿಕೆ ಏನು? ಯಾವುದರ ದರ ಎಷ್ಟಿದೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ತಾವರೆಗೆ ಹೆಚ್ಚಿದ ಬೇಡಿಕೆ
ಹಬ್ಬಕ್ಕೆ ಅಗತ್ಯ ಎನಿಸುವ ತಾವರೆ ಹೂ ಬೆಲೆಗೆ ಬೇಡಿಕೆ ಸೃಷ್ಟಿಯಾಗಿದೆ. ಒಂದು ತಾವರೆ ಮೊಗ್ಗು 20 ರೂ ರಿಂದ 30 ರೂ ರವರೆಗೆ ಮಾರಾಟವಾಗುತ್ತಿದೆ. ಸೀತಾಫಲಕ್ಕೂ ಹೆಚ್ಚಿನ ಬೇಡಿಕೆ ಇರುವುದರಿಂದ ಮಾಗದ ಸೀತಾಫಲಗಳೇ ಹೆಚ್ಚಾಗಿ ಕಂಡು ಬರುತ್ತಿದೆ.
ಕೈಬಳೆಗಳಿಗೂ ಬೇಡಿಕೆ ಇರುವುದರಿಂದ ದೇವರಾಜ ಮಾರುಕಟ್ಟೆಯ ಮುಂದೆ ಸಯ್ಯಾಜಿರಾವ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕೈಬಳೆಗಳನ್ನು ಹರಡಿಕೊಂಡು ವ್ಯಾಪಾರಸ್ಥರು ಕುಳಿತಿದ್ದಾರೆ. ಬಣ್ಣ, ಗುಣಮಟ್ಟ, ವಿನ್ಯಾಸಕ್ಕೆ ತಕ್ಕಂತೆ ಬೆಲೆ ಇದೆ.
ವರಮಹಾಲಕ್ಷ್ಮಿ ವ್ರತ: ಆಚರಣೆ ಹೇಗೆ, ಏಕೆ? ವೈಶಿಷ್ಟ್ಯವೇನು?
2 ತಿಂಗಳಿನಿಂದ ಸಿದ್ಧತೆ
ಕೆಲವರು ಅದ್ಧೂರಿಯಾಗಿ ಲಕ್ಷ್ಮಿ ಅಲಂಕಾರ ಮಾಡಿದರೆ, ಇನ್ನು ಕೆಲವರು ಸರಳ ಪೂಜೆ ರೂಢಿಸಿಕೊಂಡಿದ್ದಾರೆ. ಬೇಡಿದ ವರ ಕೊಡುವ ವರಮಹಾಲಕ್ಷ್ಮಿಯ ಆರಾಧನೆಗೆ ಕೆಲವರು 2 ತಿಂಗಳಿನಿಂದಲೇ ಸಿದ್ಧತೆ ನಡೆಸುತ್ತಾರೆ. ಮಾರುಕಟ್ಟೆಯಲ್ಲೂ ಲಕ್ಷ್ಮಿಯ ಆಲಂಕಾರಿಕ ವಸ್ತುಗಳ ವ್ಯಾಪಾರ ಭರಾಟೆಯಿಂದ ಸಾಗಿದೆ.
2018 - ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬಹರಿದಿನಗಳ ಪಟ್ಟಿ
ಗೃಹಿಣಿ ಲೀಲಾವತಿ ಅನಿಸಿಕೆ
ಕೆಲ ಮನೆಗಳಲ್ಲಿ ಲಕ್ಷ್ಮಿ ಅಲಂಕಾರಕ್ಕೆ ಆದ್ಯತೆ ನೀಡಿದರೆ, ಇನ್ನು ಕೆಲವರು ನೈವೇದ್ಯಕ್ಕೆ ಪ್ರಾಮುಖ್ಯ ನೀಡುತ್ತಾರೆ. ಲಕ್ಷ್ಮಿಗೆ ಇಷ್ಟವಾದ ಖಾದ್ಯ ತಯಾರಿ ವಾರದಿಂದಲೇ ನಡೆಯುತ್ತದೆ. ಈ ಮೊದಲು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಈ ವ್ರತ ಇಂದು ಪ್ರತಿಯೊಬ್ಬರ ಮನೆ ಮಾತಾಗಿದೆ.
"ಶ್ರಾವಣ ಮಾಸದ ಪ್ರತಿ ಹಬ್ಬವನ್ನೂ ಸಂಭ್ರಮದಿಂದ ಮಾಡುತ್ತೇವೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ತುಸು ಅದ್ಧೂರಿಯಾಗೇ ಆಚರಿಸುತ್ತೇವೆ. ಮೊದಲಿನಿಂದಲೂ ಲಕ್ಷ್ಮಿ ಎಂದರೆ ನನಗೆ ವಿಶೇಷ ಭಕ್ತಿ. ಹಾಗಾಗಿ ಮದುವೆಯಾದ ಬಳಿಕ ಈ ಲಕ್ಷ್ಮಿ ಹಬ್ಬವನ್ನು ನನ್ನದೇ ಶೈಲಿಯಲ್ಲಿ ಆಚರಿಸುವುದನ್ನು ರೂಢಿಸಿಕೊಂಡೆ.
ಲಕ್ಷ್ಮಿಯನ್ನು ಶೃಂಗರಿಸಲು 2 ತಿಂಗಳು ಮೀಸಲಿಡುತ್ತೇನೆ. ಮನಸಾರೆ ಪೂಜೆ ಮಾಡಿದರೆ ಆತ್ಮತೃಪ್ತಿ ಸಿಗುತ್ತದೆ" ಎನ್ನುತ್ತಾರೆ ಲೀಲಾವತಿ.
ಭಿನ್ನತೆ ಬಯಸುವ ಗ್ರಾಹಕರು
ಲಕ್ಷ್ಮಿ ಹಬ್ಬ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಲಕ್ಷ್ಮಿ ಮುಖಗಳದ್ದೇ ಕಾರುಬಾರು. ಬಿಂಬ, ರೇಷ್ಮೆ ಬಟ್ಟೆ, ಮುತ್ತು- ಹರಳಿನ ಹಾರಗಳು, ನೆಕ್ಲೆಸ್, ಹತ್ತಿ ಹಾರಗಳು, ಲಕ್ಷ್ಮಿಯ ದೇಹ ಹೀಗೆ ವಿವಿಧ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
"25 ವರ್ಷಗಳಿಂದ ಲಕ್ಷ್ಮಿಯ ವಿವಿಧ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ಆರಂಭಕ್ಕೂ ಈಗೀಗೂ ಸಾಕಷ್ಟು ಬದಲಾಗಿದೆ. ಈಗ ಎಲ್ಲ ವರ್ಗದ ಜನ ಈ ಹಬ್ಬ ಆಚರಿಸುವುದರಿಂದ ಆಲಂಕಾರಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೇ, ಆಧುನಿಕತೆಯ ಸ್ಪರ್ಶದಿಂದ ಗ್ರಾಹಕರು ಭಿನ್ನತೆ ಬಯಸುತ್ತಾರೆ. ಅವರ ಬೇಡಿಕೆಗೆ ಅನುಗುಣವಾಗಿ ವಸ್ತುಗಳನ್ನು ತರಿಸುತ್ತೇವೆ" ಎನ್ನುತ್ತಾರೆ ಅಂಗಡಿ ಮಾಲೀಕರು.