ರಾಜವೈಭೋಗದ ಯದುವೀರ್ ಮದುವೆಗೆ ಅರಮನೆ ಸನ್ನದ್ಧ!
ಮೈಸೂರು, ಜೂನ್ 24 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲೆಲ್ಲೂ ರಾಜಮನೆತನದ ಕುಡಿಗಳಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಸಿಂಗ್ ಅವರ ರಾಜವೈಭೋಗದ ಮದುವೆಯ ಮಾತುಗಳು ಕೇಳಿಬರುತ್ತಿವೆ. ಈ ಸಡಗರ ಮೈಸೂರಿಗೇ ವಿಶಿಷ್ಟ ಕಳೆ ತಂದಿದೆ.
ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ರಾಜಮಾತೆ ಪ್ರಮೋದಾ ದೇವಿ ಅವರ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಸ್ತಾನ ಡುಂಗರಾಪುರ ರಾಜಮನೆತನದ ಹರ್ಷವರ್ಧನಸಿಂಗ್ ಮತ್ತು ಮಹೇಶ್ರೀ ಕುಮಾರಿ ದಂಪತಿಯ ಕಿರಿಯ ಪುತ್ರಿ ತ್ರಿಷಿಕಾಕುಮಾರಿ ಅವರು ಜೂನ್ 27ರಂದು ಸತಿಪತಿಗಳಾಗಲಿದ್ದಾರೆ. [ಅರಮನೆಯಲ್ಲಿ ಯದುವೀರ್ ವಿವಾಹ ಸಂಭ್ರಮ ಆರಂಭ]

ರಾಜಮನೆತನದ ಮದುವೆಗಳು ಹೇಗೆ ಇರಬಹುದೆಂಬ ಕಲ್ಪನೆ, ಕುತೂಹಲ ಎಲ್ಲರನ್ನು ಕಾಡುತ್ತಿವೆ. ಅತ್ತ ವಿವಾಹಕ್ಕೆ ಅರಮನೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಅರಮನೆ ಆವರಣದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಆಗಮಿಸುವ ಕಾರಣ ಎಲ್ಲರಿಗೂ ಆಸನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
ವಿಐಪಿಗಳಿಗಾಗಿ ಕೆಂಪು ನೆಲಹಾಸು : ಮೈಸೂರಿನಲ್ಲಿ ಮಳೆ ಮೋಡ ಮತ್ತು ಮಳೆ ಬರುವ ಲಕ್ಷಣಗಳು ಇರುವುದರಿಂದ ವಾಟರ್ ಪ್ರೂಫ್ನ ಪೆಂಡಾಲ್ನ್ನು ಹಾಕಲಾಗಿದೆ. ಗಣ್ಯರಿಗೆ ಆಸೀನರಾಗಲು ಮತ್ತು ಊಟಕ್ಕೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸುಮಾರು 60X10 ಮೀ. ಸುತ್ತಳತೆಯ ಎರಡು ಮತ್ತು 40X40 ಮೀ. ಸುತ್ತಳತೆಯ ಒಂದು ಔತಣಕೂಟದ ವಾಟರ್ ಪ್ರೂಫ್ ಅಳತೆಯ ಪೆಂಡಾಲ್ನ್ನು ನಿರ್ಮಿಸಲಾಗಿದೆ. ರೆಡ್ ಕಾರ್ಪೆಟ್ನ ನೆಲಹಾಸು ಗಣ್ಯರನ್ನು ಸ್ವಾಗತಿಸಲು ಸಿದ್ಧವಾಗಿದೆ. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]

ಅರಮನೆ ಮುಂಭಾಗ ಚಪ್ಪರ ಹಾಕಿ, ಶಾಮಿಯಾನವನ್ನು ಹಾಕಲಾಗಿದೆ. ದೇಶ-ವಿದೇಶದಿಂದ ಆಗಮಿಸುವ ಗಣ್ಯರನ್ನು ಸ್ವಾಗತಿಸಲು ವ್ಯವಸ್ಥೆ ಮಾಡಲಾಗಿದೆ. ಅರಮನೆಯ ಮುಂಭಾಗ ಆನೆ ಬಾಗಿಲು ದ್ವಾರದ ಬಳಿ ಮದುವೆಗೆ ಮುನ್ನ ನಡೆಯುವ ಸ್ತಂಭ ಮುಹೂರ್ತಕ್ಕೆ ಚಪ್ಪರವನ್ನು ಹಾಕಲಾಗಿದೆ.
ಒಡೆಯರ್ ನಿವಾಸದ ಮುಂಭಾಗ ಆಕರ್ಷಕ ಬೃಹತ್ ಶಾಮಿಯಾನಾ ಹಾಕಲಾಗಿದ್ದು, ಎಲ್ಲ ವ್ಯವಸ್ಥೆಗಳಲ್ಲಿ ಅಚ್ಚುಕಟ್ಟುತನ ಎದ್ದುಕಾಣುತ್ತಿದೆ. ಮದುವೆಗೆ ಸುಮಾರು 2 ಸಾವಿರ ಗಣ್ಯಾತಿಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. [ಯದುವೀರ್-ತ್ರಿಷಿಕಾ ವಿವಾಹಕ್ಕೆ ಮೈಸೂರು ಅರಮನೆ ಸಿಂಗಾರ]

ಪುಷ್ಕಳ ಭೋಜನ : ದಕ್ಷಿಣ ಭಾರತದ ಆಹಾರ ಪದ್ಧತಿಯಂತೆ ಅಡುಗೆಯನ್ನು ಮಾಡಲಾಗುತ್ತಿದ್ದು, ಪ್ರತಿದಿನ ಜಾಹಾಂಗೀರ್, ಮೈಸೂರ್ ಪಾಕ್, ಎರಡು ಸಿಹಿ ಪಾಯಸ, ಎರಡು ತರಹದ ಪಲ್ಯ, ರಸಂ, ಸಾಂಬಾರ್, ಹಳೇ ಮೈಸೂರು ಪ್ರಾಂತ್ಯದ ಸಂಪ್ರದಾಯಿಕ ಅಡುಗೆಗಳನ್ನು ಮಾಡಿ ಬಡಿಸಲು ಬಾಣಸಿಗರು ಸಿದ್ದರಾಗಿದ್ದಾರೆ.
ಗಣ್ಯರಿಗೆ ಆದರಾತಿಥ್ಯ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟಾರೆ ರಾಜವೈಭವದಲ್ಲಿ ನಡೆಯಲಿರುವ ವಿವಾಹಕ್ಕೆ ಅಂತಿಮ ಸಿದ್ಧತೆಗಳು ಮುಗಿದಿವೆ. ಮಾಧ್ಯಮದವರಿಗೆ ಜೂ.27 ಮತ್ತು 28ರಂದು ಮಾತ್ರ ಪ್ರವೇಶ ನೀಡಲಾಗಿದೆ. ಎಲ್ಲೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.












Click it and Unblock the Notifications