"ಬಿಎಸ್ ವೈ ಭಾವನಾತ್ಮಕವಾಗಿ ಮಾತಾಡಿದ್ದಕ್ಕೆ ಅರ್ಥ ಕಲ್ಪಿಸುವುದು ಬೇಡ"
ಮೈಸೂರು, ನವೆಂಬರ್ 2: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಶಾಸಕಾಂಗ ಸಭೆಯಲ್ಲಿ ಅನರ್ಹ ಶಾಸಕರ ಕುರಿತು ಮಾತನಾಡಿದರೆನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ, "ಆಡಿಯೋ ವೈರಲ್ ಆಗಿರುವುದು ಬೇಸರ ಮತ್ತು ನೋವುಂಟು ಮಾಡಿದೆ. ಭಾವನಾತ್ಮಕವಾಗಿ ಯಡಿಯೂರಪ್ಪ ಈ ರೀತಿ ಮಾತನಾಡಿದ್ದಾರೆ ಹೊರತು ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ" ಎಂದು ಹೇಳಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು "ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು. ಅವರು 17 ಜನ ಅನರ್ಹರು ಬಿಜೆಪಿಗೆ ಬರುತ್ತಾರೆ ಎಂದು ಹೇಳಿಲ್ಲ. ಇರುವ ವಾಸ್ತವಾಂಶವನ್ನು ಹೇಳಿದ್ದಾರೆ. ಆ ಆಡಿಯೋ ಏಕೆ ವೈರಲ್ ಆಯಿತು ಗೊತ್ತಿಲ್ಲ. ವೈರಲ್ ಆಗಿರುವುದು ದುರದೃಷ್ಟಕರ. ನನಗೆ ಬೇಸರ ತರಿಸಿದೆ" ಎಂದರು.
"ಅನರ್ಹ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದಲೇ ನಾವು ಅಧಿಕಾರ ನಡೆಸಲು ಸಾಧ್ಯವಾಗಿದೆ ಎಂಬ ವಿಚಾರವನ್ನು ಯಡಿಯೂರಪ್ಪ ಹೇಳಿದ್ದಾರೆ. ಮುಂದಿನದನ್ನು ನಮ್ಮ ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ" ಎಂದರು. ರಾಜ್ಯ ಸರ್ಕಾರ ಇಂದಿಗೆ ಅಧಿಕಾರಕ್ಕೆ ಬಂದು 100 ದಿನವಾಗಿದ್ದು ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಚರ್ಚೆಗೆ ಸಿದ್ಧನಿದ್ದೇನೆ. ಅವರ ಕಾಲದಲ್ಲಿ 100 ದಿನದಲ್ಲಿ ಆಗಿರುವುದು ಏನು, ನಮ್ಮ ಕಾಲದಲ್ಲಿ ಆಗಿರುವುದು ಏನು ಎಂಬುದನ್ನು ಚರ್ಚೆ ಮಾಡೋಣ ಎಂದು ಮಾತನಾಡಿದ ಸಚಿವ ಸೋಮಣ್ಣ, ನಮ್ಮ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿಲ್ಲ, ನಾನು ಒಂದೇ ಒಂದು ವರ್ಗಾವಣೆಗೆ ಸಹಿ ಮಾಡಿಲ್ಲ ಎಂದರು.

"ಅನರ್ಹ ಶಾಸಕರ ಬಗ್ಗೆ ಇತರರು ಅಥವಾ ಶಾಸಕ ಉಮೇಶ್ ಕತ್ತಿ ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ, ನಮ್ಮ ಸಿಎಂ ಏನು ಹೇಳುತ್ತಾರೆ, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದೇ ಮುಖ್ಯ, ಅದಕ್ಕೆ ನಾವೆಲ್ಲ ಬದ್ಧರು" ಎಂದು ಹೇಳಿದರು.












Click it and Unblock the Notifications