ವೈದ್ಯರು ಬೇಕಾಗಿದ್ದಾರೆ! ಮೈಸೂರಿನಲ್ಲಿ ಖಾಲಿ ಉಳಿದಿದೆ 536 ಹುದ್ದೆ!
ಮೈಸೂರು, ಜೂನ್ 15: ಸರ್ಕಾರಗಳು ಎಷ್ಟೇ ಕಾನೂನು ಮಾಡಿದರೂ ಅದು ಕಾಗದದಲ್ಲಿ ಮಾತ್ರ ಉಳಿಯುತ್ತದೆ ಎಂಬುದಕ್ಕೆ ಮೈಸೂರು ಸೇರಿದಂತೆ ರಾಜ್ಯಾದ್ಯಂತ ತಾಲ್ಲೂಕು ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ ಸಿ)ಗಳಲ್ಲಿ ವೈದ್ಯರು ಮತ್ತು ಇತರೆ ಸಿಬ್ಬಂದಿ ಹುದ್ದೆಗಳು ಖಾಲಿ ಇರುವುದೇ ಸಾಕ್ಷಿ.
ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಎಂಬ ಮಸೂದೆ ಜಾರಿಯಾಗಿ ಸುಮಾರು5 ವರ್ಷಗಳಾದರೂ ಈವರೆಗೂ ಇದು ಕಾರ್ಯಗತವಾಗಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಒಂದು ವರ್ಷ ಕಾಲ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲು ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರು ಜಿಲ್ಲೆಯಲ್ಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ, ಗ್ರಾಮೀಣ ಪ್ರದೇಶದ ಜನರು ಪರದಾಡುವಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಗಳಲ್ಲಿ ಕೆಲಸ ಮಾಡಲು ಒಲ್ಲೆ ಅನ್ನುತ್ತಿರುವ ವೈದ್ಯರಿಂದಾಗಿ ಜನರು ಸಣ್ಣ ಪುಟ್ಟ ಕಾಯಿಲೆಗಳು ಹಾಗೂ ಚಿಕಿತ್ಸೆಗೆ ತಾಲ್ಲೂಕು ಕೇಂದ್ರಗಳು ಇಲ್ಲವೇ ನಗರದ ದೊಡ್ಡಾಸ್ಪತ್ರೆಗೆ ಬರುವಂತಾಗಿದೆ.
ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಂದರಲ್ಲೇ ವೈದ್ಯಾಧಿಕಾರಿ ಗಳ 25 ಹುದ್ದೆಗಳು ಸೇರಿದಂತೆ 536 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯುತ್ತಲೇ ಬಂದಿದ್ದರೂ ನೇಮಕವಂತೂ ನಡೆಯದೆ ಖಾಲಿ ಉಳಿದಿವೆ.
ಹುದ್ದೆ ಖಾಲಿ ಖಾಲಿ
ಕಳೆದ ವರ್ಷ ಹಿರಿಯ ಆರೋಗ್ಯ ಸಹಾಯಕರ (ಮಹಿಳೆಯರು) 42 ಹುದ್ದೆಗಳನ್ನು ಭರ್ತಿ ಮಾಡಿದ್ದು ಬಿಟ್ಟರೆ ಬೇರ್ಯಾವ ಹುದ್ದೆಗಳೂ ಭರ್ತಿಯಾಗಿಲ್ಲ. ಕೆಪಿಎಸ್ ಸಿ ಮೂಲಕ ಸರ್ಕಾರಿ ವೈದ್ಯರ ಹುದ್ದೆಗೆ ಆಯ್ಕೆಯಾದವರು, ಗ್ರಾಮೀಣ ಪ್ರದೇಶದಲ್ಲಿ 6 ವರ್ಷ ಸೇವೆ ಹಾಗೂ ಎಂಬಿಬಿಎಸ್ ತೇರ್ಗಡೆ ಹೊಂದಿದವರು 1 ವರ್ಷ ಗ್ರಾಮೀಣ ಸೇವೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ, ಯಾರೂ ಗ್ರಾಮಗಳತ್ತ ಮುಖಮಾಡುತ್ತಿಲ್ಲ.

ತಮ್ಮ ಶಿಕ್ಷಣದ ಆರಂಭದಲ್ಲಿ ತೆಗೆದುಕೊಳ್ಳುವ ಪ್ರತಿಜ್ಞಾವಿಧಿಯಂತೆ ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು ಜನರ ಸೇವೆಗೆ ಮುಂದಾಗಬೇಕಾದ ವೈದ್ಯರು ಈಗ ಹಳ್ಳಿ ಅಂದರೆ ಕೆಲಸವೇ ಬೇಡ ಎನ್ನುವ ಪರಿಸ್ಥಿತಿ ಮುಟ್ಟಿರುವ ಕಾರಣ, ಮೈಸೂರು ಜಿಲ್ಲೆಯಲ್ಲಿ ವೈದ್ಯರ ಹುದ್ದೆಗಳು ಬಹುತೇಕ ಖಾಲಿ ಇವೆ. ಬರೀ ಅಲೋಪತಿ ವೈದ್ಯರಷ್ಟೇ ಅಲ್ಲ ಭಾರತೀಯ ವೈದ್ಯಕೀಯ ಪದ್ಧತಿಯ ಆಯುರ್ವೇದ ವೈದ್ಯರು ಸಹ ಗ್ರಾಮೀಣ ಪ್ರದೇಶದತ್ತ ತೆರಳಲು ಸಿದ್ಧರಿಲ್ಲ. ಇದರಿಂದಾಗಿ ಜಿಲ್ಲೆಯ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ವೈದ್ಯರನ್ನು ನಿಯೋಜಿಸಲಾಗದೆ ಸರ್ಕಾರ ಪರದಾಡುವಂತಾಗಿದೆ.
ಆರು ಬಾರಿ ಸಂದರ್ಶನಕ್ಕೆ ಕರೆದರೂ ಅಭ್ಯರ್ಥಿಗಳು ಬಂದಿಲ್ಲ!
ಜಿಲ್ಲೆಯ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ವೈದ್ಯರೂ ಇಲ್ಲದ ಕಾರಣ 6 ಬಾರಿ ಸಂದರ್ಶನಕ್ಕೆ ಕರೆ ನೀಡಿದರೂ ಒಬ್ಬ ವೈದ್ಯರೂ ಅರ್ಜಿ ಹಾಕಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಮೇರೆಗೆ . ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ಆಸ್ಪತ್ರೆ ಗಳಿಗೆ ಆಯುರ್ವೇದ ವೈದ್ಯರನ್ನು ತುಂಬಲು ಅರ್ಜಿ ಆಹ್ವಾನಿಸಿ, 151 ಮಂದಿ ಆಯ್ಕೆಯಾಗಿದ್ದರು. ನಂತರ ಸಂದರ್ಶನಕ್ಕೆ ಕರೆದಾಗ 7 ಆಸ್ಪತ್ರೆಗೆ ಒಬ್ಬರು ಮಾತ್ರ ಒಪ್ಪಿಗೆ ನೀಡಿ ಕರ್ತವ್ಯಕ್ಕೆ ಹಾಜರಾಗಿದ್ದರು.

ಆಯುರ್ವೇದ ವೈದ್ಯರಿಗೂ ಎಂಬಿಬಿಎಸ್ ವೈದ್ಯರಿಗೆ ಸಿಗುವ ವೇತನ, ಇನ್ನಿತರ ಸೌಲಭ್ಯ ನೀಡಿದರೂ ಗ್ರಾಮೀಣ ಪ್ರದೇಶ ಎನ್ನುವ ಕಾರಣಕ್ಕಾಗಿ ದೂರ ಉಳಿಯುತ್ತಿದ್ದಾರೆ. ಇದರಿಂದ ಇರುವ ವೈದ್ಯರ ಮೇಲೆ ಒತ್ತಡ ಹೆಚ್ಚಿದ್ದು , ಒಬ್ಬೊಬ್ಬರು 2-3 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಮಾಡಬೇಕಿದೆ. ಇನ್ನಾದರೂ ಪ್ರಜ್ಞಾವಂತಹ ವೈದ್ಯರು ಇಂತಹ ಕೆಲಸಗಳತ್ತ ಮುಖ ಮಾಡಬೇಕೆಂಬುದೇ ನಮ್ಮ ಅಭಿಲಾಷೆ.












Click it and Unblock the Notifications