ಕಾವಾಡಿ-ಮಾವುತರ ಮಕ್ಕಳಿಗಾಗಿ ನಡೆಯುತ್ತಿದೆ ಟೆಂಟ್ ಶಾಲೆ
ಮೈಸೂರು, ಸೆಪ್ಟೆಂಬರ್ 27: ಮೈಸೂರು ದಸರಾ ಎಂದರೆ ಹಲವು ವೈಶಿಷ್ಟ್ಯಗಳ ಮಹಾಸಂಭ್ರಮ. ಅದರಲ್ಲೂ ಜಂಬೂ ಸವಾರಿ ದಸರಾದ ಪ್ರಮುಖ ಆಕರ್ಷಣೆ. ಈ ಜಂಬೂಸವಾರಿಗೆ ಗಜಪಡೆಯೊಂದಿಗೆ ಕಾವಾಡಿ, ಮಾವುತರ ಕುಟುಂಬ ಮೈಸೂರು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವುದರೊಂದಿಗೆ ಆನೆಗಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಳ್ಳುತ್ತದೆ.
ಇಡೀ ಕುಟುಂಬವೇ ಆನೆಯೊಂದಿಗೆ ಬರುವುದರಿಂದ ಕುಟುಂಬದ ಮಕ್ಕಳು ಶಾಲೆಯಿಂದ ವಂಚಿತರಾಗುತ್ತಾರೆ. ಇದನ್ನು ತಡೆಯುವ ಸಲುವಾಗಿಯೇ ಮಾವುತ ಮತ್ತು ಕಾವಾಡಿ ಮಕ್ಕಳಿಗೆ ಟೆಂಟ್ ಶಾಲೆ ತೆರೆದು ಪಾಠ ಪ್ರವಚನ ಮಾಡುವುದು ಕಳೆದೊಂದು ದಶಕದಿಂದ ನಡೆದುಕೊಂಡು ಬಂದಿದೆ. ಈ ಬಾರಿಯೂ ಟೆಂಟ್ ಶಾಲೆಯಲ್ಲಿ ಶಿಕ್ಷಕರನ್ನು ನೇಮಿಸಿ ಪಾಠ ಹೇಳಿಕೊಡುವ ಕೆಲಸ ಮಾಡಲಾಗುತ್ತಿದೆ. ಹೆತ್ತವರು ಆನೆಗಳ ಆರೈಕೆಯಲ್ಲಿ ತೊಡಗಿಸಿಕೊಂಡರೆ, ಮಕ್ಕಳು ಆಟಪಾಠದೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಾರೆ.
ಕಾಡಿನಿಂದ ಬಂದ ಮಕ್ಕಳಿಗೆ ಟೆಂಟ್ ಶಾಲೆ ಹೊಸ ಅನುಭವ ನೀಡುತ್ತಿದೆ. ಡಿಜಿಟಲ್ ತಂತ್ರಜ್ಞಾನದೊಂದಿಗೆ ಚಿತ್ರ ಸಹಿತ ಕಲಿಕೆಗೆ ಒತ್ತು ನೀಡಲಾಗಿದೆ. ಇಲ್ಲಿ ಎಲ್ಲಾ ರೀತಿಯ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ತಾತ್ಕಾಲಿಕ ಟೆಂಟ್ ಶಾಲೆ ದಸರಾ ಕಳೆಯುವ ತನಕವೂ ಅರಮನೆ ಆವರಣದಲ್ಲಿ ನಡೆಯುತ್ತದೆ.

ಶಾಲೆಯಲ್ಲಿ ಕಥೆ ಹೇಳುವುದು, ಪುಸ್ತಕಗಳ ಪರಿಚಯ, ಚಿತ್ರ ಪುಸ್ತಕಗಳು, ದಿನಪತ್ರಿಕೆಗಳನ್ನು ಓದುವುದು, ಪುಸ್ತಕ ಓದುವ ಕೌಶಲ, ಕವಿತೆ ಓದುವುದು, ನಾಟಕಗಳ ಪರಿಚಯ, ಪ್ರಸಿದ್ಧ ಜನರ ಪರಿಚಯ, ವನ್ಯಜೀವಿಗಳ ಕುರಿತ ಪುಸ್ತಕಗಳ ಅರಿವು, ಪ್ರಬಂಧ ವಿಜ್ಞಾನಿ, ಪ್ರಾಥಮಿಕ ಗಣಿತ ಮೊದಲಾದ ವಿಷಯಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಪಠ್ಯೇತರ ಚಟುವಟಿಕೆಯನ್ನೂ ನಡೆಸಲಾಗುತ್ತದೆ. ಕಾಡಿನಲ್ಲಿ ಆನೆ ಶಿಬಿರಗಳಲ್ಲಿದ್ದುಕೊಂಡು ಸ್ಥಳೀಯ ಶಾಲೆಗಳಿಗೆ ಹೋಗಿ ಕಲಿಯುವ ಈ ಮಕ್ಕಳಿಗೆ ಟೆಂಟ್ ಶಾಲೆ ಹೊಸ ಅನುಭವ ನೀಡುತ್ತಿದೆ.












Click it and Unblock the Notifications