ಮೋದಿ, ರಾಹುಲ್ ಗಿಂತ ಉತ್ತಮ ನಾಯಕರು ದೇಶಕ್ಕೆ ಬೇಕು: ವಿದ್ವಾನ್ ಕೃಷ್ಣ
ಮೈಸೂರು, ನವೆಂಬರ್. 24: ಏಸು, ಅಲ್ಲಾ ಕುರಿತು ಹಾಡು ಹಾಡಿದರೆ ಈಗ ಆಕ್ಷೇಪ ವ್ಯಕ್ತವಾಗುತ್ತಿದೆ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಖ್ಯಾತ ಸಂಗೀತಗಾರರು ಇಂಥಹ ಹಾಡುಗಳನ್ನು ಹಾಡಿಯೇ ಹೊಗಳಿಕೆಗೆ ಪಾತ್ರರಾಗಿದ್ದರು ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾನ್ ಟಿ.ಎಂ.ಕೃಷ್ಣ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಾವಿದರು ಈಗ ಆತಂಕದ ಪರಿಸ್ಥಿತಿಗೆ ಸಿಲುಕಿದ್ದಾರೆ. ಏನಾದರೂ ಹೆಚ್ಚು ಕಡಿಮೆ ಮಾತನಾಡಿದರೆ ನಾಳಿನ ಕಾರ್ಯಕ್ರಮಗಳಿಗೆ ಕತ್ತರಿ ಬೀಳುತ್ತದೆ. ಆದಾಯಕ್ಕೆ ಕೊಕ್ಕೆ ಬೀಳುತ್ತದೆ. ಟಿ.ಎಂ.ಕೃಷ್ಣ ಅವರಂಥ ಗಾಯಕರನ್ನು ಬೆಂಬಲಿಸಿದರೆ ಕೆಲವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಅಲ್ಲದೇ ನನಗೆ ಅರ್ಬನ್ ನಕ್ಸಲ್ ಪಟ್ಟ ಕಟ್ಟಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತ ಫ್ಯೂಡಲ್ ಮನಸ್ಥಿತಿಯಿಂದ ಕೂಡಿದೆ. ಈ ವ್ಯವಸ್ಥೆಯೇ ಸಂಗೀತಗಾರರನ್ನು ಪೋಷಿಸುತ್ತಿದೆ. ಸಂಗೀತಗಾರರಿಗೆ ರಾಜಕಾರಣಿಗಳು, ಜಮೀನ್ದಾರರು, ಕಾರ್ಪೊರೇಟ್ ಸಂಸ್ಥೆಗಳು ಅನಿವಾರ್ಯ. ಒಂದು ವೇಳೆ ವ್ಯವಸ್ಥೆಯನ್ನು ವಿರೋಧಿಸಿದರೆ ಅವಕಾಶಗಳು ತಪ್ಪಿ ಹೋಗುತ್ತವೆ.
ಕೇಂದ್ರ ಸರ್ಕಾರದ ನೀತಿಯನ್ನು ಪ್ರಶ್ನಿಸುವವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವ ಮೂಲಕ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ಜೊತೆಗೆ, ರಾಷ್ಟ್ರದ್ರೋಹಿ, ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಗುಂಪು ದಾಳಿ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಶ್ನಿಸುವುದು ಪ್ರಜಾಪ್ರಭುತ್ವದ ಸೌಂದರ್ಯ
ಈ ದೇಶ ಕೂಗಾಡುವ, ಅರಚಾಡುವ, ಕೋಪಗೊಳ್ಳುವ ದೇಶವಾಗಿ, ಇನ್ನೊಬ್ಬರ ಮಾತುಗಳನ್ನು ಆಲಿಸದ ದೇಶವಾಗಿ ಬದಲಾಗುತ್ತಿದೆ ಎಂಬ ಭಾವನೆ ನನ್ನಲ್ಲಿ ಬಲವಾಗುತ್ತಿದೆ ಎಂದ ಕೃಷ್ಣ ಅವರು ಸತ್ಯವನ್ನು ಒಪ್ಪಿಕೊಳ್ಳಲಾಗದ ಸ್ಥಿತಿಗೆ ತಲುಪುತ್ತಿದ್ದೇವೆ. ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿವೆ. ಆದರೂ ಮುಂದಿನ ತಲೆಮಾರಿನ ಕುರಿತು ನನಗೆ ಅಪಾರ ಭರವಸೆ ಇದೆ. ಪ್ರಶ್ನಿಸುವುದು ಪ್ರಜಾಪ್ರಭುತ್ವದ ಸೌಂದರ್ಯ ಎಂದರು.

ಪುಂಡಾಟಿಕೆ ಉತ್ತೇಜಿಸಿದೆ
ಉನ್ನತ ಸ್ಥಾನದಲ್ಲಿ ಇರುವವರು ಅಹಿತಕರ ಘಟನೆಗಳನ್ನು ತಡೆಯಬೇಕು. ಆದರೆ, ಅವರು ಮೌನ ವಹಿಸಿರುವುದರಿಂದ ಇದು ಇನ್ನಷ್ಟು ಹೆಚ್ಚಾಗಿದೆ. ಇದು ಪುಂಡಾಟಿಕೆಯನ್ನೂ ಉತ್ತೇಜಿಸಿದೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.
ಈ ರೀತಿಯ ಬೆಳವಣಿಗೆಗಳನ್ನು ಕುರಿತು 2015ರಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದೆ. ದೇಶ ವಿದೇಶದ ವ್ಯಕ್ತಿಗಳ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಮೋದಿ, ಈವರೆಗೆ
ನನ್ನ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಇಂತಹ ವಿಚಾರದಲ್ಲಿ ಮೋದಿ ಮೌನವಾಗಿರುವುದರಿಂದ ಅವರ ಹಿಂಬಾಲಕರ ಅಟ್ಟಹಾಸ ತೀವ್ರವಾಗಿದೆ ಎಂದು ಟಿ.ಎಂ.ಕೃಷ್ಣ ನೇರವಾಗಿ ಕಿಡಿಕಾರಿದರು.

ಕಲಾವಿದರು ಭಯಪಡಬೇಕಿಲ್ಲ
ಪ್ರತಿಯೊಬ್ಬರೂ ಮುಕ್ತವಾಗಿ ಅಭಿಪ್ರಾಯ ಹೇಳುವುದನ್ನು, ಪ್ರಶ್ನಿಸುವುದನ್ನು ರೂಢಿಸಿಕೊಳ್ಳಬೇಕು ಎಂದ ಕೃಷ್ಣ ಕೆಲವರಿಗೆ ಇದು ಬೇಕಾಗಿಲ್ಲ. ಹೇಳಿಕೆ ನೀಡುವವರ ಮೇಲೆ ದಾಳಿ ಮಾಡಲಾಗುತ್ತಿದೆ. ಇದಕ್ಕೆ ಕಲಾವಿದರು ಭಯಪಡಬೇಕಿಲ್ಲ ಎಂದು ಹೇಳಿದರು.

ಉತ್ತಮ ನಾಯಕರು ದೇಶಕ್ಕೆ ಬೇಕು
ನರೇಂದ್ರ ಮೋದಿ, ರಾಹುಲ್ ಗಾಂಧಿಗಿಂತ ಉತ್ತಮ ನಾಯಕರು ದೇಶಕ್ಕೆ ಬೇಕು. ಮುಂದಿನ ಪ್ರಧಾನಿ ಯಾರು ಆಗಬೇಕು ಎನ್ನುವುದು ಈಗ ಅಪ್ರಸ್ತುತ. ಲೋಕಸಭಾ ಚುನಾವಣೆ ಬಳಿಕ ಈ ಬಗ್ಗೆ ಯೋಚಿಸಬಹುದು. ಆದರೆ, ನೇರವಾಗಿ ಮತದಾರರು ಪ್ರಧಾನಿಯನ್ನು ಆಯ್ಕೆ ಮಾಡುವಂತಹ ಅಧ್ಯಕ್ಷೀಯ ಪದ್ಧತಿಯಂತೆ ಬಿಂಬಿಸಲಾಗುತ್ತಿದೆ. ಇದನ್ನು ತೊಡೆದು ಹಾಕಲು ಪ್ರಾದೇಶಿಕ ಪಕ್ಷಗಳೂ ಅಧಿಕಾರಕ್ಕೆ ಬರಬೇಕು. ಆಗಲೇ ಒಕ್ಕೂಟ ವ್ಯವಸ್ಥೆಗೆ ಒಂದು ಅರ್ಥ ಬರಲಿದೆ ಎಂದು ತಿಳಿಸಿದರು.
ಶಬರಿಮಲೈ ದೇಗುಲ ಪ್ರವೇಶ ಮಾಡುವುದು ಮಹಿಳೆಯರ ಹಕ್ಕು. ಇದಕ್ಕೆ ಅವಕಾಶ ನೀಡಬೇಕು. ಆದರೆ, ಇದಕ್ಕೆ ಬಿಜೆಪಿ, ಕಾಂಗ್ರೆಸ್ ತಡೆಯೊಡ್ಡುತ್ತಿವೆ. ಇದು ಖಂಡನೀಯ ಎಂದು ಟಿ.ಎಂ.ಕೃಷ್ಣ ನುಡಿದರು.












Click it and Unblock the Notifications