ರೈತರ ಆತ್ಮಹತ್ಯೆ ಬಗ್ಗೆ ಹೇಳಿಕೆ; ಮತ್ತೆ ಸುದ್ದಿಯಾದ ಬಿ. ಸಿ. ಪಾಟೀಲ್!
ಮೈಸೂರು, ಜನವರಿ 19: "ಕೆಲ ಸಂದರ್ಭದಲ್ಲಿ ರೈತರು ದುರ್ಬಲ ಮನಸ್ಥಿತಿಯವರಾದಾಗ ಆತ್ಮಹತ್ಯೆ ನಿರ್ಧಾರ ಮಾಡುತ್ತಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಕೇವಲ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳೋದಿಲ್ಲ, ಉದ್ಯಮಿಗಳೂ ಮಾಡಿಕೊಳ್ಳುತ್ತಾರೆ" ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಸಚಿವರು, "ರೈತರಷ್ಟೇ ಅಲ್ಲ, ಉದ್ಯಮಿಗಳೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ" ಎಂದು ಹೇಳಿದರು. ರೈತರ ಆತ್ಮಹತ್ಯೆ ವಿಚಾರದಲ್ಲಿ ಡಿಸೆಂಬರ್ನಲ್ಲಿ ಸಚಿವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
"ರೈತರ ಆತ್ಮಹತ್ಯೆ ತಡೆಗಟ್ಟಲೆಂದು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿ ಸಾಂತ್ವನ ಹೇಳಿದರೆ ಆತ್ಮಹತ್ಯೆ ನಿಲ್ಲುವುದಿಲ್ಲ. ಅದಕ್ಕೆ ಕಾರ್ಯಕ್ರಮ ಹಾಕಿಕೊಂಡಿದ್ದು ತರಬೇತಿ ನೀಡಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕಿದೆ" ಎಂದು ಸಚಿವರು ತಿಳಿಸಿದರು.

ಮುಖ್ಯಮಂತ್ರಿಗಳ ವಿಚೇಚನೆ; "ಜನವರಿ 26ರಂದು ನಡೆಯುವ ರೈತರ ಟ್ಯ್ರಾಕ್ಟರ್ ರ್ಯಾಲಿಗೆ ಅನುಮತಿ ನೀಡುವುದು ಸಿಎಂ ಹಾಗೂ ಗೃಹ ಸಚಿವರ ವಿವೇಚನೆಗೆ ಬಿಟ್ಟದ್ದು" ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
"ದೆಹಲಿಯ ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯದಲ್ಲೂ ಹೋರಾಟ ನಡೆಸುವ ರೈತರಿಗೆ ಅನುಮತಿ ನೀಡುವುದನ್ನು ಸಿಎಂ ಹಾಗೂ ಗೃಹ ಸಚಿವರು ನಿರ್ಧರಿಸುತ್ತಾರೆ" ಎಂದು ಸಚಿವರು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ; "ಬಿ. ಎಸ್ ಯಡಿಯೂರಪ್ಪ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡಲು ನ್ಯಾಯಾಲಯದ ಅಡ್ಡಿ ಇದೆ. ಅವರು ಹಿರಿಯರಿದ್ದಾರೆ, ಅರ್ಥ ಮಾಡಿಕೊಳ್ಳಬೇಕು ಮನ ಬಂದಂತೆ ಮಾತನಾಡಬಾರದು" ಎಂದರು.












Click it and Unblock the Notifications