ಮೈಸೂರು : ದನ ಮೇಯಿಸುತ್ತಿದ್ದವ ಹುಲಿ ದಾಳಿಗೆ ಬಲಿ
ಮೈಸೂರು, ನವೆಂಬರ್ 17 : ದನ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿ, ಕೊಂದು ಹಾಕಿರುವ ಘಟನೆ ಎಚ್.ಡಿ.ಕೋಟೆಯಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮೃತಪಟ್ಟವರನ್ನು ಶಿವಣ್ಣ (50) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಎಚ್.ಡಿ.ಕೋಟೆ ತಾಲೂಕಿನ ಹಾದನೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. [ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ]

ಶಿವಣ್ಣ ಮೇಲೆ ದಾಳಿ ಮಾಡಿದ ಹುಲಿ ದೇಹವನ್ನು ಸುಮಾರು 100 ಮೀಟರ್ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದ್ದು, ಭಾಗಶಃ ತಿಂದು ಹಾಕಿದೆ. ಹುಲಿ ಅಲ್ಲೇ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. [ನರಭಕ್ಷಕ ಹುಲಿಗೆ ಹೆದರಿದ ನಂಜನಗೂಡು ಗ್ರಾಮಸ್ಥರು]
ಹುಲಿ ದಾಳಿಯ ವಿಷಯ ತಿಳಿದು ಜನರು ಹುಲಿ ಹೋದ ದಿಕ್ಕಿನತ್ತ ಹಿಂಬಾಲಿಸಿ ಹೋದರಾದರೂ ಹುಲಿ ಬಾಯಿಯಿಂದ ಶವವನ್ನು ಬಿಡಿಸಿಕೊಳ್ಳಲಾಗಲಿಲ್ಲ. ಅಲ್ಲದೆ ಮೃತದೇಹದ ಮುಂದೆ ನಿಂತು ಹುಲಿ ಜನರತ್ತ ಘರ್ಜಿಸತೊಡಗಿತ್ತು. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]
ನಂಜದೇವರ ಬೆಟ್ಟದ ಸಮೀಪದ ಕಳ್ಳಂಜಪ್ಪನ ಗುಡಿ ಪಕ್ಕದಲ್ಲಿ ಮೃತ ಶಿವಣ್ಣನಿಗೆ 4.5ಎಕರೆ ಜಮೀನಿದ್ದು ಆ ಜಮೀನಿನಲ್ಲಿ ಹುರುಳಿ, ಹತ್ತಿ, ರಾಗಿ ಬೆಳೆಯನ್ನು ಬೆಳೆದಿದ್ದರು. ಮೃತ ರೈತನಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
ರೈತ ಬಲಿಯಾಗಿದ್ದ : ಅಕ್ಟೋಬರ್ 13ರಂದು ನಂಜನಗೂಡು ತಾಲೂಕಿನ ಹೆಡಿಯಾಲ ಸಮೀಪದ ಹಾದನೂರ ಒಡೆಯನಪುರ ಗ್ರಾಮದ ಸಮೀಪ ರೈತ ನಾಗರಾಜು (38) ಎಂಬುವವರು ಹುಲಿ ದಾಳಿಗೆ ಬಲಿಯಾಗಿದ್ದರು.












Click it and Unblock the Notifications