ರಾಮ, ಸೀತೆ ವಿರುದ್ಧ ಹೇಳಿಕೆ ಹಿನ್ನೆಲೆ: ಭಗವಾನ್ ಮನೆ ಮುಂದೆ ಜಮಾಯಿಸಿದ ಹಿಂದೂ ಕಾರ್ಯಕರ್ತರು
ಮೈಸೂರು, ಡಿಸೆಂಬರ್ 28: ರಾಮ ಸತ್ಯವಂತನಲ್ಲ, ಆತ ಮದ್ಯಪಾನ ಮಾಡುತ್ತಿದ್ದ. ಮಾಂಸ ತಿನ್ನುತ್ತಿದ್ದ ಎಂದು ಪುಸ್ತಕದಲ್ಲಿ ಉಲ್ಲೇಖಿಸಿ ವಿವಾದಕ್ಕೆ ಗುರಿಯಾಗಿರುವ ಪ್ರಗತಿಪರ ಚಿಂತಕ ಪ್ರೊ.ಭಗವಾನ್ ವಿರುದ್ಧ ಶ್ರೀರಾಮ ಭಕ್ತರು ಆಕ್ರೋಶಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಶ್ರೀರಾಮ ಭಕ್ತರು ಮೈಸೂರಿನ ಕುವೆಂಪುನಗರದಲ್ಲಿರುವ ಪ್ರೊ.ಕೆ.ಎಸ್ ಭಗವಾನ್ ನಿವಾಸದ ಎದುರು ಶ್ರೀರಾಮನ ಫೋಟೋ ಹಿಡಿದು ಪೂಜೆ ಮಾಡಲು ಮುಂದಾದರು. ಈ ವೇಳೆ ಪೊಲೀಸರು ತಡೆದ ಘಟನೆ ನಡೆದಿದೆ.
ನಾವು ಯಾರಿಗೂ ತೊಂದರೆ ಮಾಡಿಲ್ಲ. ಶ್ರೀರಾಮನಿಗೆ ಪುಷ್ಪಾರ್ಚನೆ ಮಾಡುತ್ತಿದ್ದೇವೆ ಎಂದು ರಾಮನ ಭಕ್ತರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ "ನಾವು ಸಾರ್ವಜನಿಕ ರಸ್ತೆಯಲ್ಲಿ ಮಾಡಲು ಅನುಮತಿ ಕೊಟ್ಟಿಲ್ಲ"ವೆಂದು ಪೊಲೀಸರು ತಿಳಿಸಿದ್ದು, ಭಗವಾನ್ ಮನೆ ಬಳಿ ಕೆಲಕಾಲ ಗೊಂದಲ ಉಂಟಾಯಿತು.

ಈ ಘಟನೆ ನಡೆಯುವ ವೇಳೆ ಪೊಲೀಸರು ನಿಶಾಂತ್ ಸೇರಿದಂತೆ ನಾಲ್ವರನ್ನು ವಶಕ್ಕೆಪಡೆದು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಭದ್ರತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶ್ರೀರಾಮನ ಫೋಟೋ ಹಿಡಿದು ಬಂದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮೈಸೂರಿನ ಪ್ರೊ.ಕೆ.ಎಸ್.ಭಗವಾನ್ ಮನೆಗೆ ಬಿಗಿ ಪೋಲಿಸ್ ಬಂದೂಬಸ್ತ್ ನಿಯೋಜನೆ ಮಾಡಲಾಗಿದೆ.
ಮೂವರು ಪೊಲೀಸ್, 15ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
'ರಾಮ ಮಂದಿರ ಏಕೆ ಬೇಕು'? ಎಂಬ ಪುಸ್ತಕದಲ್ಲಿ ಭಗವಾನ್ ವಾಲ್ಮಿಕಿ ರಾಮಾಯಣವನ್ನು ಉಲ್ಲೇಖ ಮಾಡಿ, ರಾಮ ಆದರ್ಶ ಪುರುಷ ಅಲ್ಲ. ಆತ ಸತ್ಯವಂತನಲ್ಲ. ಮದ್ಯಪಾನ ಮಾಡುತ್ತಿದ್ದ. ಮಾಂಸ ಸೇವಿಸುತ್ತಿದ್ದ. ಸೀತೆ ಸಹ ಮದ್ಯಪಾನ ಮಾಡುತ್ತಿದ್ದಳು ಇಂತಹ ವ್ಯಕ್ತಿಗೆ ರಾಮಮಂದಿರ ಏಕೆ ನಿರ್ಮಾಣ ಮಾಡಬೇಕು? ಎಂದು ಪ್ರಶ್ನಿಸಿದ್ದರು.
ಹೀಗಾಗಿ ಭಗವಾನ್ ಬರೆದ ಪುಸ್ತಕದ ವಿರುದ್ಧ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಭಗವಾನ್ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications