ಲೋಕಸಭಾ ಚುನಾವಣೆಯಲ್ಲಿ ತೃತೀಯಲಿಂಗಿಗಳ ಮತದಾನಕ್ಕಿಲ್ಲವೇ ಬೆಲೆ ?
ಮೈಸೂರು, ಮಾರ್ಚ್ 30 : ಲೋಕಸಭಾ ಚುನಾವಣೆಯ ಕಲರವ ಎಲ್ಲೆಡೆ ಕೇಳಿಬರುತ್ತಿದೆ. ಮತದಾರರು ಯಾರು ಅಭ್ಯರ್ಥಿಗಳಾಗಬಹುದು, ನಾವು ಯಾರಿಗೆ ಮತ ಹಾಕಬಹುದೆಂಬ ಕುತೂಹಲದಲ್ಲಿದ್ದಾರೆ. ಆದರೆ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಂಗಳಮುಖಿಯರು ತಾವು ಹೇಗೆ ಮತ ಚಲಾಯಿಸಬೇಕೆಂಬ ಗೊಂದಲದಲ್ಲಿಯೇ ಕಾಲದೂಡುತ್ತಿದ್ದಾರೆ.

ಮೈಸೂರಲ್ಲಿ ಸಾವಿರಕ್ಕೂ ಹೆಚ್ಚು ತೃತೀಯಲಿಂಗಿಗಳು
ಜಿಲ್ಲೆಯಲ್ಲಿ ಸುಮಾರು 1000ಕ್ಕೂ ಅಧಿಕ ಮಂದಿ ಇದ್ದಾರೆ. ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಗರಿಷ್ಠ 300 ಮಾತ್ರ ಹೌದು. ಇದಕ್ಕೆ ಕಾರಣ ಹಲವು ಪೈಕಿ ಸರ್ಕಾರಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸದೆ ಇರುವುದು ಒಂದಾಗಿದೆ. ಈ ಸಮುದಾಯಕ್ಕೆ ಸೂಕ್ತ ವಿಳಾಸ ಹೊಂದಿಲ್ಲದವರು ಅನೇಕ ಮಂದಿ ಇದ್ದಾರೆ. ಕೆಲವರಿಗೆ ತಮ್ಮ ಸಮುದಾಯ ಹೇಳಿಕೊಳ್ಳಲು ಹಿಂಜರಿಕೆ. ಮತ್ತೆ ಕೆಲವರು ತಮ್ಮ ಹಿಂದಿನ ಹೆಸರು ಹಾಗೂ ಲಿಂಗ ಪರಿವರ್ತನೆಯಾದ ನಂತರ ಬದಲಾವಣೆ ಮಾಡಿಕೊಂಡಿರುವ ವಿಳಾಸದಲ್ಲಿ ಬಹಳ ಏರು ಪೇರುಗಳಿಗೆ ಹಾಗೂ ಶಸ್ತ್ರಚಿಕಿತ್ಸೆ ಒಳಗಾಗಿರುವವರು ಕೆಲವು ದಾಖಲಾತಿ ಕೊರತೆಗಳ ಸಮಸ್ಯೆಯಿಂದ ಮತದಾನದ ಗುರುತಿನ ಚೀಟಿಯೇ ಲಭಿಸಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.

ವಿಧಾನಸಭೆ ಚುನಾವಣೆ ವೇಳೆ 182 ಮಂದಿ ಮಾತ್ರ ಮತದಾನ
ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 182 ಮಂಗಳಮುಖಿಯರು ಮತದಾನದ ಹಕ್ಕು ಚಲಾಯಿಸಿದ್ದಾರೆ. ಇದೀಗ ಆ ಪಟ್ಟಿಗೆ ಇಬ್ಬರು ಹೊಸದಾಗಿ ಸೇರಿಕೊಂಡಿದ್ದಾರೆ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 300ಕ್ಕೂ ಹೆಚ್ಚು ಮಂದಿ ತೃತೀಯ ಲಿಂಗಿಗಳು ದಾಖಲೆ ಹೊಂದಿದ್ದು, ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಸಮುದಾಯದ ಸದಸ್ಯರ ಚುನಾವಣಾ ಪಟ್ಟಿಗೆ ಸೇರ್ಪಡೆಗೊಳ್ಳಲು ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ.

ಎಪಿಕ್ ಕಾರ್ಡ್ ಪಡೆದುಕೊಳ್ಳಲು ಸಮಸ್ಯೆ
ಎಪಿಕ್ ಕಾರ್ಡ್ ಪಡೆದುಕೊಳ್ಳಲು ವಿಳಾಸ ಪುರಾವೆ ಇವರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ನಮ್ಮ ಸಮುದಾಯದ ಬಹುಪಾಲು ಜನರಿಗೆ ಯಾವುದೇ ವಿಳಾಸ ಪುರಾವೆಗಳಿಲ್ಲ. ಅನೇಕ ಮಂದಿ ಬಲವಂತದಿಂದ ಮನೆಗಳನ್ನು ಬಿಟ್ಟು ಬಾಡಿಗೆ, ವಸತಿ ಸೌಕರ್ಯ ಇರುವ ಕಡೆ ಹೊರಟರೆ, ಹಲವು ಮಂದಿ ನಿರಾಶ್ರಿತರು ಬೀದಿಗಳಲ್ಲೇ ಮಲಗುತ್ತಾರೆ. ಕೆಲ ಮಂಗಳಮುಖಿಯರು ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಯ ನಂತರ ತಮ್ಮ ಹಿಂದಿನ ಗುರುತಿನೊಂದಿಗೆ ಎಪಿಕ್ ಕಾರ್ಡ್ ಪಡೆದುದ್ದನ್ನು ಬದಲಾಯಿಸಬೇಕೆಂದು ಸೂಕ್ತ ದಾಖಲೆಗಳನ್ನು ಒದಗಿಸಿ ಅಧಿಕಾರಿಗಳಿಂದ ಹೋರಾಟ ಮಾಡಿ ಪಡೆದುಕೊಳ್ಳುತ್ತಿದ್ದಾರೆ ಎಂಬ ನಿದರ್ಶನಗಳು ಕೂಡ ಇದೆ.

ವಲಸೆ ಹೋಗಿರುವ ತೃತೀಯಲಿಂಗಿಗಳು
ಅಲ್ಲದೆ ಮತ್ತೆ ಕೆಲವು ಮಂಗಳಮುಖಿಯರು ವಲಸೆ ಹೋಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅವರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದೆ. ವಲಸೆ ಹೋದವರು ತಮ್ಮ ವಿಳಾಸ ಪುರಾವೆಗಳ ಮಾಹಿತಿ ಅವರಿಗಾಗಿಯೇ ಬಂದು ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ. ಹಾಗಾಗಿ ಆ ಸಮುದಾಯ ಮತದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಪ್ರಮುಖರು ತಿಳಿಸುತ್ತಾರೆ.











Click it and Unblock the Notifications