ಮೈಸೂರು ಜಿಲ್ಲೆಯಲ್ಲಿ ಇದೇ ತಿಂಗಳಿನಲ್ಲಿ ನಡೆಯಲಿದೆ 2 'ಉದ್ಯೋಗ ಮೇಳ'
ಮೈಸೂರು, ಫೆಬ್ರವರಿ 19: ಕೌಶಲಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ಜಿಲ್ಲಾಡಳಿತ ವತಿಯಿಂದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಫೆ. 24 ಹಾಗೂ 25ರಂದು ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡಲು ವೆಬ್ ಸೈಟ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಸುಮಾರು 50 ಕಂಪನಿಗಳು ಭಾಗವಹಿಸಲಿವೆ. 10ನೇ ತರಗತಿ, ಅನುತ್ತೀರ್ಣ/ಉತ್ತೀರ್ಣ ಸೇರಿದಂತೆ ಸ್ನಾತಕೋತರ ಹಾಗೂ ತಾಂತ್ರಿಕ ಶಿಕ್ಷಣ ಪಡೆದ ನಿರುದ್ಯೋಗಿ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ ಎಂದರು.
ಮೇಳದಲ್ಲಿ ಭಾಗವಹಿಸುವ ಉದ್ಯೋಗದಾತರಿಗೆ 50 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನೋಂದಣಿಗಾಗಿ 15 ಕೌಂಟರ್ಗಳನ್ನು ತೆರೆಯಲಾಗುವುದು. ಈ ಮೇಳದಲ್ಲಿ ಪ್ರತಿ ದಿನ ಸುಮಾರು 3,000 ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರತಿ ತಾಲ್ಲೂಕುಗಳಿಗೂ ಕೆಎಸ್ ಆರ್ಟಿಸಿಯಿಂದ ಹೆಚ್ಚಿನ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಟಿಡಿ ತಿಳಿಸಿದರು.

ಇ-ಮೇಲ್ ಮೂಲಕ ಕೋಡ್
ಅಭ್ಯರ್ಥಿಗಳು ಮೈಸೂರು ಚಾಮರಾಜನಗರ.ಕಾಂ ಎಂಬ ವೆಬ್ ಸೈಟ್ ನಲ್ಲಿ ಆಧಾರ್ ಸಂಖ್ಯೆಯೊಂದಿಗೆ ಸ್ವವಿವರ ನಮೂದಿಸಬೇಕು. ವಿವರ ನಮೂದಿಸುವ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅರ್ಹತೆ ಮೇರೆಗೆ ಎಸ್ಎಂಎಸ್ ಅಥವಾ ಇ-ಮೇಲ್ ಮೂಲಕ ಕೋಡ್ ನೀಡಲಾಗುವುದು. ಈ ಕೋಡ್ ಅನ್ನು ಉದ್ಯೋಗ ಮೇಳಕ್ಕೆ ತರಬೇಕು. ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಅಂತಹ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಒದಗಿಸಲಾಗುವುದು ಎಂದು ಜಿಟಿಡಿ ವಿವರಿಸಿದರು.

ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು
ಐಟಿ-ಬಿಟಿ, ಆಟೊಮೊಬೈಲ್, ಮೆಕಾನಿಕಲ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್, ಟೆಲಿಕಾಂ, ಬಿಪಿಓ, ಬ್ಯಾಂಕಿಂಗ್, ಫೈನಾನ್ಸ್, ಇನ್ಸೂರೆನ್ಸ್, ಹಾಸ್ಪಿಟಲ್, ಫಾರ್ಮಸಿಟಿಕಲ್, ಹೆಲ್ತ್ ಕೇರ್, ಮ್ಯಾನುಫ್ಯಾಕ್ಚರಿಂಗ್, ಟ್ರಾನ್ಸ್ ಪೋರ್ಟ್, ಸರ್ವೀಸಸ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತಿವೆ.

ಕಾಂಗ್ರೆಸ್ ನಿಂದ ಉದ್ಯೋಗ ಮೇಳ
ಇತ್ತ ಅಕ್ಷರ ಫೌಂಡೇಷನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಕಾಂಗ್ರೆಸ್ ಪಕ್ಷವು ಫೆ.23ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದ ಅಗ್ನಿ ನೇತ್ರಾಂಬಿಕ ದೇವಸ್ಥಾನ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ. ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತಿದ್ದು, 5 ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳಿವೆ. 18 ರಿಂದ 35 ವರ್ಷ ವಯೋಮಿತಿಯೊಳಗಿನ 8ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ.

ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಣೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಗುವುದು.ಮೇಳಕ್ಕೆ ಬರುವಾಗ ಅಂಕ ಪಟ್ಟಿ, ಸ್ವಪರಿಚಯ ಮೊದಲಾದ ದಾಖಲೆಗಳ ಜೊತೆ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.












Click it and Unblock the Notifications