ಚಾನೆಲ್ ಗಳ ಟಿ ಆರ್ ಪಿ ದಾಹದ ವಿರುದ್ಧ ಪ್ರತಾಪ್ ಸಿಂಹ ಗರ್ಜನೆ!
ಮೈಸೂರು, ನವೆಂಬರ್ 29 : ಬ್ರೇಕಿಂಗ್ ನ್ಯೂಸ್ ಕೊಡುವ ಧಾವಂತದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಸುದ್ದಿಯನ್ನು ಪರಾಮರ್ಶಿಸಿ ಬಿತ್ತರಿಸುವ ಸಂಯಮ ಮರೆತಿವೆ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಅವಮಾನದ ಸುದ್ದಿಗೂ, ನನಗೂ ಸಂಬಂಧವಿಲ್ಲ, ಅವರು ನನ್ನ ಬೆಂಬಲಿಗರಲ್ಲ. ಯಾರೋ ಮಾಡಿದ ತಪ್ಪಿಗೆ ನನ್ನನ್ನು ಹೊಣೆ ಮಾಡುವುದು ಸರಿಯಲ್ಲ, ಇಂತಹ ವಿಚಾರದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಸಂಯಮ ಅಗತ್ಯ, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವೆ, ಆದರೆ ಸುದ್ದಿ ಬಿತ್ತರಿಸುವ ಧಾವಂತದಲ್ಲಿ ಬೆಳಗಿನಿಂದ ಚಾರಿತ್ರ್ಯ ವಧೆ, ತೇಜೋವಧೆ ನಡೆಸಿ ಸಂಜೆ ಕ್ಷಮೆಯಾಚಿಸಿದರೆ ಉಪಯೋಗವಿಲ್ಲ ಎಂದು ದೃಶ್ಯ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಯೇ ತಪ್ಪಾಗಿ ಬಿಂಬಿತವಾಗಿದೆ :
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂಪಾ ಬಗ್ಗೆ ನೀಡಿರುವ ಹೇಳಿಕೆಯನನ್ನ ತಪ್ಪಾಗಿ ಅರ್ಥೈಸಲಾಗಿದ್ದು, ಜಾತ್ಯಾತೀತತೆ ಬಗ್ಗೆ ಮಾತನಾಡಿದರೆ ಕೇಂದ್ರ ಸಚಿವ ಅನಂತ ಕುಮಾರ್ ಅವರು ರಾತ್ರಿ ಹೊತ್ತು ಉಚ್ಚೆ ಹೊಯ್ಯುವರು ಎನ್ನುವ ಚಂಪಾ ಹೇಳಿಕೆಗೆ, ಆ ಉಚ್ಚೆ ವಾಸನೆ ಚಂಪಾ ಬಾಯಿಯಲ್ಲಿ ಬರುವುದು ಎಂದಷ್ಟೇ ಹೇಳಿದ್ದೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಮೈಸೂರು ಪೇಟ ಹಾಕಲ್ಲಾ, ಭುವನೇಶ್ವರ ತಾಯಿ ಪೂಜೆ ಮಾಡಲ್ಲ ಅಂದ್ರೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಯಾಕೆ ಒಪ್ಪಿಕೊಂಡ್ರಿ? ದೇವಸ್ಥಾನಕ್ಕೆ ಹೋಗಲ್ಲ ಅಂದ್ರೆ ಮೈಸೂರಿಗೆ ಯಾಕೆ ಬರುತ್ತೀರಾ ಎಂದು ಸಾಹಿತಿ ಚಂಪಾ ಅವರ ನಡೆಯನ್ನು ಖಂಡಿಸಿದರು.
ಮುದ್ರಣ ಮಾಧ್ಯಮಗಳು ಇಂದಿಗೂ ಗೌರವ ಉಳಿಸಿಕೊಂಡಿವೆ, ಎಷ್ಟೇ ಟಿವಿ ಚಾನಲ್ ಗಳು ಬಂದರು, ದೇಶದಲ್ಲಿ ಮುದ್ರಣ ಮಾಧ್ಯಮಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ, ಮುದ್ರಣ ಮಾಧ್ಯಮಗಳಿಗೆ ಸಂಯಮ ಇದೆ, ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ, ಜೊತೆಗೆ ಸಂಯಮ ಬೆಳೆಸಿಕೊಳ್ಳಬೇಕಿದೆ, ಕ್ರೈಂ, ರಾಜಕಾರಣ ಹೊರತಾಗಿಯೂ ಚರ್ಚಿಸಲು ಹಲವಾರು ಸಾಮಾಜಿಕ ಕಾಳಜಿ ವಿಷಯಗಳಿವೆ ಆ ಬಗ್ಗೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ಮಾಧ್ಯಮಗಳ ವಿರುದ್ಧ ಸಿಂಹ ಕಿಡಿ
ಎಲ್ಲರಿಗೂ ಕೂಡ ವೈಯಕ್ತಿಕ ಬದುಕಿರುತ್ತದೆ. ರಾಜಕಾರಣಕ್ಕಿಂತ ವೈಯಕ್ತಿಕ ಬದುಕು ಮುಖ್ಯವಾದದ್ದು. ಇಂಗ್ಲೀಷ್ ಮಾಧ್ಯಮದಷ್ಟು ಸಂಯಮ ಕನ್ನಡ ಮಾಧ್ಯಮಕ್ಕಿಲ್ಲ ಎಂದು ಕಿಡಿಕಾರಿದರು. ಹಾರ್ದಿಕ್ ಪಟೇಲ್ ಪ್ರಕರಣವನ್ನ ರಾಷ್ಟ್ರೀಯ ವಾಹಿನಿ ನಿರ್ವಹಿಸಿದ್ದನ್ನು ಕನ್ನಡ ಮಾಧ್ಯಮಗಳು ಅನುಸರಿಬೇಕು. ಈ ಮೂಲಕ ವೈಯಕ್ತಿಕ ಚಾರಿತ್ರ್ಯವಧೆ ನಿಲ್ಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.












Click it and Unblock the Notifications