ಮೂಲಭೂತ ಸೌಲಭ್ಯ ವಂಚಿತ ಉತ್ತೇನಹಳ್ಳಿ ಗಿರಿಜನರು
ಮೈಸೂರು, ಏಪ್ರಿಲ್ 30: ಸಾಮಾನ್ಯವಾಗಿ ನಮ್ಮ ಜನಪ್ರತಿನಿಧಿಗಳಿಗೆ ಅತಿ ಹೆಚ್ಚು ಬಡವರು ಇರುವ ಕಾಲೋನಿಗಳು, ಗಿರಿಜನರ ಹಾಡಿಗಳ ಜನರು ನೆನಪಾಗುವುದು ಚುನಾವಣೆ ಬಂದಾಗಲೇ!
ಚುನಾವಣೆ ಸಂದರ್ಭ ಹಾಡಿಗಳಿಗೆ ಭೇಟಿ ನೀಡುವ ರಾಜಕೀಯ ಪಕ್ಷಗಳ ನಾಯಕರು ಅಂಗೈಯಲ್ಲಿ ಅರಮನೆ ತೋರಿಸಿ ಮತ ಹಾಕಿಸಿಕೊಂಡು ಮತ್ತೆ ಆ ಕಡೆ ಮುಖ ಮಾಡುವುದಿಲ್ಲ. ಇದರ ಪರಿಣಾಮವೇ ಇಂದಿಗೂ ಹಾಡಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ 2018 ಬಂದರೂ ಆದಿವಾಸಿಗಳಂತೆ ಜೀವನ ಸಾಗಿಸುವಂತಾಗಿದೆ.
ಮೈಸೂರಿನ ಪಿರಿಯಾಪಟ್ಟಣದಲ್ಲಿ ಸಮಸ್ಯೆಗಳದ್ದೇ ಕಾರುಬಾರು!
ಇದಕ್ಕೊಂದು ಉದಾಹರಣೆ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿ ಗ್ರಾಮ. ಈ ಗ್ರಾಮಕ್ಕೊಂದು ಸುತ್ತು ಹೊಡೆದು ಬಂದರೆ ಇಲ್ಲಿನ ಸಮಸ್ಯೆಗಳು ನಮ್ಮ ಅರಿವಿಗೆ ಬರುತ್ತವೆ. ಸಮರ್ಪಕವಾದ ರಸ್ತೆಯಿಲ್ಲದ ರಸ್ತೆಯಿಲ್ಲದೆ ಗುಂಡಿಬಿದ್ದ ರಸ್ತೆಯಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ, ಕುಡಿಯಲು ನೀರಿನ ವ್ಯವಸ್ಥೆ ಮಾಡದ ಕಾರಣ ಕಿ.ಲೋ. ದೂರದಿಂದ ಯಾರದ್ದೋ ಬಾವಿಗಳಿಂದ ನೀರು ತರಬೇಕಾದ ದುಸ್ಥಿತಿ, ಊರಿನಲ್ಲಿ ಯಾರಾದರೂ ಸತ್ತರೆ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದ ಪರಿಸ್ಥಿತಿ. ಹೀಗೆ ಹತ್ತು ಹಲವು ಸಮಸ್ಯೆಗಳು ಇಲ್ಲಿ ಕಂಡು ಬರುತ್ತವೆ.
ಕಾಡಂಚಿನಲ್ಲಿರುವ ಈ ಉತ್ತೇನಹಳ್ಳಿ ಗ್ರಾಮದಲ್ಲಿ ಗಿರಿಜನರು 60 ಮತ್ತು ಪರಿಶಿಷ್ಟ ಜಾತಿ 18, ಸವರ್ಣೀಯವರು 70 ಸೇರಿದಂತೆ 148 ಕುಟುಂಬಗಳಿದ್ದು, 600 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಆದರೆ ಇಲ್ಲಿಗೆ ತೆರಳಲು ಸೂಕ್ತ ರಸ್ತೆ ಮಾತ್ರ ಇಲ್ಲ. ಮಾಡಿದ ರಸ್ತೆಯನ್ನು ಕಾಲಕಾಲಕ್ಕೆ ದುರಸ್ತಿಪಡಿಸದ ಕಾರಣ ಹೊಂಡಗಳಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವವರು ಪ್ರತಿದಿನ ಹಿಡಿಶಾಪ ಹಾಕಿಕೊಂಡು ತೆರಳುತ್ತಾರೆ. ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಿರಿಯಾಪಟ್ಟಣ : ಕಾಂಗ್ರೆಸ್- ಜೆಡಿಎಸ್ ಕುತೂಹಲದ ಹಣಾಹಣಿ
ಇನ್ನು ಇಲ್ಲಿನ ಗಿರಿಜನ ಹಾಡಿ ಮತ್ತು ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕಳೆದ 15 ವರ್ಷಗಳ ಹಿಂದೆ ಕಿರು ನೀರಾವರಿ ಯೋಜನೆಯಡಿಯಲ್ಲಿ ಕುಡಿಯುವ ನೀರಿಗಾಗಿ ಪೈಪ್ ಲೈನ್ ಅಳವಡಿಸಲಾಗಿದೆ. ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿದಿರುವ ಪರಿಣಾಮ ಹನಿ ನೀರು ಕೂಡ ಬಾರದಂತಾಗಿದೆ. ಇದರೊಂದಿಗೆ ಇಲ್ಲಿರುವ ಕೈ ಪಂಪುಗಳು ಕೂಡ ನೀರಿಲ್ಲದೆ ವ್ಯರ್ಥವಾಗಿವೆ. ಪರಿಣಾಮ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಠಿಯಾಗಿದೆ.
ಈ ಗ್ರಾಮಕ್ಕೆ ಒಳಪಡುವ ಪಂಚವಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ತೋಡಿಸಲಾಗಿದ್ದರೂ ನೀರು ಪೂರೈಕೆ ಮಾತ್ರ ಮಾಡಿಲ್ಲ. ಈಗ ಇಲ್ಲಿನ ಜನ ಕುಡಿಯುವ ನೀರಿಗಾಗಿ ರೈತರು ತಮ್ಮ ಹೊಲಗಳಲ್ಲಿ ತೋಡಿಸಲಾಗಿರುವ ಕೊಳವೆ ಬಾವಿಯಿಂದ ವಿದ್ಯುತ್ ಸರಬರಾಜು ಇರುವ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ಹೋಗಿ ನೀರು ತರುವಂತಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದೆಲ್ಲದರ ನಡುವೆ ಈ ಗ್ರಾಮದ ಮತ್ತೊಂದು ಸಮಸ್ಯೆ ಗ್ರಾಮದಲ್ಲಿ ಸೂಕ್ತ ಸ್ಮಶಾನ ಇಲ್ಲದಿರುವುದು. ಯಾವುದೇ ಸಮುದಾಯಕ್ಕೂ ಶವಸಂಸ್ಕಾರಕ್ಕೆಂದು ಸ್ವಂತ ಮಸಣವಿಲ್ಲ. ಹೀಗಾಗಿ ಯಾರಾದರು ಸತ್ತರೆ ಪರದಾಡುವಂತಾಗಿ ಜಮೀನು ಹೊಂದಿದವರು ಅವರವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ ಬಡವರು ಮಾತ್ರ ಪರದಾಡುವಂತಾಗಿದೆ.
ಈ ಗ್ರಾಮ ಶಾಸಕ ವೆಂಕಟೇಶ್ ಅವರ ಕ್ಷೇತ್ರಕ್ಕೆ ಒಳಪಟ್ಟಿದ್ದು, ಕೆಲವು ತಿಂಗಳ ಹಿಂದೆ ಗ್ರಾಮಕ್ಕೆ ಬಂದು ಇಲ್ಲಿನ ಜನರ ಸಮಸ್ಯೆ ಆಲಿಸಿ ಹೋಗಿದ್ದಾರೆ. ಅವರದೇ ಸರ್ಕಾರವಿದ್ದ ಸಮಯದಲ್ಲಿ ಐದು ವರ್ಷಗಳ ಅವಧಿಯಲ್ಲಿ ಇಲ್ಲಿನ ಜನರ ಸಮಸ್ಯೆ ಬಗೆಹರಿಸಿಲ್ಲ. ಮುಂದೆ ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಂಬಿಕೆಯೂ ಇಲ್ಲಿನವರಿಗೆ ಇಲ್ಲದಂತಾಗಿದೆ.