ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಸ್ವಯಂ ಸೇವಾ ಸಂಸ್ಥೆ
ಮೈಸೂರು, ಫೆಬ್ರವರಿ 03: ಮೈಸೂರಿನ ಸ್ವಯಂ ಸೇವಾ ಸಂಸ್ಥೆಯೊಂದು ಸಂಗ್ರಹಿಸಿದ್ದ ಹಳೇ ಶರ್ಟ್ವೊಂದರಲ್ಲಿದ್ದ ಚಿನ್ನದ ಒಡವೆಯನ್ನು ಮಾಲೀಕರಿಗೆ ವಾಪಸ್ ಮಾಡಲಾಗಿದೆ. ಸ್ವಯಂ ಸೇವಾ ಸಂಸ್ಥೆಯ ಪ್ರಾಮಾಣಿಕತೆ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ಎಸ್. ಎಸ್. ಮನೋಜ್ ಸೇವಾಶ್ರಮ ಸಂಸ್ಥೆಯು ಕೇರಳದ ಕೋಯಿಕ್ಕೋಡಿನ ಮಹಿಳೆಯೊಬ್ಬರಿಂದ ಹಳೇ ಬಟ್ಟೆಗಳನ್ನು ಸಂಗ್ರಹಿಸಿತ್ತು. ಆ ಬಟ್ಟೆಗಳ ಪೈಕಿ ಒಂದು ಶರ್ಟ್ನಲ್ಲಿ 2.5 ತೊಲ ಬಂಗಾರ ಸಿಕ್ಕಿತ್ತು.
ಇದನ್ನು ಗಮನಿಸಿದ ಸಂಸ್ಥೆಯ ಸುನಿಲ್ ಹಾಗೂ ತುಕಾರಾಮ್ ಎನ್ನುವವರು ಕೋಯಿಕ್ಕೋಡ್ ಬಸ್ ಹತ್ತಿ ಮಾಲೀಕರಾದ ರಾಜನ್, ರಜತ ದಂಪತಿಯನ್ನು ಭೇಟಿ ಮಾಡಿ ತಮಗೆ ಸಿಕ್ಕ ಬಂಗಾರದ ಚೈನ್ ಹಾಗೂ ಉಂಗುರವನ್ನು ವಾಪಸ್ ಮಾಡಿದ್ದಾರೆ.

ಈ ಕುರಿತು ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಮನೋಜ್ ಸೇವಾಶ್ರಮದ ಅಧ್ಯಕ್ಷ ಮನೋಜ್, "ನಮ್ಮ ಸಂಸ್ಥೆ ಮೈಸೂರು, ಬೆಂಗಳುರು, ಕ್ಯಾಲಿಕಟ್ ಮತ್ತು ಮಂಗಳೂರಿನಲ್ಲಿ ವಿಕಲಚೇತನರು ಮತ್ತು ನಿರ್ಗತಿಕ ವೃದ್ದರಿಗಾಗಿ ಆಶ್ರಮವನ್ನು ಕಳೆದ 6 ವರ್ಷಗಳಿಂದಲೂ ನಡೆಸುತ್ತಿದೆ" ಎಂದರು.
"ಉಳ್ಳವರಿಂದ ನಮ್ಮ ಸಂಸ್ಥೆಯ ಕಾರ್ಯಕರ್ತರು ಬಟ್ಟೆ ಮತ್ತು ಹಣವನ್ನು ಸಂಗ್ರಹಿಸುತ್ತಾರೆ. ಅದೇ ರೀತಿ ಕೇರಳದ ಮಹಿಳೆಯೊಬ್ಬರು ತಮ್ಮ ಪತಿಯ ಹಳೆಯ ಶರ್ಟ್ ಅನ್ನು ನಮಗೆ ನೀಡಿದ್ದರು. ಆದರೆ ಪತಿಯು ಸಂಜೆ ಹಿಂತಿರುಗಿ ಪತ್ನಿಗೆ ಶರ್ಟ್ ಜೇಬಿನಲ್ಲಿ ಚಿನ್ನ ಇದ್ದ ವಿಷಯ ತಿಳಿಸಿದರು. ಕೂಡಲೇ ನಮಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ನಾವು ಹಳೆ ಬಟ್ಟೆಗಳನ್ನು ತೆಗೆದು ನೋಡಿದಾಗ ಶರ್ಟ್ ಜೇಬಿನಲ್ಲೇ ಚಿನ್ನ ಇತ್ತು. ಕೂಡಲೇ ಅದನ್ನು ಮಾಲೀಕರಿಗೆ ಹಿಂತಿರುಗಿಸಿದ್ದೇವೆ" ಎಂದು ತಿಳಿಸಿದರು.
ತಮ್ಮ ಒಡವೆ ವಾಪಸ್ ನೀಡಿದ್ದನ್ನು ನೋಡಿದ ಮಾಲೀಕರು ಧನ್ಯವಾದ ಹೇಳಿದ್ದು. ಸಂಸ್ಥೆಯ ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ.












Click it and Unblock the Notifications