ಯುವ ದಸರಾದಲ್ಲಿ ಚಂದನ್ ಪ್ರೇಮ ನಿವೇದನೆ; ಅಕ್ಷಮ್ಯ ಅಪರಾಧ ಎಂದ ಸೋಮಣ್ಣ
ಮೈಸೂರು, ಅಕ್ಟೋಬರ್ 5: ಗಾಯಕ ಚಂದನ್ ಶೆಟ್ಟಿ ಅವರು ಶುಕ್ರವಾರ ರಾತ್ರಿ ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿರುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಮೈಸೂರು ಉಸ್ತುವಾರಿ ಸಚಿವ ವಿ ಸೋಮಣ್ಣ ಇದರಿಂದ ಕೆಂಡಾಮಂಡಲವಾಗಿದ್ದು ಇದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಚಂದನ್ ಮತ್ತು ನಿವೇದಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸೋಮಣ್ಣ, "ಯುವ ದಸರಾ ವೇದಿಕೆ ಚಾಮುಂಡಿಶ್ವರಿಯ ದೇವರ ಸನ್ನಿಧಿ. ಆ ತಾಯಿಯ ಸನ್ನಿಧಿಯಲ್ಲಿ ಈ ರೀತಿಯ ನಡೆ ಸರಿಯಲ್ಲ. ಇನ್ನು ಆರು ತಿಂಗಳಲ್ಲಿ ಅವರಿಬ್ಬರಿಗೂ ಆ ತಾಯಿ ಶಿಕ್ಷೆ ನೀಡುತ್ತಾಳೆ. ಈ ಅಪರಾಧಕ್ಕೆ ಕ್ಷಮೆಯೇ ಇಲ್ಲ" ಎಂದಿದ್ದಾರೆ.

"ಇವರು ಕನ್ನಡದವರು ಸಂಸ್ಕೃತಿ ಗೊತ್ತಿರುವವರು ಅಂದುಕೊಂಡಿದ್ದೆ. ಆದರೆ ಇವರಿಗೆ ಸಂಸ್ಕ್ರತಿ ಇಲ್ಲ. ಇವರ ವಿರುದ್ಧ ಕಾನೂನು ಕ್ರಮಕ್ಕೆ ಪೋಲಿಸ್ ಇಲಾಖೆಗೆ ಸೂಚನೆ ಕೊಟ್ಟಿದ್ದೇನೆ. ಕಾರಣ ಕೇಳಿ ನೋಟಿಸ್ ನೀಡುವುದಕ್ಕೆ ಎಸ್ಪಿಗೂ ಡೈರೈಕ್ಷನ್ ಮಾಡಿದ್ದೇನೆ. ಇದು ಯುವ ದಸರಾ ಉಪಸಮಿತಿಯ ತಪ್ಪಲ್ಲ. ಅವರೇ ಮಾಡಿಕೊಂಡಿರುವ ಯಡವಟ್ಟು. ಎಷ್ಟೇ ದೊಡ್ಡವರಾದ್ರೂ ಕಾನೂನು ಕ್ರಮ ಜರುಗಿಸುತ್ತೇನೆ" ಎಂದು ಕಿಡಿಕಾರಿದರು. ಯುವ ದಸರಾ ವೇದಿಕೆಯಲ್ಲಿ ಶುಕ್ರವಾರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸಹ ಯುವ ದಸರಾ ವೇದಿಕೆಯಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಗಾಯಕ ಚಂದನ್ ಶೆಟ್ಟಿ, "ತಪ್ಪಾಗಿದ್ದರೆ ಕ್ಷಮೆ ಇರಲಿ. ಪ್ರೇಮ ನಿವೇದನೆ ಮಾಡಿಕೊಳ್ಳಲು ಒಳ್ಳೆಯ ದಿನ ಅಂದುಕೊಂಡು, ನನ್ನ ಜೀವನದಲ್ಲಿ ಸಹ ಪ್ರಮುಖ ದಿನ ಎಂದುಕೊಂಡು ಮೈಸೂರಿನ ಯುವ ದಸರಾದಲ್ಲಿ ಈ ರೀತಿ ಮಾಡಿದೆ. ನನಗನ್ನಿಸಿದ್ದನ್ನು ನಾನು ಹೇಳಿದೆ, ಈ ಕುರಿತು ತಪ್ಪಾಗಿದ್ದಲ್ಲಿ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ಶುಕ್ರವಾರದ ಆ ಕಾರ್ಯಕ್ರಮಕ್ಕೆ ಸೇರಿದವರಲ್ಲಿ ಬಹುತೇಕರು ನಮ್ಮ ಹಿತೈಶಿಗಳು. ಸಪ್ರ್ರೈಸ್ ಕೊಡಬೇಕು ಎಂದುಕೊಂಡು ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿದೆ" ಎಂದು ತಿಳಿಸಿದ್ದರು.












Click it and Unblock the Notifications