ಮೈಸೂರು: ಮದಗಜಗಳ ಕಾಳಗಕ್ಕೆ ರಂಗೇರಿತ್ತು ಕುಸ್ತಿ ಅಖಾಡ
ಮೈಸೂರು, ಆಗಸ್ಟ್ 29: ಸುತ್ತಲೂ ಕುಸ್ತಿ ಪ್ರಿಯರು ಬಿಟ್ಟ ಕಣ್ಣು ಬಿಟ್ಟಂತೆ ನೋಡು ತ್ತಿದ್ದರೆ ಕೆಮ್ಮಣ್ಣಿನ ಅಖಾಡಕ್ಕೆ ಧುಮುಕಿದ ಜಗಜಟ್ಟಿಗಳು ಅಖಾಡದ ಮಣ್ಣನ್ನು ಮೈಗೆ ಬಳಿದುಕೊಂಡು, ತೊಡೆ ತಟ್ಟಿ ಮದ ಗಜಗಳಂತೆ ಕಾದಾಡಿದರು... ಒಬ್ಬರಿಗೊಬ್ಬರು ಜಿದ್ದಾಜಿದ್ದಿಗೆ ಬಿದ್ದು ಹೋರಾಡಿದರು.
ಹೌದು, ದಿವಂಗತ ಡಿ.ದೇವರಾಜ ಅರಸು 102ನೇ ಜನ್ಮ ದಿನೋತ್ಸವದ ಪ್ರಯುಕ್ತ ಆಗಸ್ಟ್ 27ರರಂದು ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿರುವ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ 30 ಜೋಡಿ ನಾಡಕುಸ್ತಿ ಪಂದ್ಯಾವಳಿಯಲ್ಲಿ ಕುಸ್ತಿ ಪಟುಗಳು ಸೋಲು-ಗೆಲುವನ್ನು ಲೆಕ್ಕಿಸದೇ ಕಾದಾಡಿ ನೆರೆದಿದ್ದವರನ್ನು ರಂಜಿಸಿದರು.

ಕೊಲ್ಲಾಪುರದ ಪೈ.ಸಂತೋಷ್ ಧರೋಡ್ ಹಾಗೂ ಜರ್ಜರ್ ನ ಹರಿಯಾಣ ಕೇಸರಿ ಪೈ.ಸುನೀಲ್ ಚೋಟಿಯಾಲರ ನಡುವೆ ನಡೆದ 1 ಗಂಟೆಗಳ ಕುಸ್ತಿ ಪಂದ್ಯಾವಳಿ ಅಕ್ಷರಶಃ ಮದಗಜಗಳ ಕಾಳಗವನ್ನೇ ಕಣ್ಣಿಗೆ ಕಟ್ಟಿಕೊಟ್ಟಿತು. ಸತತ 60 ನಿಮಿಷಗಳ ಈ ಕುಸ್ತಿಯಲ್ಲಿ ಒಬ್ಬೊರಿಗೊಬ್ಬರು ತೋಳು- ತೊಡೆಗಳನ್ನು ತಟ್ಟಿ ಕಾಲು ಕೆರೆದು ಕಾಳಗ ನಡೆಸಿದರು. ಇವರಿಬ್ಬರ ನಡುವಿನ ಪಂದ್ಯ ಕೊನೆಗೂ ಸಮಬಲದಲ್ಲಿ ಅಂತ್ಯಗೊಂಡಿತು.

ನಾಥಪಲ್ವೆ ಜತೆ ಮಾರ್ಫಿಟ್ ಕುಸ್ತಿ ನಡೆಸಿದ ಪುಣೆಯ ಪೈ.ರವಿ ಯಾದವ್ ಜಯದ ಪತಾಕೆ ಹಾರಿಸಿದರು. ಮತ್ತೊಂದು ಮಾರ್ಫಿಟ್ ಕುಸ್ತಿಯಲ್ಲಿ ಕೊಲ್ಲಾಪುರದ ಮಹಾನ್ ಭಾರತ್ ಕೇಸರಿ ಪೈ.ಯೋಗೇಶ್ ಬೊಂಬಾಳೆ ಹಾಗೂ ಡೆಲ್ಲಿಯ ಅಮಿತ್ಕುಮಾರ್ ಸೆಣಸಾಟ ಕೊನೆಗೂ ಸಮಬಲದಲ್ಲಿ ಅಂತ್ಯಗೊಂಡಿತು.

ಕುಸ್ತಿ ಪ್ರಿಯರು ಕೂಗು, ಶಿಳ್ಳೆ, ಚಪ್ಪಾಳೆಗಳ ಮೂಲಕ ಕುಸ್ತಿಪಟುಗಳನ್ನು ಹುರಿದುಂಬಿಸಿದರು. ಇಟ್ಟಿಗೆಗೂಡಿನ ಚಂದನ್ಗೆ ಅತ್ಯುತ್ತಮ ಕುಸ್ತಿಪಟು ಎಂಬ ಬಿರುದು ನೀಡಿ ಬೆಳ್ಳಿಗದೆಯನ್ನು ಬಹುಮಾನವಾಗಿ ನೀಡಲಾಯಿತು.












Click it and Unblock the Notifications