ಚಿರತೆ ಸಂರಕ್ಷಣೆಯತ್ತ ಹೊಸ ಹೆಜ್ಜೆ: ಮೈಸೂರಿನಲ್ಲಿ ಸಭೆ
ಮೈಸೂರು, ಫೆಬ್ರವರಿ 9 : ಚಿರತೆ ಸಂರಕ್ಷಣೆ ಎಲ್ಲರ ಆದ್ಯತೆಯಾಗಬೇಕು. ಜಿಲ್ಲಾ ಮಟ್ಟದಲ್ಲಿ ಚಿರತೆ ಸಂರಕ್ಷಣಾ ಸಮಿತಿಗಳನ್ನು ರಚಿಸಿ ಚಿರತೆ ಸಂರಕ್ಷಣೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಚಿರತೆ ಕಂಡಾಗ ಫೋಟೋ ತೆಗೆದು ವೈರಲ್ ಮಾಡಬಾರದು. ಇದು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಆಯೋಜಿಸಿದ್ದ ಚಿರತೆ ಹಾವಳಿ ತಡೆಗಟ್ಟುವ ಮಾರ್ಗೋಪಾಯಗಳು ಕುರಿತ ಸಮಾಲೋಚನಾ ಸಭೆಯಲ್ಲಿ ತಜ್ಞರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ಸಭೆಯ ಸಲಹೆ ಮತ್ತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಮಾತನಾಡಿದ ಬೆಂಗಳೂರು ವೃತ್ತದ ಆನೆ ಯೋಜನೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ರಾಜ್ಯದಲ್ಲಿ ಇಲ್ಲಿಯವರೆಗೂ ಚಿರತೆಗಳು ಮಾನವರ ಮೇಲೆ ದಾಳಿ ಮಾಡಿರುವ ನಿದರ್ಶನಗಳಿಲ್ಲ. ಪತ್ರಕರ್ತರಿಗೆ ಅರಿವು ಮೂಡಿಸಲೆಂದು ಫೆ. 14 ಮತ್ತು 15ರಂದು ಬಂಡೀಪುರದಲ್ಲಿ ಕಾರ್ಯಾಗಾರ ಆಯೋಜಿಸಿದ್ದೇವೆ. ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿದರೆ ಚಿರತೆಯನ್ನು ಪ್ರೀತಿಸುವ ಸಮಾಜವನ್ನು ನಿರ್ಮಿಸಬಹುದು ಎಂದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಚಿರತೆ ಮನುಷ್ಯರ ಮೇಲೆ ದಾಳಿ ಮಾಡಿದಾಗ ಮಾತ್ರ ಹಿಡಿಯಬೇಕೆಂದು ಗೈಡ್ ಲೈನ್ನಲ್ಲಿದೆ. ಆದರೆ, ಚಿರತೆ ಕಂಡ ತಕ್ಷಣ ಫೋಟೋ ತೆಗೆದು ವೈರಲ್ ಮಾಡುತ್ತ ಹಿಡಿಯುವಂತೆ ಒತ್ತಡ ತರಲಾಗುತ್ತಿದೆ. ಫೋಟೋ ತೆಗೆದು ವೈರಲ್ ಮಾಡದೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಮೈಸೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರುಣಾಕರ್, ಚಾಮುಂಡಿಬೆಟ್ಟ ಚಿರತೆಗಳ ಆವಾಸ ಸ್ಥಾನವಾಗಿದ್ದು, ಇನ್ನೂ 5-6 ಚಿರತೆಗಳು ಬೆಟ್ಟದಲ್ಲಿವೆ. ಆದರೆ ಪ್ರಾಣಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಚಿರತೆಗಳ ಹಾವಳಿ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಎಂದರು.
ಕಳೆದ 3 ವರ್ಷಗಳಲ್ಲಿ ಮೈಸೂರು ಅರಣ್ಯ ವಿಭಾಗದ ವ್ಯಾಪ್ತಿಯ ಎಚ್.ಡಿ.ಕೋಟೆ ತಾಲ್ಲೂಕಿ ನಲ್ಲಿ ಹೆಚ್ಚಿನ ಚಿರತೆಗಳು ಕಾಣಿಸಿಕೊಂಡಿವೆ. ಅದರಂತೆ 2015-16ನೇ ಸಾಲಿನಲ್ಲಿ ಎಚ್.ಡಿ.ಕೋಟೆಯಲ್ಲಿ 5, ನಂಜನಗೂಡು ತಾಲ್ಲೂಕಿನಲ್ಲಿ 1, 2016-17ನೇ ಸಾಲಿನಲ್ಲಿ ಮೈಸೂರು ತಾಲ್ಲೂಕಿನಲ್ಲಿ 4, ನಂಜನಗೂಡಿನಲ್ಲಿ 4 ಹಾಗೂ ಎಚ್.ಡಿ.ಕೋಟೆಯಲ್ಲಿ 2, 2017-18ರಲ್ಲಿ ಮೈಸೂರು ತಾಲ್ಲೂಕಿನಲ್ಲಿ 2, ನಂಜನಗೂಡಿನಲ್ಲಿ 4, ಎಚ್.ಡಿ.ಕೋಟೆಯಲ್ಲಿ 2 ಚಿರತೆ ಸೇರಿದಂತೆ ಒಟ್ಟು 24 ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ಸೆರೆಹಿಡಿದ ಈ ಎಲ್ಲಾ ಚಿರತೆಗಳನ್ನು ಕಾಡಿಗೆ ಬಿಡಲಾಗಿದೆ

ಇತ್ತೀಚಿಗೆ ನಡೆಸಲಾದ ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಮಧ್ಯಪ್ರದೇಶವನ್ನು ಬಿಟ್ಟರೆ ಅತೀ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ಅದರಂತೆ ರಾಜ್ಯದಲ್ಲಿ 1125 ಚಿರತೆಗಳಿದ್ದು, ಮೈಸೂರು ಜಿಲ್ಲೆಯಲ್ಲಿ 150-180 ಹಾಗೂ ಮೈಸೂರು ತಾಲ್ಲೂಕು ವ್ಯಾಪ್ತಿಯಲ್ಲಿ 40-50 ಚಿರತೆಗಳಿವೆ ಎನ್ನುತ್ತಾರೆ ಚಾಮರಾಜೇಂದ ಮೃಗಾಲಯದ ನಿರ್ದೇಶಕ ರವಿ. ಚಿರತೆ ನಾಡಿಗೆ ಬರುತ್ತದೆಂಬ ಭೀತಿಯಲ್ಲಿ ಮೈಸೂರಿನ ಜನತೆ ಆತಂಕದಲ್ಲಿದ್ದಾರೆ. ಇನ್ನಾದರೂ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications