ಹಸ್ತಪ್ರತಿ ರಕ್ಷಣೆಗೆ ಮೈಸೂರು ವಿವಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ
ಮೈಸೂರು, ಜನವರಿ 9: ಶತಮಾನದ ಇತಿಹಾಸವಿರುವ ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ಪುರಾತನ ಕಾಲದ ತಾಳೆಗರಿಯ ಹಸ್ತ ಪ್ರತಿಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಂರಕ್ಷಿಸುವ ಪ್ರಯತ್ನಕ್ಕೆ ಚಿಂತನೆ ನಡೆದಿದೆ.
ಈ ಅಮೂಲ್ಯ ಹಸ್ತಪ್ರತಿಗಳನ್ನು ಹೆಚ್ಚು ವರ್ಷಗಳ ಕಾಲ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬುಧವಾರ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಭೇಟಿ ನೀಡಿದರು.
ದೀಪಿಕಾ ಪಡುಕೋಣೆಗೆ "ಆಲ್ ದಿ ಬೆಸ್ಟ್' ಹೇಳಿದ ಪ್ರತಾಪ್ ಸಿಂಹ
ಸಂಸದರು ಹಾಗೂ ಮೈಸೂರು ವಿವಿ ಅಧಿಕಾರಿಗಳು ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ಹಸ್ತ ಪ್ರತಿಗಳನ್ನು ಯಾವ ರೀತಿ ಆಧುನಿಕವಾಗಿ ಸಂರಕ್ಷಣೆ ಮಾಡಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿದರು.
ಸಂರಕ್ಷಣೆ ಬಗ್ಗೆ ಮಾಹಿತಿ
ಮೈಸೂರು ವಿವಿಯ ಈ ಪ್ರಯತ್ನಕ್ಕೆ ಪೂರಕವಾಗಿ ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಆಸಕ್ತಿ ತೋರಿರುವ ಬೆಂಗಳೂರಿನ ತಾರಾ ಪ್ರಕಾಶನ ಸಂಸ್ಥಾಪಕ ಹಾಗೂ ನ್ಯೂಯಾರ್ಕ್ನ ಆರ್ಐಟಿ ವಿಶ್ವವಿದ್ಯಾಲಯದ ಪ್ರೊ.ಆರ್.ಆರ್.ಮುಕುಂದ್ ಅವರು, ಹಸ್ತ ಪ್ರತಿಗಳನ್ನು ಸಂರಕ್ಷಿಸಲು ಯಾವ ಸಾಫ್ಟ್ವೇರ್ ಬಳಸಬೇಕು, ಜನರಿಗೆ ತಲುಪಿಸಲು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಯಾವ ರೀತಿ ಸ್ಕ್ಯಾನಿಂಗ್ ಮಾಡಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಪ್ರೊ.ಆರ್.ಆರ್. ಮುಕುಂದ್, ""ವೈದಿಕ ಸಂಪ್ರದಾಯದ ಹಲವು ತಾಳೆಗರಿಗಳ ಪ್ರತಿಗಳನ್ನು ಮುಂದಿನ ತಲೆಮಾರಿಗೆ ಉಳಿಸಬೇಕಿದೆ. ಇದನ್ನು ಮಲ್ಟಿಸೆಕ್ಟ್ರಮ್ ಇಮೇಜಿಂಗ್ ಸಿಸ್ಟಮ್ ಮೂಲಕ ಸಂರಕ್ಷಿಸಬಹುದಾಗಿದೆ. ನಮ್ಮ ಸಂಸ್ಥೆ ಭಾರತದಲ್ಲಿಯೇ ಈ ತಂತ್ರಜ್ಞಾನ ಹೊಂದಿರುವ ಏಕೈಕ ಸಂಸ್ಥೆಯಾಗಿದೆ'' ಎಂದರು.
ವಿಶ್ವದಲ್ಲೇ ಅತಿಹೆಚ್ಚು ಹಸ್ತಪ್ರತಿ
ಅಷ್ಟೇ ಅಲ್ಲದೇ ಸೆಮಿ ಕಂಡಕ್ಟರ್ ವೆಫಲ್ ಫಿಷ್ ಟೆಕ್ನಾಲಜಿ ಮೂಲಕ 600 ತಾಳೆಗರಿ ಹಸ್ತಪ್ರತಿ ವಿಷಯವನ್ನು ನೂರಾರು ವರ್ಷಗಳವರೆಗೆ ಸಂರಕ್ಷಿಸಬಹುದು. ಇದಕ್ಕೆ ಆಕೇವೈಲ್ ಪೇಪರ್ ಮೂಲಕ ಸಂಗ್ರಹಿಸಿರುವ ಪ್ರತಿಯನ್ನು ಚೆನ್ನಾಗಿ ಓದಬಹುದು ಮತ್ತು ಅದನ್ನು 250 ವರ್ಷಗಳ ಕಾಲ ಉಳಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಮೈಸೂರು ವಿಶ್ವವಿದ್ಯಾಲಯ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ವಿಶ್ವದಲ್ಲೇ ಅತ್ಯಧಿಕ ಎನ್ನಲಾದ 70 ಸಾವಿರ ಹಸ್ತ ಪ್ರತಿಗಳ ಸಂಗ್ರಹವಿದೆ. ಪ್ರಮುಖವಾಗಿ ಕೌಟಿಲ್ಯನ ಅರ್ಥಶಾಸ್ತ್ರ, ಪುರಾತನ ಭಗವದ್ಗೀತೆ, ಅತ್ಯಂತ ಕಿರಿಯದಾದ ಭಗವದ್ಗೀತೆ, ಅತ್ಯಂತ ದೊಡ್ಡ ಹಸ್ತ ಪ್ರತಿಯಾದ ವೀರ ಮಹೇಶ್ವರಾಚಾರ್ ಸಂಗ್ರಹ, ದೇವಿಸ್ತೋತ್ರಂ, ನಾಟ್ಯ ಶಾಸ್ತ್ರ, ಸೌಂದರ್ಯ ಶಾಸ್ತ್ರ ಸೇರಿದಂತೆ ಹಲವು ತಾಳೆಗರಿ ಹಸ್ತಪ್ರತಿಗಳ ಸಂಗ್ರಹವಿದೆ.
ತನ್ವೀರ್ ಸೇಠ್ ಧ್ವನಿ ಕೇಳಿ ಕಣ್ಣೀರಿಟ್ಟ ಬೆಂಬಲಿಗರು
ಸರ್ಕಾರದಿಂದ ಅನುದಾನಕ್ಕೆ ಕ್ರಮ: ಪ್ರತಾಪ್ ಸಿಂಹ
ಪ್ರೊ.ಆರ್.ಆರ್.ಮುಕುಂದ್ ಅವರು ಹೊಸ ತಂತ್ರಜ್ಞಾನದಲ್ಲಿ ತಾಳೆಗರಿಯ ಮೂಲ ವಿಷಯಗಳನ್ನು ರಕ್ಷಿಸಲು ಕಳೆದ ಇಪ್ಪತ್ತು ವರ್ಷಗಳಿಂದ ತಡಗಿಕೊಂಡಿದ್ದಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಡಿಜಿಟಲ್ ಮತ್ತು ಪುಸ್ತಕದ ರೂಪದಲ್ಲಿ ಪ್ರತಿಯನ್ನು ಸಂಗ್ರಹಿಸಲಿದ್ದು, ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹಾಗೂ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೊಂದಿಗೆ ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ತಾಳೆಗರಿ ಸಂರಕ್ಷಿಸಲಗುವುದು ಎಂದರು.
ಸಭೆಯಲ್ಲಿ ತೀರ್ಮಾನ ಮಾಡಿ ಅಂತಿಮ ಮಾಡಲಾಗುವುದು
ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ತಾಳೆಗರಿ ಹಸ್ತಪ್ರತಿಗಳನ್ನು ಸಂರಕ್ಷಿಸುವ ಕುರಿತು ಮೊದಲ ಹೆಜ್ಜೆಯಾಗಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸಧ್ಯದಲ್ಲಿಯೇ ಅಂತಿಮವಾಗಲಿದೆ ಎಂದು ಪ್ರೊ.ಆರ್.ಆರ್.ಮುಕುಂದ್ ಹೇಳಿದರು.
ಈ ಸಂಬಂಧ ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರೊಂದಿಗೆ ಹಾಗೂ ವಿವಿಯ ಸಿಂಡಿಕೇಟ್ ಮಂಡಳಿ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯ ನಿರ್ದೇಶಕ ಡಾ.ಎಸ್.ಶಿವರಾಜಪ್ಪ, ಡಾ.ಚೇತನ್ ಇನ್ನಿತರರು ಹಾಜರಿದ್ದರು.