'ಫಲಿತಾಂಶ ಬರುವ ಮುನ್ನವೇ ಮೈತ್ರಿ ಸರ್ಕಾರ ಪತನಗೊಂಡರೆ ಆಶ್ಚರ್ಯವಿಲ್ಲ'
ಮೈಸೂರು, ಏಪ್ರಿಲ್ 7: ಜೆಡಿಎಸ್- ಕಾಂಗ್ರೆಸ್ ನ ಹಲವು ಕಾರ್ಯಕರ್ತರಿಗೆ ಮೈತ್ರಿ ಸರ್ಕಾರದ ಬಗ್ಗೆ ಸಮ್ಮತವಿಲ್ಲ. ಹಾಗಾಗಿ ಚುನಾವಣೆ ಬಳಿಕ ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಪತನವಾಗುತ್ತದೆ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಆದರೆ ಎಲ್ಲೂ ಹೊಂದಾಣಿಕೆ ಎಂಬುದೇ ಕಾಣಸಿಗುತ್ತಿಲ್ಲ. ಅಧಿಕಾರಕ್ಕಾಗಿ ನಾಯಕರು ಹೊಂದಾಣಿಕೆ ಮಾಡಿಕೊಂಡರೇ ವಿನಃ ಕಾರ್ಯಕರ್ತರ ನಡುವೆ ಇನ್ನು ಒಮ್ಮತ ಮೂಡಿಲ್ಲ. ಆದ್ದರಿಂದಲೇ ಮೈತ್ರಿ ಸಭೆಗಳಲ್ಲಿ ಈ ಭಿನ್ನಮತ ಎದ್ದು ಕಾಣುತ್ತಿದೆ. ಚುನಾವಣೆ ಬಳಿಕ ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಪತನವಾಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆಗೆ ಒಳಗಾಗಿದ್ದಾರೆ. ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಲೆಕ್ಕಕ್ಕಿಲ್ಲ. ಈ ಚುನಾವಣೆ ಮುಗಿದ ನಂತರ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಲಿದೆ.ಫಲಿತಾಂಶ ಬರುವ ಮುನ್ನವೇ ಮೈತ್ರಿ ಸರಕಾರ ಪತನಗೊಂಡರು ಆಶ್ಚರ್ಯವಿಲ್ಲ ಎಂದರು.

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುವುದು ಮಗ್ಗಿ ಪುಸ್ತಕ, ಪಠ್ಯ ಪುಸ್ತಕ ಅಲ್ಲ. ಸಂವಿಧಾನದ ಬಗ್ಗೆ ಮಾತನಾಡುವಾಗ ಯಾರೇ ಆಗಲಿ ಎಚ್ಚರಿಕೆಯಿಂದ ಮಾತನಾಡಬೇಕು. ಸಂವಿಧಾನದ ಮೂಲ ಆಶಯವನ್ನು ಬದಲಾವಣೆ ಮಾಡಲು ಲೋಕಸಭೆಗೂ ಅಧಿಕಾರ ಇಲ್ಲ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಅಷ್ಟು ಸುಲಭವಾಗಿ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಗೆದ್ದ ಮೇಲೆ ಅವರೇ ಹೇಳಿದ್ದಾರೆ. ಸಂವಿಧಾನ ಸರ್ವಶ್ರೇಷ್ಠವಾದದ್ದು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪರಿವಾರ ತಳವಾರವನ್ನ ಎಸ್ಟಿಗೆ ಸೇರುವ ಸಂಬಂಧ ನಾವು ಸಂಸದರಾಗಿ ಆಯ್ಕೆಯಾದ ನಂತರ ಮಾಡಿದ ಮೊದಲ ಕೆಲಸ. ನಾನು ಮತ್ತು ಶ್ರೀರಾಮುಲು ಇದನ್ನು ಗಂಭೀರವಾಗಿ ಪರಿಗಣಿಸಿದ್ದೆವು. ಮುಂದಿನ ಅಧಿವೇಶದಲ್ಲಿ ರಾಜ್ಯಸಭೆ ಅಂಗೀಕಾರ ಪಡೆದು ಗೆಜೆಟ್ ನೋಟಿಫಿಕೇಶನ್ ಮೂಲಕ ಜಾರಿಗೆ ತರುತ್ತೇವೆ ಎಂದರು.












Click it and Unblock the Notifications