ಕ್ರಿಕೆಟ್ ಮೈದಾನದಲ್ಲಿ ಆಟವಾಡಿದ ಮೈಸೂರು ಡಿಸಿ, ಎಸ್ಪಿ !
ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ನಗರ ಪೊಲೀಸರ ನಡುವೆ ಶನಿವಾರ (ಜುಲೈ 8) ಆಯೋಜಿಸಿದ್ದ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾಡಳಿತದ ವಿರುದ್ಧ ಪೊಲೀಸ್ ಆಯುಕ್ತರ ತಂಡ ಜಯ ಗಳಿಸಿದೆ.
ಮೈಸೂರು, ಜುಲೈ 8: ಸದಾ ಬ್ಯುಸಿಯಾಗಿ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿದ್ದ ನಮ್ಮ ಮೈಸೂರು ಜಿಲ್ಲಾಧಿಕಾರಿಗಳು ಇವತ್ತು ಬ್ಯಾಟ್ ಹಿಡಿದಿದ್ದರೂ, ಇತ್ತ ಯಾವಗಲೂ ಕ್ರೈಂ, ಕಳ್ಳತನ, ಕೊಲೆ ಅಂತಾನೇ ತಲೆ ಕೆಡಿಕೊಳ್ಳುತ್ತಿದ್ದ ನಮ್ಮ ಪೊಲೀಸ್ ಆಯುಕ್ತರು ಸಹ ಬಾಲ್ ಹಿಡಿದು ಕ್ರಿಕೆಟ್ ಮೈದಾನಲ್ಲಿ ಆಟವಾಡುತ್ತಿದ್ದರು. ಅರೇ, ಇದೇನಿದು ಅಂತಾ ಹೌಹಾರಬೇಡಿ.
ಹೌದು , ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ನಗರ ಪೊಲೀಸರ ನಡುವೆ ಶನಿವಾರ ಗಂಗೋತ್ರಿ ಗ್ಲೇಡ್ಸ್ ಕ್ರಿಕೆಟ್ ಮೈದಾನದಲ್ಲಿ ಸ್ನೇಹಪೂರ್ವಕವಾಗಿ ಆಯೋಜಿಸಿದ್ದ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲಾಡಳಿತದ ವಿರುದ್ಧ ಪೊಲೀಸ್ ಆಯುಕ್ತರ ತಂಡ ಒಂದು ರನ್ಗಳ ರೋಚಕ ಗೆಲುವು ಸಾಧಿಸಿ ಗೆಲುವಿನ ನಗೆ ಬೀರಿದೆ.
ಪೊಲೀಸ್ ಆಯುಕ್ತರ ತಂಡದಲ್ಲಿ 39 ರನ್ಗಳಿಸಿದ ಪೊಲೀಸ್ ನಿಸ್ತಂತು ವಿಭಾಗದ ಇನ್ಸ್ಪೆಕ್ಟರ್ ಹರ್ಷ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಆಗಿ ಮೆಚ್ಚುಗೆ ಪಡೆದರು.
(ಚಿತ್ರಕೃಪೆ: ನಂದನ್ .ಎ)

20 ಓವರ್ ಗಳಲ್ಲಿ 148 ರನ್
ಮೊದಲು ಬ್ಯಾಟಿಂಗ್ ಮಾಡಿದ ಪೊಲೀಸ್ ಆಯುಕ್ತರ ತಂಡ ನಿಗದಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ, ಸವಾಲಿನ ಮೊತ್ತವನ್ನು ಜಿಲ್ಲಾಧಿಕಾರಿಗಳ ತಂಡಕ್ಕೆ ನೀಡಿದರು.

ಆಟಕ್ಕೆ ಮಳೆ ಅಡ್ಡಿ
ಗುರಿ ಬೆನ್ನತ್ತಿದ ಜಿಲ್ಲಾಧಿಕಾರಿಗಳ ತಂಡ 16ನೇ ಓವರ್ನಲ್ಲಿ ಆಟವಾಡುವಾಗ ಮಳೆ ಬಂದು ಆಟ ಸ್ಥಗಿತಗೊಂಡಿತು. ಆಗ ತಂಡದ ಮೊತ್ತ 103 ರನ್ಗಳಾಗಿತ್ತು.

ಪೊಲೀಸ್ ಆಯುಕ್ತರ ತಂಡದ ಗೆಲುವು
ಮಳೆಯಿಂದ ಅಂಗಳ ಒದ್ದೆಯಾದ್ದರಿಂದ ಅಂಪೈರ್ಗಳು ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪೊಲೀಸ್ ಆಯುಕ್ತರ ತಂಡ ಗೆಲವು ಸಾಧಿಸಿದೆ ಎಂದು ಘೋಷಿಸಿದರು.

ಮಳೆಯಿಂದಾಗಿ ಬಂತು ವಿಜಯ
15.2 ಓವರ್ಗಳಲ್ಲಿ ಜಿಲ್ಲಾಧಿಕಾರಿಗಳ ತಂಡ 103 ರನ್ ಗಳಿಸಿದ್ದು, ಇದೇ ಪರಿಸ್ಥಿತಿಯಲ್ಲಿ ಪೊಲೀಸ್ ಆಯುಕ್ತರ ತಂಡ 104 ರನ್ ಗಳಿಸಿದ್ದರಿಂದ ೧ ರನ್ಗಳ ಜಯ ಸಾಧಿಸಿತು.

ಅತ್ಯುತ್ತಮ ಬೌಲರ್ ಗೌರವ
ಜಿಲ್ಲಾಧಿಕಾರಿಗಳ ತಂಡದಲ್ಲಿ 4 ಓವರ್ಗಳಲ್ಲಿ 26 ರನ್ಗಳನ್ನು ನೀಡಿ, 3 ವಿಕೆಟ್ ಪಡೆದ ಕೃಷಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅತ್ಯುತ್ತಮ ಬೌಲರ್ ಆಗಿ ಮಿಂಚಿದರು.












Click it and Unblock the Notifications